ಸುದ್ದಿಒನ್, ಚಿತ್ರದುರ್ಗ: “ದೈಹಿಕ ಆರೋಗ್ಯ ಸದೃಢವಾಗಿದ್ದರೆ ಮಾತ್ರ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ ಇಂದಿನ ಹೈಬ್ರಿಡ್ ಜೀವನಶೈಲಿಯಿಂದಾಗಿ ಯುವಜನತೆಯಲ್ಲಿ ದೈಹಿಕ ಮತ್ತು ಮಾನಸಿಕ ಸ್ಥಿರತೆ ಹದಗೆಡುತ್ತಿರುವುದು ಆತಂಕಕಾರಿ ವಿಷಯ,” ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಣ್ಣ ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ‘ದೈಹಿಕ ಮತ್ತು ಮಾನಸಿಕ ಆರೋಗ್ಯ’ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದಲಾದ ಆಹಾರ ಪದ್ಧತಿಯಿಂದ ಯುವತಿಯರಲ್ಲಿ ಹಾರ್ಮೋನ್ ವ್ಯತ್ಯಯ, ಅಕಾಲಿಕ ಋತುಚಕ್ರ ಹಾಗೂ ಗರ್ಭಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಾನಸಿಕ ಒತ್ತಡದ ಕಾರಣಕ್ಕೆ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಯುವಜನತೆ ಮುಂದಾಗುತ್ತಿರುವುದು ವಿಷಾದನೀಯ. ಸರ್ಕಾರ ಕಾಲೇಜು ಹಂತದಲ್ಲಿ ಆಯೋಜಿಸುವ ಇಂತಹ ಅರಿವು ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ (CHC) ಐ.ಸಿ.ಟಿ.ಸಿ (ICTC) ಆಪ್ತಸಮಾಲೋಚಕರಾದ ರೂಪಶ್ರೀ ಎನ್. ಅವರು ವಿಶೇಷ ಉಪನ್ಯಾಸ ನೀಡಿ, “ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹದಿಹರೆಯದಲ್ಲಿ ದೈಹಿಕ ಬದಲಾವಣೆಗಳು ಕಣ್ಣಿಗೆ ಕಂಡರೆ, ಮಾನಸಿಕ ಬದಲಾವಣೆಗಳು ಭಾವನಾತ್ಮಕ ರೂಪದಲ್ಲಿರುತ್ತವೆ. ಈ ಹಂತದಲ್ಲಿ ಉಂಟಾಗುವ ಗೊಂದಲಗಳನ್ನು ಸರಿಯಾಗಿ ಅರ್ಥೈಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು,” ಎಂದರು.
ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಎಸ್. ಕನಕರಾಜು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಇಂಗ್ಲಿಷ್ ವಿಭಾಗದ ಡಾ. ಪಿ.ಎನ್. ಮಧುಸೂದನ, ಅರ್ಥಶಾಸ್ತ್ರ ವಿಭಾಗದ ಹಲಸಂದಿ ಸತೀಶ, ಸಮಾಜಶಾಸ್ತ್ರ ವಿಭಾಗದ ಡಾ. ವಿಜಯಲಕ್ಷ್ಮಿ ಆರ್, ಕನ್ನಡ ವಿಭಾಗದ ಡಾ. ಗಾಯತ್ರಮ್ಮ ಟಿ., ವಾಣಿಜ್ಯ ವಿಭಾಗದ ಗಿರೀಶ್ ಎಂ ಹಾಗೂ ಡಾ. ನಂದಿನಿ ಟಿ. ಉಪಸ್ಥಿತರಿದ್ದರು.



















