ತುಮಕೂರು: ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಇದರ ನಡುವೆ ಕೆ ಎನ್ ರಾಜಣ್ಣ ಇದೇ ಮತಗಳ್ಳತನದ ವಿಚಾರಕ್ಕೆ ನಮ್ಮದು ತಪ್ಪಿದೆ ಎಂಬ ಮಾತನ್ನ ಹೇಳಿ ತಮ್ಮದೇ ತಲೆ ದಂಡ ಮಾಡಿಕೊಂಡಿದ್ದರು. ಹೈಕಮಾಂಡ್ ಆಜ್ಞೆ ಮೇರೆಗೆ ಅವರನ್ನ ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ. ಇದೀಗ ರಾಜಣ್ಣ ಅವರನ್ನ ಮತ್ತೆ ಸಂಪುಟಕ್ಕೆ ಕರೆಸಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇದ್ದಾರೆ. ಅದಕ್ಕಾಗಿ ದೆಹಲಿಯಲ್ಲಿ ಹೋರಾಟ ನಡೆಸುವುದಕ್ಕೆ ತಯಾರಿ ನಡೆಸಿದ್ದಾರೆ.
ಮಧುಗಿರಿ ಮತ್ತು ತುಮಕೂರಿನ ರಾಜಣ್ಣ ಅವರ ಅಭಿಮಾನಿಗಳು ದೆಹಲಿಗೆ ಹೋಗುವ ತಯಾರಿ ನಡೆಸಿದ್ದಾರೆ. ನಮ್ಮ ಹಿಂದುಳಿದ ನಾಯಕ ಕೆ ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಮೇಲೆ ರಾಜ್ಯಾದ್ಯಂತ ಹೋರಾಟವನ್ನ ಮಾಡಿದ್ದೇವೆ. ತುಮಕೂರು ಜಿಲ್ಲೆಯಿಂದ ದೆಹಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ. ರಾಜಣ್ಣನ ಬೆಂಬಲಿಗರು, ಹಲವು ಸಂಘ ಸಂಸ್ಥೆಗಳಿಂದ, ರೈತರಿಂದೆಲ್ಲಾ ಈ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಎಂಟರಿಂದ ಹತ್ತು ಸಾವಿರ ಮಂದಿ ಹೋರಾಟದಲ್ಲಿ ಭಾಗಿಯಾಗಲಿದ್ದೇವೆ.
ಜಂಥರ್ ಮಂಥರ್ ನಲ್ಲಿ ಎಲ್ಲರೂ ಸೇರಿ ಹೀರಾಟವನ್ನು ಮಾಡುತ್ತೇವೆ. ಮತ್ತೆ ರಾಜಣ್ಣ ಅವರನ್ನು ಸಂಪುಟಕ್ಕೆ ಕರೆತರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಕೆ ಎನ್ ರಾಜಣ್ಣ ಅವರು ಸಹಕಾರಿ ಸಚಿವರಾಗಿದ್ದರು. ಆದರೆ ಅವರು ಹೇಳಿದ ಒಂದು ಮಾತು ಅವರ ಅಧಿಕಾರಕ್ಕೇನೆ ಕುತ್ತು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಯತ್ನ ಪಟ್ಟರು, ಹೈಕಮಾಂಡ್ ನಿರ್ಧಾರವನ್ನು ಬದಲಿಸಲಿಲ್ಲ ಎಂಬ ಮಾತಿದೆ. ಸದ್ಯ ಸಚಿವ ಸಂಪುಟದಿಂದ ವಜಾಗೊಂಡಿರುವ ಕೆಎನ್ ರಾಜಣ್ಣ ಮತ್ತೆ ಸಂಪುಟ ಸೇರ್ತಾರಾ ನೋಡಬೇಕಿದೆ.










