ಬೆಂಗಳೂರು: ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನವನ್ನು ನಡೆಸಲು ಮಾಡಿದ್ದರು. ಆದರೆ ಪಥಸಂಚಲನ ಅಸಾಧ್ಯವಾಗಿದೆ. ಕೋರ್ಟ್ ಈ ಸಂಬಂಧ ವಿಚಾರಣೆಯನ್ನು ಮುಂದೂಡಿದೆ. ನವೆಂಬರ್ 7ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದು, ಹೀಗಾಗಿ ನವೆಂಬರ್ 2ರಂದು ಪಥ ಸಂಚಲನ ನಡೆಯುವುದಿಲ್ಲ.
ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮತ್ತೊಂದು ಶಾಂತಿ ಸಭೆ ಮಾಡುವುದಕ್ಕೆ ಸೂಚನೆ ನೀಡಿದೆ. ನವೆಂಬರ್ 5ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚನೆ ನೀಡಿದೆ.
ನವೆಂಬರ್ 5ರಂದು ಅರ್ಜಿದಾರರು, ಅವರ ವಕೀಲರೊಂದಿಗೆ ಶಾಂತಿ ಸಭೆ ನಡೆಸಲು ಸೂಚಿಸಲಾಗಿದ್ದು, ಇಂತಹ ಘಟನೆಯಾದಾಗ ಪರಿಹಾರ ಹೇಗಿರಬೇಕೆಂಬುದಕ್ಕೆ ಇದು ಮಾರ್ಗಸೂಚಿಯಾಗಬೇಕು ಎಂದು ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರು ಸರ್ಕಾರ, ಅರ್ಜಿದಾರರಿಗೆ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಅನುಮತಿಗೆ ಸರ್ಕಾರ ತಕರಾರು ಹಿನ್ನೆಲೆಯಲ್ಲಿ ರಿಟ್ ಅರ್ಜಿದಾರ ಅಶೋಕ್ ಪಾಟೀಲ್ ಅವರು ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸುವಂತೆ ಮನವಿ ಮಾಡಿದ್ದಾರೆ. 500ಕ್ಕೂ ಹೆಚ್ಚು ಪಥಸಂಚಲನ ನಡೆಸಿದರೂ ಎಲ್ಲೂ ಸಮಸ್ಯೆ ಆಗಿಲ್ಲ. ಕೆಲ ಸಂಘಟನೆಗಳನ್ನು ಸ್ಥಳೀಯ ರಾಜಕಾರಣಿ ಎತ್ತಿಕಟ್ಟುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆಂದು ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸಲು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದಿದೆ.
