ಚಿತ್ರದುರ್ಗ: ಸಚಿವ ಡಿ ಸುಧಾಕರ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಇದರ ನಡುವೆ ಕುಮಾರಸ್ವಾಮಿ ಅವರು ಒಂದು ಮಾತು ಹೇಳಿದ್ದರು. ಸುಧಾಕರ್ ಅವರ ಆರೋಗ್ಯದ ವಿಚಾರದಲ್ಲಿ ಎಲ್ಲವನ್ನು ಮುಚ್ಚಿಡಲಾಗುತ್ತಿದೆ. ಹೆಬ್ಬೆಟ್ಟು ಒತ್ತಿಸಿಕೊಳ್ಳುವುದಕ್ಕೆ ಎಂದಿದ್ದರು. ಈ ಬಗ್ಗೆ ಸಚಿವ ಸುಧಾಕರ್ ಅವರ ಪುತ್ರ ಬೇಸರ ಮಾಡಿಕೊಂಡಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್, ಹೆಬ್ಬೆಟ್ಟು ಬಳಕೆ ಬಗ್ಗೆ ಹೆಚ್ಡಿಕೆ ಹೇಳಿಕೆ ತುಂಬಾ ನೋವಾಗಿದೆ. ನಮ್ಮ ತಂದೆಯ ಅನಾರೋಗ್ಯ ವಿಚಾರ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡಿದ್ದು, ತುಂಬಾ ನೋವಾಗಿದೆ. ನಮ್ಮ ತಂದೆ ಚಿಕಿತ್ಸೆಗೆ ಸ್ಪಂದಿಸ್ತಾನಿದ್ದಾರೆ. ಬೇಗ ಗುಣಮುಖರಾಗಿ ಬರುವ ನಂಬಿಕೆ ಇದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಮಂತ್ರಿಗಳು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಬೇಗ ಗುಣಮುಖರಾಗಲಿ ಎಂದಿದ್ದಾರೆ ಸುಹಾಸ್.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇತ್ತೀಚೆಗೆ ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಸುಧಾಕರ್ ಅವರ ಆರೋಗ್ಯದ ಮಾತನ್ನಾಡಿದ್ದರು. ಸುಧಾಕರ್ ಅವರು ಸಾವು ಬದುಕಿನ ನಡುವೆ ಹೋರಾಟ ಮಾಡ್ತಾ ಇದ್ದಾರೆ. ಆದರೆ ಆಸ್ಪತ್ರೆಯ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕಿದೆ. ಆ ವ್ಯಕ್ತಿ ಎಷ್ಟು ನೋವನ್ನ ಅನುಭವಿಸ್ತಿದ್ದಾನೋ ಏನೋ ಯಾವ ಕಟರಣಕ್ಕೆ ಕೆಲವೊಂದು ವಿಚಾರಗಳನ್ನ ಮುಚ್ಚಿಟ್ಟಿದ್ದಾರೆ ಎಂಬುದನ್ನ ಅರಿಯಬೇಕಿದೆ. ಆ ವ್ಯಕ್ತಿಯಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಡಲಾಗಿದೆಯೇ..? ಎಂಬ ವಿಚಾರಕ್ಕೆ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಅವರ ಮಗ ಬೇಸರ ಮಾಡಿಕೊಂಡಿದ್ದಾರೆ.



















