ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಸಮಾಜದಲ್ಲಿ ಸವಿತಾ, ಮಡಿವಾಳ ಹೀಗೆ ಕೆಲ ಸಮುದಾಯಗಳು ಪ್ರತಿ ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಶ್ರಮಿಸುತ್ತಿರುವ ಸಮಾಜ. ಆದರೆ, ಸವಿತಾ ಸಮಾಜದ ಕುರಿತು ಅತ್ಯಂತ
ಅವಹೇಳನಕಾರಿಯಾಗಿ ಸಿ.ಟಿ.ರವಿ ಮಾತನಾಡಿರುವುದು ಅತ್ಯಂತ ನೋವು ತರಿಸಿದೆ ಎಂದು ಸವಿತಾ
ಸಮಾಜದ ಜಿಲ್ಲಾ ನಿರ್ದೇಶಕ ಆರ್.ರಮೇಶ್ ಮದಕರಿಪುರ ತಿಳಿಸಿದ್ದಾರೆ.
ಮೊಬೈಲ್ ಫೋನ್ನಲ್ಲಿ ಮಾತನಾಡುವ ಸಂದರ್ಭ ಬಿಜೆಪಿ ನಾಯಕ ಸಿ.ಟಿ.ರವಿ ಅವರು ಅತ್ಯಂತ ಕೆಟ್ಟದಾಗಿ, ಸವಿತಾ ಸಮಾಜವನ್ನು ಕೀಳು ಭಾಷೆಯಲ್ಲಿ ನಿಂದಿಸಿದ್ದಾರೆ. ಬೇರೆಯವರನ್ನು ಟೀಕಿಸಲು, ಬೈಯಲು ಸವಿತಾ ಸಮಾಜವನ್ನು ಬಳಸಿಕೊಂಡಿರುವುದು ನೋವು ತರಿಸಿದೆ
ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸಿ.ಟಿ.ರವಿ ಅವರು ಸಾಮಾಜಿಕ ಸಮಸ್ಯೆ, ಅಸ್ಪೃಶ್ಯತೆ, ಜಾತಿ
ನಿಂದನೆಯಂತಹ ಕಾರ್ಯದಲ್ಲಿ ನೇರವಾಗಿ ಪಾಲ್ಗೊಂಡಿರುವುದು ಕಳವಳ ವಿಷಯ ಎಂದು
ತಿಳಿಸಿದ್ದಾರೆ.
ಹಜಾಮ, ವಡ್ಡ ಹೀಗೆ ಜಾತಿಸೂಚಕ ಜಾತಿನಿಂಧನೆ ಪದಗಳನ್ನು ನಿಷೇಧಿಸಲಾಗಿದೆ. ಆದರೆ ಸಚಿವರಾಗಿದ್ದಂತಹವರು ತಮ್ಮ ನಾಲಿಗೆ ಹರಿಬಿಟ್ಟು ಸವಿತಾ ಸಮಾಜವನ್ನು ಅಪಮಾನಿಸುವ,
ಅವಮಾನಿಸುವ ಕೆಲಸ ಮಾಡಿರುವುದು ಅತ್ಯಂತ ಖಂಡನೀಯ. ನಾಲಿಗೆ ಹರಿಬಿಟ್ಟು ಬಳಿಕ ಕ್ಷಮೆಯಾಚಿಸುವ ನಾಟಕವಾಡುವ ಇಂತಹ ರಾಜಕಾರಣಿಗಳನ್ನು
ಪಕ್ಷದಿಂದಲೇ ಉಚ್ಛಾಟಿಸಬೇಕು. ಆಗ ಮಾತ್ರ ಇಂತಹ ಪದಗಳ ಬಳಕೆಗೆ ಕಡಿವಾಣ ಬೀಳಲಿದೆ.
ಕೂಡಲೇ ಸಿ.ಟಿ.ರವಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು. ಜೊತೆಗೆ ರಾಜ್ಯ ಸರ್ಕಾರ
ಅವರ ವಿರುದ್ಧ ಜಾತಿನಿಂಧನೆ ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕೆಂದು
ಆಗ್ರಹಿಸಿದ್ದಾರೆ.
ಇನ್ಮುಂದೆಯೂ ಈ ರೀತಿ ಯಾವುದೇ ವ್ಯಕ್ತಿಯೂ ಇಂತಹ ಮಾತುಗಳನ್ನಾಡಲು ಭಯಗೊಳ್ಳುವ ರೀತಿ
ಸಿ.ಟಿ.ರವಿ ವಿರುದ್ಧ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಕ್ಷದವರು ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ರಮೇಶ್
ಎಚ್ಚರಿಸಿದ್ದಾರೆ.
