ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 11 : ಹವ್ಯಾಸಿ ಗಾಯಕರುಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಹಾಡುಗಾರಿಕೆಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕಲಾವಿದರುಗಳಿಗೆ ಅನ್ಯಾಯವಾಗುತ್ತಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ವಿಷಾಧಿಸಿದರು.
ಜಿಲ್ಲಾ ವಾದ್ಯಗೋಷ್ಠಿ ಕಲಾವಿದರ ಒಕ್ಕೂಟದಿಂದ ಸ್ಟೇಡಿಯಂ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಗಾನ ಕೋಗಿಲೆ ಎಸ್.ಜಾನಕಿರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ನುಡಿ-ಗಾನ ಸಮನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರೋಕೆಯಿಂದ ನೈಜ ಕಲಾವಿದರು ಮೂಲೆ ಗುಂಪಾಗುತ್ತಿದ್ದಾರೆ. ವಾದ್ಯಗೋಷ್ಟಿ ಕಲಾವಿದರು ಒಕ್ಕೂಟದ ಮೂಲಕ ಒಂದಾಗಿ ಶಕ್ತಿ ಪ್ರದರ್ಶಿಸಬೇಕು. ಕಂಚಿನ ಕಂಠದ ಗಾನ ಕೋಗಿಲೆ ಎಸ್.ಜಾನಕಿ ಅವರ ಸುಮಧುರ ಹಾಡುಗಳು ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತದೆ. ಸಂಗೀತಕ್ಕೆ ಭಾಷೆ ಹಾಗೂ ಗಡಿಯ ಮಿತಿಯಿಲ್ಲ. ನಲವತ್ತೆಂಟು ಸಾವಿರಕ್ಕು ಹೆಚ್ಚು ಹಾಡುಗಳು ಸಂಗೀತಾಸಕ್ತರನ್ನು ಸೆಳೆದಿದೆ. ಹಿರಿಯ ಕಲಾವಿದರ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಎಸ್.ಜಾನಕಿರವರು ಹಾಡಿರುವ ಹಾಡುಗಳು ಕೇಳುಗರ ಮನದಲ್ಲಿ ಸದಾ ಅಚ್ಚಳಿಯದೆ ಉಳಿದಿದೆ. ಗಾಯನ ಲೋಕದ ಮೇರು ಸಾಧಕಿಯನ್ನು ಸ್ಮರಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂದು ಸಲಹೆ ನೀಡಿದರು.
ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಒದಗಿಸಬೇಕಿದೆ. ಹಿರಿಯ ಕಲಾವಿದರ ಹಾಡುಗಳನ್ನು ಹೊಸ ತಲೆಮಾರಿನವರು ಹಾಡಿ ಕಲಾ ಪರಂಪರೆಯನ್ನು ಮುಂದುವರೆಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ ಮಾತನಾಡುತ್ತ ಹಳೆಯ ಹಾಡುಗಳು ಮನಸ್ಸಿಗೆ ಮುದ ನೀಡುವುದಲ್ಲದೆ ಜನರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ ಎಂದು ಹೇಳಿದರು.
ಜಿಲ್ಲಾ ವಾದ್ಯಗೋಷ್ಠಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಎಂ.ಕೆ.ಹರೀಶ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಯಶೋಧಮ್ಮ, ವಿನಯ್ ಗೋಡೆಮನೆ, ಲೇಖಕ ಹೆಚ್.ಆನಂದ್ಕುಮಾರ್, ಜೂನಿಯರ್ ಶಂಕರ್ನಾಗ್, ವಾದ್ಯಗೋಷ್ಠಿ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ನುಡಿ ಗಾನ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.










