Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಳೆ ತುರುನೂರಿನಲ್ಲಿ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ನಾಳೆ ಫೆಬ್ರವರಿ 24 ರಂದು ತಾಲ್ಲೂಕಿನ ತುರುನೂರಿನಲ್ಲಿ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಅದ್ದೂರಿಯಾಗಿ ನಡೆಯಲಿದೆ.

ಫೆಬ್ರವರಿ 24 ರ ಮಗ ನಕ್ಷತ್ರದ ಶುಭ ಲಗ್ನದಲ್ಲಿ ಬೆಳಿಗ್ಗೆ 10 : 45 ಕ್ಕೆ ಶ್ರೀ ಆಂಜನೇಯಸ್ವಾಮಿ ಉಚ್ಛಾಯ ಆರಂಭವಾಗಲಿದೆ.

ಕಳೆದ ವರ್ಷದ ರಥೋತ್ಸವದ ದೃಶ್ಯ

ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದ ಬಳಿಕ ಹೂವಿನ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕರೆತಂದು ಅಲಂಕೃತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಗುವುದು. ನಂತರ ರಥೋತ್ಸವ ಕಾರ್ಯಕ್ರಮಕ್ಕೆ ಊರಿನ ಪ್ರಮುಖರು ಚಾಲನೆ ನೀಡಲಿದ್ದಾರೆ.
ಸ್ವಾಮೀಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ
ನಂತರ ಉಚ್ಛಾಯವನ್ನು ಊರಿನ ಹೊರಗೆ ಇರುವ ಅಡವಿ ಆಂಜನೇಯ ಸ್ವಾಮಿಯ ದೇವಸ್ಥಾನದವರೆಗೂ ಎಳೆದೊಯ್ದು ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಬಳಿ ಕರೆತರಲಾಗುವುದು.  ಸಮಾಳ, ನಂದಿಕೋಲು, ಡೊಳ್ಳುಕುಣಿತ, ಕೋಲಾಟ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಕಳೆದ ವರ್ಷ 125 ವರ್ಷದ ಹಳೆಯ ತೇರಿಗೆ ವಿದಾಯ ಹೇಳಿ
20 ಲಕ್ಷ ರೂ. ವೆಚ್ಚದಲ್ಲಿ ಹೊಸ ತೇರು ನಿರ್ಮಾಣ ಮಾಡಿ ಉಚ್ಛಾಯವನ್ನು ವಿಜೃಂಭಣೆಯಿಂದ ನೆರವೇರಿಸಲಾಗಿತ್ತು.

ಬಹಳಷ್ಟು ಮಂದಿ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿದ್ದರೂ ತಪ್ಪದೇ ತುರುವನೂರು ಆಂಜನೇಯ ಜಾತ್ರೆಗೆ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ.

ದಾಸಪ್ಪನ ಪವಾಡ : ಆಂಜನೇಯ  ಜಾತ್ರೆ ಮತ್ತು ದಾಸಪ್ಪನ ಪವಾಡ ವಿಶೇಷತೆಯುಳ್ಳದ್ದಾಗಿದೆ. ಹಾಗಾಗಿಯೇ ಸುತ್ತಮುತ್ತಲಿನಿಂದ ಸಹಸ್ರಾರು ಸಂಖ್ಯೆಯಲ್ಲಿ ದಾಸಪ್ಪನ ಪವಾಡವನ್ನು ವೀಕ್ಷಿಸಲು ತುರುವನೂರಿಗೆ ಸಾಗರದಂತೆ ಬಂದು ಸೇರುತ್ತಾರೆ. ಮಾಘಮಾಸದ ಮಘಾನಕ್ಷತ್ರದಲ್ಲಿ ನಡೆಯುವ ಈ ಉತ್ಸವ ವಿಶಿಷ್ಟವಾದದ್ದು.

ಇತಿಹಾಸ : ರಾಮಭಕ್ತ ಆಂಜನೇಯ ತನ್ನ ಭಕ್ತೆ ನಾಗಮ್ಮ ಎಂಬುವರನ್ನು ಊರಿನ ಅರಳಿ ಮರದ ಕೆಳಗೆ ಬಿಟ್ಟು ಹೋಗಿದ್ದ. ಆತನ ಅಪ್ಪಣೆಯಂತೆಯೇ ಆಕೆಯು ಅರಳಿ ಮರದ ಕೆಳಗಡೆ  ನೆಲೆಸಿದ್ದಳು. ಪುರಾಣದ ಪ್ರಕಾರ ಆಂಜನೇಯನೆ ಆಕೆಯನ್ನು ಅಲ್ಲಿ ಬಿಟ್ಟುಹೋಗಿದ್ದ. ಹಾಗಾಗಿ ಆಕೆ ದಿನ ಬೆಳಗ್ಗೆ ಅರಳಿ ಮರದ ಕೆಳಗಡೆ  ರಂಗೋಲಿಯಲ್ಲಿ ಆಂಜನೇಯನ ಚಿತ್ರ ಬಿಡಿಸುತ್ತಿದ್ದಳು. ನಂತರ ಅದೇ ಸ್ಥಳದಲ್ಲಿ  ಪೂಜೆಯನ್ನು ನೆರವೇರಿಸುತ್ತಿದ್ದಳು,  ಊರಿನವರ ಸಹಕಾರದಿಂದ ಚಿಕ್ಕದಾದ ಆಂಜನೇಯನ ಮೂರ್ತಿ ಸ್ಥಾಪನೆಯಾಯಿತು. ಹಾಗಾಗಿ ಮಹಾ ಶರಣೆ ನಾಗಮ್ಮ ಪ್ರತಿದಿನ ಅದಕ್ಕೆ ಪೂಜೆ ಮಾಡಿಕೊಂಡು ಇದ್ದಳು ಎನ್ನುವ ಪ್ರತೀತಿ ಇದೆ. ನಂತರ ಊರಿನ ಪ್ರಮುಖರೆಲ್ಲರೂ ಸೇರಿ ಕ್ರಿ.ಶ 1668ರಲ್ಲಿ  ನಾಗಮ್ಮನ ಆಸೆಯಂತೆ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲು ನಿಶ್ಚಿಯಿಸಿದರು.

ಮೂರ್ತಿ ಸಿದ್ಧವಾದ ನಂತರ ಕಿ.ಶ.1669ರಲ್ಲಿ ಆಂಜನೇಯ ಪಾದಸ್ಪರ್ಶ ಮಾಡಿದ್ದ ಸ್ಥಳದಲ್ಲೇ ಕೀಲಕನಾಮ ಸಂವತ್ಸರ ಮಾಘಮಾಸದ ಮಾಘಾನಕ್ಷತ್ರದಲ್ಲಿ ಗದ್ದುಗೆಯ ಮೇಲೆ ಮರ‍್ತಿಯನ್ನು  ಪ್ರತಿಸ್ಠಾಪಿಸಲಾಯಿತು. ನಂತರ ಮೂಲ ಗದ್ದುಗೆಯನ್ನೇ ಇಟ್ಟುಕೊಂಡು  ದೇವಸ್ಥಾನವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ.
ಆಂಜನೇಯ ಸ್ವಾಮಿ ಜಾತ್ರೆಯನ್ನು ಮೂರ್ತಿ  ಪ್ರತಿಷ್ಠಾಪನೆಯ ದಿನದಂದೇ  ಮಾಘಮಾಸದ ಮಾಘಾನಕ್ಷದಲ್ಲೇ ಇಂದಿಗೂ ನಡೆದುಕೊಂಡು ಬರುತ್ತಿದೆ.

ಈ ಉತ್ಸವದ ಜೊತೆ  ಜೊತೆಯಲ್ಲಿ ಆರಂಭವಾಗಿದ್ದು ದಾಸಪ್ಪ ಪವಾಡ. ಇದು ನಿಜಕ್ಕೂ ಒಂದು ಪವಾಡವೇ ಸರಿ. ಗ್ರಾಮದ ಮುರುಡಪ್ಪ ಎಂಬ ಬಾಲಕನಿಗೆ ಆಗಾಗ ಆಂಜನೇಯ  ಕನಸಿನಲ್ಲಿ ಬರುತ್ತಿದ್ದು, ಈ ಕಾರಣಕ್ಕಾಗಿಯೇ ಆಗಾಗ ಆತ ಮೈಮೇಲೆ  ಪರವೇ ಇಲ್ಲದಂತೆ ಧ್ಯಾನಾಸಕ್ತನಾಗಿ ಕೂರುತ್ತಿದ್ದ.

ಸಹಜವಾಗಿಯೇ ಆತ ಆಂಜನೇಯನ ಪರಮ ಭಕ್ತನಾಗಿದ್ದ. ಆಂಜನೇಯ ಆತನ ದೇಹ ಪ್ರವೇಶಿಸುವ ಮೂಲಕ ಈ ರೀತಿಯ  ಧ್ಯಾನಸಕ್ತನಾಗಿ ಕೂರುತ್ತಿದ್ದ. ಹೀಗಾಗಿ ಆತನ ತಂದೆ ಇದನ್ನು ಕಂಡು ದಿಗಲಾಗಿದ್ದ. ಈ ಬಗ್ಗೆ  ಊರಿನ ಕೆಲ ಹಿರಿಯರ ಮೊರೆ ಹೋಗಿದ್ದ. ಹಿರಿಯೆರೆಲ್ಲರೂ ಆತನಲ್ಲಿದ್ದ ಭಕ್ತಿ ಶ್ರದ್ಧೆಯನ್ನು ಕಂಡು ನಿನ್ನ ಮಗನಿಗೆ ಏನು ಆಗಿಲ್ಲ, ದೈವಪ್ರೇರಣೆಯಾಗಿದೆ ಶ್ರೀರಾಮನ ಪರ್ವ ಅವತಾರವಾದ ಉಗ್ರನರಸಿಂಹನ ಸೇವೆ ಮಾಡಬೇಕೆಂದು ಆಂಜನೇಯ ನಿನ್ನ ಮಗನಲ್ಲಿ ಪ್ರೇರಣೆ ನೀಡಿದ್ದಾನೆ. ಹಾಗಾಗಿ ಆದಷ್ಟು ಬೇಗ ಮುರುಡಪ್ಪನಿಗೆ ವೈಷ್ಣವ ಮುದ್ರೆ ಹಾಕಿಸಿ ಆಂಜನೇಯನ ದಾಸನನ್ನಾಗಿ ಮಾಡು ಆತ ಆಂಜನೇಯನ ಸೇವಕನಾಗಿ ಪವಾಡಗಳನ್ನು ಮಾಡುತ್ತಾನೆ ಎಂದಾಗ ಮುರುಡಪ್ಪನಲ್ಲಿರುವ ಆ ಶಕ್ತಿಯ ಅರಿವಾಗುತ್ತದೆ.

ಆತ ಕೂಡಲೇ 1908 ರಲ್ಲಿ  ತಿರುಪತಿಗೆ ಹೋಗಿ ಮುದ್ರೆ ಹಾಕಿಸಿಕೊಂಡು ಬರುತ್ತಾನೆ. ಆ ನಂತರ  ಮತ್ತೆ ಆಂಜನೇಯ  ಮುರುಡಪ್ಪ ಕನಸಿನಲ್ಲಿ ಆಂಜನೇಯ ಬಂದು ಈಗಲಾದರೂ ನನ್ನ ಸೇವೆ ಮಾಡುತ್ತೀಯ ಎಂದು ಕೇಳಿದಾಗ, ಈಗ ನಾನೇನು ಮಾಡಬೇಕು  ಎಂದು ಮುರುಡಪ್ಪ ಕೇಳುತ್ತಾನೆ. ಆಗ ಆಂಜನೇಯ ಈ ಊರಿನ ಪರ‍್ವದಲ್ಲಿರುವ ಉಗ್ರನರಸಿಂಹ ಜನಸಿದ್ದಾನೆ. ಅಲ್ಲಿಗೆ ಹೋಗಿ ನನ್ನ ಸೇವೆ ನಡೆಯಬೇಕು ಎನ್ನುತ್ತಾನೆ, ಇದಕ್ಕೂ ಮುನ್ನ ರಥೋತ್ಸವದ ವೇಳೆ ಈ ಕಾರ್ಯ ನಡೆಯಬೇಕು ಮತ್ತು ಇದಕ್ಕೆ ಏನೇನು  ಮಾಡಬೇಕು ಯಾವ ರೀತಿ  ಇರಬೇಕು. ಪಲ್ಲಕ್ಕಿಯಲ್ಲಿ ಕೂತು ಮೆರವಣಿಗೆಯಾಗಬೇಕು ಎಂಬೆಲ್ಲಾ ವಿವರಗಳನ್ನು ಹೇಳುತ್ತಾನೆ. ಆಗಲಿ ಎಂದು ಹೇಳಿದಾಗ ಆಂಜನೇಯ ಮಾಯವಾಗುತ್ತಾನೆ. ಮುರುಡಪ್ಪ ಹಾಸಿಗೆಯಿಂದ ಎದ್ದು   ನೋಡಿದಾಗ ಅಲ್ಲಿ ಏನು  ಇರಲಿಲ್ಲ. ಇದು ಕನಸಾದರೂ ಆಂಜನೇಯನೆ ಈ  ರೀತಿ ನನ್ನೊಳಗೆ ಬಂದು ಹೇಳಿಸಿದ್ದಾನೆ ಎಂದು ಅರಿತು  ಈ  ಎಲ್ಲಾ ಘಟನೆಗಳನ್ನು ತಿಮ್ಮಣ್ಣ ಗೌಡ ಹಾಗೂ  ಮುಲ್ಲಂಗಿ ಭೀಮಾರೆಡ್ಡಿ ಅವರಿಗೆ ವಿವರಿಸುತ್ತಾರೆ, ಇದಕ್ಕೆ ಅವರು ರಥೋತ್ಸವದ ವೇಳೆ ಈ  ಪವಾಡ ನಡೆಯಲಿ ಎಂಬ ಸಮ್ಮತಿಯನ್ನು ನೀಡುತ್ತಾರೆ.

1909ರಲ್ಲಿ ಈ ಪವಾಡ ಮೊದಲ ಬಾರಿಗೆ ನಡೆಯಿತು.  ಆಂಜನೇಯ ರಥೋತ್ಸವದ  9 ದಿನದ ಪರ‍್ವದಲ್ಲಿ ದಾಸಪ್ಪ ಕಟ್ಟುನಿಟ್ಟಾದ ಬ್ರಹ್ಮಚರ್ಯ ಪಾಲಿಸುತ್ತ ಉಪವಾಸ ವ್ರತ ಕೈಗೊಳ್ಳಬೇಕು, ಉತ್ಸವದ ದಿನ  ಶ್ರೀ ಆಂಜನೇಯ ತೇರು ಹರಿದ ಮೇಲೆ ಮಧ್ಯಾಹ್ನದ ನಂತರ ಇಳಿ ಹೊತ್ತಿನಲ್ಲಿ ಮುರುಡಪ್ಪನನ್ನು ಆತನ ಮನೆಯಲ್ಲಿ ಅಲಂಕರಿಸಿ ತಲೆಗೆ 32 ಮೊಳ ರುಮಾಲು ಸುತ್ತಿ ಸೊಂಟಕ್ಕೆ ಕಟ್ಟಿ ಬಿಗಯಬೇಕು. ಕಾಲಿಗೆ ಗಗ್ಗರ ತೊಡಿಸಬೇಕು ಗೋವಿಂದನ ನಾಮ ಸ್ಮರಣೆ ಮಾಡುತ್ತಿದ್ದಂತೆ ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಅಡವಿನ ಹನುಮಂತರಾಯ ದೇವಸ್ಥಾನ ಮತ್ತು ಭೂತನಾಥನಿಗೆ ವಂದಿಸಿ ಊರಿನ ಪೂರ್ವ ದಿಕ್ಕಿನಲ್ಲಿರುವ ದೊಡ್ಡಘಟ್ಟದ ಕೆರೆ ಬಳಿಯ ಉಗ್ರನರಸಿಂಹ ಸ್ವಾಮಿಯ ದೇವಸ್ಥಾನದ ವರೆಗೂ ಕಾಲ್ನಡಿಗೆಯಲ್ಲೇ ನಡೆದು ಹೋಗಿ ಸೂರ್ಯಾಸ್ತವಾಗುತ್ತಿದ್ದಂತೆ ಅಂದರೆ ಗೋಧೂಳಿ ಸಮಯದಲ್ಲಿ ಉಗ್ರನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮತ್ತೆ ತುರುವನೂರಿಗೆ ಕಾಲ್ನಡಿಗೆಯಲ್ಲೇ ಹಿಂತಿರುಗುತ್ತಾನೆ.

ತುರುವನೂರಿನ ಅಡವಿ ದೇವಸ್ಥಾನದ ಬಳಿ ಇರುವ ಭೂತನಾಥನ ಆಶ್ರಯದಲ್ಲಿ ಸ್ಪಲ್ಪ ಕಾಲ ವಿರಮಿಸಿ ಸೂರ‍್ಯನು ಅಸ್ತಮಿಸಿದ ಮೂರು ಗಂಟೆಗಳ ಬಳಿಕ ಆ ಸ್ಥಳದಲ್ಲಿ ಗೋವಿಂದ ನಾಮಗಳಿಂದ ಹೊಗಳುತ್ತಿದ್ದಂತೆ ಪುನಃ ಪವಾಡ ನಡೆಯುತ್ತದೆ. ಶ್ರೀ ನರಸಿಂಹಸ್ವಾಮಿ ಹಾಗೂ ಆಂಜನೇಯನ ಪ್ರವೇಶದಿಂದ ದಾಸಪ್ಪ ಪವಾಡ ಪುರಷನಾಗುತ್ತಾನೆ ಹೀಗಾಗಿ ಮುಳ್ಳಪಲ್ಲಕ್ಕಿಯಲ್ಲಿ ಸೊಪ್ಪಿನ ಪತ್ರೆ ಹರಡಿ ಅದರ ಮೇಲೆ ಮುರುಡಪ್ಪನನ್ನು ಮಲಗಿಸಿ ಮೆರವಣಿಗೆ ಮೂಲಕ ಊರಿನ ಎಲ್ಲಾ ಭಾಗಗಳಲ್ಲಿ ಸಂಚರಿಸಬೇಕು. ಅಂದರೆ ಇದರಿಂದ ಎಲ್ಲ ದುಷ್ಟಶಕ್ತಿಗಳು ತೊಲಗಲಿ ಎಂದು ಆ ನಂತರ ಮೆರವಣಿಗೆ ಮುಗಿಯುತ್ತಿದ್ದಂತೆ ಮಧ್ಯರಾತ್ರಿ ದೇವಸ್ಥಾನದಲ್ಲಿ ತುಂಬಿಸಿಕೊಳ್ಳಬೇಕು. ಆಗ ಆಂಜನೇಯ ಮೂಲಸ್ವರೂಪದಲ್ಲಿ ಲೀನವಾಗುತ್ತಾನೆ. ಇದು ಆಂಜನೇಯ ಕನಸಿನಲ್ಲಿ ಮುರುಡಪ್ಪನಿಗೆ ಹೇಳಿದ ರೀತಿ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಪವಾಡ ಇದು.

ಇನ್ನೂ ದೇವಸ್ಥಾನದಿಂದ ಮನೆಗೆ ತೆರಳಿದ ನಂತರ ಉಪವಾಸ ಕೈಬಿಡುತ್ತಾರೆ. ಮರುದಿನ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸುತ್ತಾರೆ .ಇದಾದ ನಂತರ ರಥೋತ್ಸವದ ಎರಡನೇ ದಿನ ಓಕುಳಿ ದಿನ ಮಂಗಳವಾದ್ಯಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕಲ್ಲೇಶ್ವರ ಸ್ವಾಮಿಯ ಎರಡೂ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಗಂಗಾಪೂಜೆಗೆ ಬಾವಿಗೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ತುರುವಪ್ಪ ಬೇಟೆ ರಂಗಪ್ಪ ದೇವರಿಗೆ ಪೂಜೆಸಲ್ಲಿಸಿ ಅಲ್ಲಿಂದ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಕಲ್ಲೇಶ್ವರ ಮೂರ್ತಿಯನ್ನು ಗುಡಿತುಂಬಿಸುತ್ತಾರೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿ ಮರ‍್ತಿಯನ್ನು ಗುಡಿತುಂಬಿಸಲಾಗುತ್ತದೆ ಅಲ್ಲಿಗೆ ಆಂಜನೇಯ ಉತ್ಸವ ಮುಗಿಯುತ್ತದೆ.

ಮರುಡಪ್ಪ ಈ ಪವಾಡ ಮಾಡುವ ಮೂಲಕವೇ ಇಲ್ಲಿಯವರೆಗೂ ಮುರುಡಪ್ಪ ಪವಾಡ ಎಂತಲೇ ಹೆಸರು ಬಂದಿದೆ. ಈಗ ಅವರ ಮೂರನೆ ತಲೆಮಾರಿನ ವೆಂಕಟೇಶ್ ಅವರು   ಜಾತ್ರೆ 9 ದಿನ ಇರುವಾಗಲೇ ಉಪವಾಸ ಆರಂಭಿಸುತ್ತಾರೆ. ಹೀಗಾಗಿಯೇ ದೇವರ ಅವರ ಮೈಮೇಲೆ ಬರುತ್ತದೆ ಎನ್ನುವ  ನಂಬಿಕೆ ಇದೆ.

ಇಂತ ಪವಾಡ ನಡೆಯುವುದು ಈ ಬಾರಿ ಇದೇ ಪೆಬ್ರವರಿ 7 ರಂದು.  ಇದು ಕೇವಲ ತುರುವನೂರಿನಲ್ಲಿ ನಡೆಯುವ ಪವಾಡವಲ್ಲ ಇಂತಹ ಹಲವಾರು ದೈವತ್ವದ  ಪವಾಡಗಳು ಪರಂಪರಾನುಗತವಾಗಿ ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ನಡೆಸಿಕೊಂಡು ಬರುತ್ತಿದ್ದಾರೆ. ಅದನ್ನೇ ನಾವು ಜಾನಪದ ಸಂಸ್ಕೃತಿಯ ಪ್ರತೀಕ ಎಂದು ಹೇಳುತ್ತೇವೆ.

ಮಾಹಿತಿ  ಕೃಪೆ : ತುರುವನೂರು ಮಂಜುನಾಥ
ಮೊ : 99161 91222

ಶ್ರೀ ಆಂಜನೇಯ ಸ್ವಾಮಿ ಪಲ್ಲಕ್ಕಿ ದಾಸಪ್ಪ ಡಿ.ಆರ್. ವೆಂಕಟೇಶ್ ಅವರ ಮಾಹಿತಿ

01.06.1955 ರಲ್ಲಿ ವೆಂಕಟೇಶ್ ಅವರು ಜನಿಸಿದರು. ಇವರು ಕುಟುಂಬದಲ್ಲಿ ಒಟ್ಟು ಐವರ ಗಂಡು ಮಕ್ಕಳು ಮತ್ತು ನಾಲ್ವರು ಹೆಣ್ಣು ಮಕ್ಕಳು. ವೆಂಕಟೇಶ್ ಅವರು ಪ್ರೌಢಶಾಲೆವರರೆಗೂ ವಿದ್ಯಾಭ್ಯಾಸವನ್ನು ತುರುವನೂರಿನಲ್ಲಿಯೇ ಮುಗಿಸಿದರು.

ಅವರು ವೃತ್ತಿಜೀವನವನ್ನು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ವಿದ್ಯುತ್ ಶಕ್ತಿ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರಾಗಿ ಆರಂಭಿಸಿದರು.
22/02/1976  ವೆಂಕಟೇಶ್ ಅವರು ಹಂಗಾಮಿಯಾಗಿ ಬೃಹತ್ ಕಾಮಗಾರಿ ವಿಭಾಗ ಉಗ್ರಾನದಲ್ಲಿ ಕೆಲಸಕ್ಕೆ ಸೇರಿದರು. ಅದಾದ ನಂತರ ಜುಲೈ 1976 ರಲ್ಲಿ ದಾವಣಗೆರೆಗೆ ವರ್ಗಾವಣೆಯಾದರೂ 01/07/ 1979 ರಂದು ಅವರು ಕೆಲಸಕ್ಕೆ ಕಾಯಂ ಮಾಡಲಾಯಿತು.

ಅವರನ್ನು ಮಾಪಕ ತಪಾಸಕ ಹುದ್ದೆಗೆ ಮುಂಬಡ್ತಿ ನೀಡಿ ದಾವಣಗೆರೆಯ ಮಾಪಕ ತಪಾಸನ ಶಾಖೆಗೆ ವರ್ಗಾಯಿಸಲಾಯಿತು. ಮುಂದೆ ಅವರು 1990 ರವರೆಗೂ ದಾವಣಗೆರೆಯಲ್ಲಿ ಮಾಪಕ ತಪಾಸಣಾ ಕಾರ್ಯ ನಿರ್ವಹಿಸಿದರು.

ವೆಂಕಟೇಶ್ ಅವರ ತಾತ 48 ವರ್ಷ, ತಂದೆ  1957 ರಿಂದ 1978 ರವರೆಗೂ 22 ವರ್ಷಗಳ ಕಾಲ ನಡೆಸಿಕೊಟ್ಟರು. 1979 ರಿಂದ ಸತತವಾಗಿ 44 ವರ್ಷಗಳಿಂದ ವೆಂಕಟೇಶ್ ಅವರು ದಾಸಪ್ಪನ ಪವಾಡವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ವೆಂಕಟೇಶ್ ಅವರಿಗೆ ಪದ್ಮಾವತಿ ಅವರೊಂದಿಗೆ 22/021981 ರಲ್ಲಿ ವಿವಾಹವಾದರು.ಅವರಿಗೆ ಮೂವರು ಹೆಣ್ಣು ಮಕ್ಕಳು.

ಇಡೀ ಊರೇ ಮಧುವಣಗಿತ್ತಿಯಂತೆ ಸಿಂಗಾರ:

ರಥೋತ್ಸವ, ಜಾತ್ರೆಗಳು ಎಂದರೆ ಊರಿಗೆ ಊರೇ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುವುದು ಸಾಮಾನ್ಯ. ಅದೇ ರೀತಿ ತುರುವನೂರು ಗ್ರಾಮವಷ್ಟೇ ಅಲ್ಲದೇ ಸುತ್ತಮುತ್ತಲ ಹಳ್ಳಿಗಳು ಕೂಡ ಜಾತ್ರೆಗೆ ಸಿಂಗಾರಗೊಳ್ಳುವುದು ಇಲ್ಲಿನ ವಿಶೇಷ. ಪ್ರತಿ ಮನೆಗಳು ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡು, ಮನೆ ಮುಂದೆ ಚಿತ್ತಾರದ ರಂಗೋಲಿಗಳು ಗಮನಸೆಳೆಯುತ್ತವೆ. ತಳಿರು ತೋರಣ, ವಿವಿಧ ಹೂವುಗಳಿಂದ ಮನೆ ಬಾಗಿಲು ದೇವರ ಮನೆಯನ್ನು ಸಿಂಗಾರ ಮಾಡಲಾಗುತ್ತದೆ. ಉತ್ಸವದ ದಿನ ಬೇರೆಡೆ ನೆಲೆಸಿದ ಊರಿನ ಜನರ ಜೊತೆಗೆ ಸಂಬಂಧಿಕರು ಒಂದು ದಿನ ಮುಂಚಿತವಾಗಿಯೇ ತುರುವನೂರಿನ ತಮ್ಮ ನೆಂಟರ ಮನೆಗೆ ಬಂದು ಹಬ್ಬದ ವಾತಾವರಣರಕ್ಕೆ ಮೆರುಗು ನೀಡುತ್ತಾರೆ. ದೇವಸ್ಥಾನ ಕೂಡ ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿರುತ್ತದೆ. ದೇವಸ್ಥಾನದ ಬೀದಿ ಸೇರಿ ಇಡೀ ಊರೇ ಆಕರ್ಷಕವಾಗಿ ಸಿಂಗಾರಗೊಂಡು ಜಾತ್ರೆ ಉತ್ಸವಕ್ಕೆ ಮೆರುಗು ತರಲಾಗುತ್ತದೆ.

ಉತ್ಸವ ಯಶಸ್ವಿಗೆ ಸಾವಿರಾರು ಕೈಗಳು :
ವರ್ಷಕ್ಕೊಮ್ಮೆ ನೆರವೇರುವ ರಥೋತ್ಸವ ಯಶಸ್ವಿಗೆ ಸಾವಿರಾರು ಭಕ್ತರು ವಿವಿಧ ಹಂತದಲ್ಲಿ ನೆರವಾಗುತ್ತಾರೆ. ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಉತ್ಸವಕ್ಕೆ ಇಂತಹ ಕಾರ್ಯ ನಿಮ್ಮಿಂದ ಆಗಬೇಕು ಎಂದು ಯಾರ ಬಳಿಯೂ ಕೇಳುವುದಿಲ್ಲ. ಆದರೆ, ಸೇವೆ ನೀಡಲು ಭಕ್ತರು ಪೈಪೋಟಿಗೆ ಬೀಳುವುದು ಇಲ್ಲಿನ ವಿಶೇಷ. ವಿದ್ಯುತ್ ದ್ವೀಪಾಲಂಕರ, ಮೈಕ್, ಶಾಮಿಯಾನ, ದೇವಸ್ಥಾನಕ್ಕೆ ಬಣ್ಣ, ಹೂವಿನ ಅಲಂಕಾರ ಸೇರಿ ವಿವಿಧ ಸೇವೆ ಒದಗಿಸಿ ದೇವರ ಕೃಪೆಗಾಗಿ ಪಾತ್ರರಾಗಲು ಸಂಘ-ಸಂಸ್ಥೆಗಳು, ದಾನಿಗಳು ತನು, ಮನ ಧನ ಸಮರ್ಪಿಸಲು ಪೈಪೋಟಿಗೆ ಬೀಳುತ್ತಾರೆ. ಪವಾಡ, ಅನ್ನದಾನ, ಎಡೆ ಸೇವೆ, ತೇರು ಬಳಿಕ ದಾಸಯ್ಯನ ಪವಾಡ, ಸಂಜೆ ಓಕುಳಿ ಉತ್ಸವದಲ್ಲಿ ಎಲ್ಲ ಜಾತಿ ಜನರು ಒಗ್ಗೂಡಿ ಪಾಲ್ಗೊಳ್ಳುತ್ತಾರೆ. ಹೂವಿನ ಹರಾಜು ಕೂಡ ನಡೆಯುತ್ತದೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಜಾತ್ರೆ ಸಂದರ್ಭದಲ್ಲಿ ಭಕ್ತರು ಉತ್ಸವಕ್ಕೆ ಎಲ್ಲ ರೀತಿಯ ನೆರವು ನೀಡಿ, ದೇವರ ಕೃಪೆಗೆ ಪಾತ್ರರಾಗುವುದು ಇಲ್ಲಿನ ಜನರ ಹೃದಯವಂತಿಕೆಗೆ ಸಾಕ್ಷಿ ಆಗಿದೆ.

ದೇವಸ್ಥಾನದಲ್ಲಿ ಕೆಲ ವಿಶೇಷ ಪೂಜೆಗಳು :
ವರ್ಷದ ಪ್ರಮುಖ ದಿನಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಆಚರಣೆಗಳು ನಡೆಯುತ್ತವೆ. ಪ್ರತಿ ಶನಿವಾರ ಎಲ್ಲಾ ಆಂಜನೇಯ ದೇವಸ್ಥಾನಗಳಂತೆ ಇಲ್ಲಿಯೂ ವಿಶೇಷ ಪೂಜೆ ನೆರವೇರುತ್ತದೆ.

ಶ್ರಾವಣಮಾಸದಲ್ಲಿ ಪ್ರತಿ ಶನಿವಾರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸಮರ್ಪಣೆ. ಹನುಮ ಜಯಂತಿ, ರಾಮನವಮಿ ಹಬ್ಬದಂದು ದೇವರಿಗೆ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿ ಭಕ್ತರಿಗೆ ಪಾನಕ-ಕೋಸಂಬರಿ ವಿತರಿಸಲಾಗುತ್ತದೆ. ಯುಗಾದಿ ಹಬ್ಬದ ಚಂದ್ರದರ್ಶನ ಬಳಿಕ ಇಡೀ ಊರಿನ ಜನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಜೊತೆಗೆ ಅಂದು ಕೃಷಿ ಚಟುವಟಿಕೆ ಯಾವ ದಿನ ಆರಂಭಿಸಬೇಕೆಂಬ ಸಂದೇಶವನ್ನು ನೀಡಲಾಗುತ್ತದೆ.

15 ವರ್ಷ ಬಳಿಕ ಅಖಂಡ ಭಜನೆ : 
ಆಂಜನೇಯ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ಅಖಂಡ ಭಜನೆ ನಡೆದುಕೊಂಡು ಬರುತ್ತಿತ್ತು. ಆದರೆ, ವಿವಿಧ ಕಾರಣಕ್ಕೆ 15 ವರ್ಷ ಸ್ಥಗಿತಗೊಂಡಿದ್ದ ಅಖಂಡ ಭಜನೆ ಕಳೆದ ಬಾರಿ ನಡೆಸುವ ಮೂಲಕ ಲೋಕಕಲ್ಯಾಣಕ್ಕೆ ಮುನ್ನುಡಿ ಬರೆಯಲಾಗಿತ್ತು. ಮಳೆ-ಬೆಳೆ ಚೆನ್ನಾಗಿ ಆಗಲಿ, ಜನರ ಬದುಕು ಸುಧಾರಣೆಗೆ ಪ್ರಾರ್ಥಿಸಿ 24 ಗಂಟೆಗಳ ಕಾಲ ನಿರಂತರ ಭಜನೆ ನಡೆಸಲಾಗುತ್ತದೆ. ಈ ಸಂದರ್ಭ ದೇವಸ್ಥಾನದ ಗೋಡೆಗಳಲ್ಲಿ ನೂರಾರು ದೇವರುಗಳ ಫೋಟೋಗಳನ್ನು ಕಟ್ಟಿ, ವಿವಿಧ ಪೂಜೆ ನೆರವೇರಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆ ಜೊತೆಗೆ ಭಜನೆ ಕಾರ್ಯಕ್ಕೆ ಕೈಜೋಡಿಸುತ್ತಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ಅಂಗವಾಗಿ ದೇವಸ್ಥಾನದಲ್ಲಿ ರಾಮನ ಮಾದರಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿ ದೇವಾಲಯವನ್ನು ಹೂವುಗಳು ಮತ್ತು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದ ನೇರಪ್ರಸಾರವನ್ನು ಭಕ್ತರಿಗೆ ತೋರಿಸಲೆಂದೇ ದೊಡ್ಡ ಪರದೆಯ ಮೇಲೆ ಬಾಲ ರಾಮನ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಮೂಲಕ ಅಲ್ಲಿ ನೆರೆದಿದ್ದ ಭಕ್ತರು ರಾಮನನ್ನು ಕಣ್ತುಂಬಿಕೊಂಡು ಸಂತಸ ಪಟ್ಟಿದ್ದನ್ನು ಸ್ಮರಿಸಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಂಜೆ ವೇಳೆಗೆ ಹಿರಿಯೂರಿನಾದ್ಯಂತ ಗುಡುಗು ಸಹಿತ ಬಾರಿ ಮಳೆ..!

ಹಿರಿಯೂರು: ಮಳೆಯಿಲ್ಲದೆ ಕಂಗಲಾಗಿದ್ದ ಹಿರಿಯೂರಿನ ಮಂದಿಗೆ ವರುಣಾರಾಯ ತಂಪೆರೆದಿದ್ದಾನೆ. ಸಂಜೆ ವೇಳೆ ಜೋರು ಮಳೆ ಬಂದಿದ್ದು, ಜನ ಫುಲ್ ಖುಷಿಯಾಗಿದ್ದಾರೆ. ಕಳೆದ ಬಾರಿ ಹಿಂಗಾರು-ಮುಂಗಾರು ಮಳೆಯಿಲ್ಲದೆ ಬಿಸಿ ಗಾಳಿಯನ್ನು ಅನುಭವಿಸಿ ಅನುಭವಿಸು ಜನ ಸುಸ್ತಾಗಿ

ಅಣು ಬೋಧನೆ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು ವಿಧಾನ :  ಉಪನ್ಯಾಸಕಿ ಅರ್ಚನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 07 : ಅಣು ಬೋಧನೆ ಎನ್ನುವುದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು

ಚಿತ್ರದುರ್ಗ | ನಗರಸಭೆಯಿಂದ ಮದ್ಯದಂಗಡಿಗಳ ಮೇಲೆ ದಾಳಿ :  ನಿಷೇಧಿತ ಪ್ಲಾಸ್ಟಿಕ್ ಲೋಟಗಳ ವಶ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 07 : ನಗರದ ಅನೇಕ ಬಾರ್ ಗಳ ಮೇಲೆ ನಗರಸಭೆಯವರು ದಾಳಿ ನಡೆಸಿ ಪ್ಲಾಸ್ಟಿಕ್

error: Content is protected !!