ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 14 : ಭದ್ರಾ ಮೇಲ್ದಂಡೆ ಯೋಜನೆ ನೀರು ಪಡೆವ ಸಂಬಂಧ ದಾವಣಗೆರೆ ಜಿಲ್ಲೆಯ ರೈತರು ಮತ್ತೆ ಖ್ಯಾತೆ ತೆಗೆದಿರುವುದಕ್ಕೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಭದ್ರಾದಿಂದ 5.7 ಟಿಎಂಸಿ ನೀರು ಮೇಲೆತ್ತಿ ಕಾಲುವೆಗೆ ಹಾಯಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗುತ್ತಿರುವ ವೇಳೆ ದಾವಣಗೆರೆ ರೈತರು ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ನಮ್ಮ ಕಾಲುವೆಗೆ ನೀರು ಹಾಯಿಸಿ ಎಂದು ಅವರು ಕೇಳಿಕೊಳ್ಳಲಿ, ಆದರೆ ಚಿತ್ರದುರ್ಗಕ್ಕೆ ಬಿಡಬೇಡಿ ಎನ್ನಲು ಅವರಿಗೇನು ಹಕ್ಕಿದೆ. ಉದ್ಯೋಗ ಇಲ್ಲದ ರಾಜಕೀಯ ಮಂದಿ ರೈತರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ತಂತ್ರ ಇದಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಲ್ಲಿ 17.50 ಹಾಗೂ ಭದ್ರಾ ಜಲಾಶಯದಿಂದ 12.45 ಟಿಎಂಸಿ ಯಷ್ಟು ನೀರು ಹಂಚಿಕೆ ಮಾಡಿ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭದ್ರಾ ಜಲಾಶಯದಲ್ಲಿ ಹಾಲಿ 173 ಅಡಿಯಷ್ಟು ನೀರಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಬಳಸಿಕೊಳ್ಳಬೇಕಾದರೆ ಜಲಾಶಯದಲ್ಲಿ ಕನಿಷ್ಟ 144 ಅಡಿಯಷ್ಟು ನೀರಿರಬೇಕು. ಹೆಚ್ಚು ಕಡಿಮೆ 30 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ವಾಸ್ತವಾಂಶ ಹೀಗಿರುವಾಗ ಭದ್ರಾ ಜಲಾಶಯದಿಂದ ನೀರು ಲಿಫ್ಟ್ ಮಾಡಿದರೆ ದಾವಣಗೆರೆ ಮಂದಿ ಕಳೆದುಕೊಳ್ಳುವುದಾದರೂ ಏನು.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದಲೇ ಹೆಚ್ಚು ಪಾಲಿದೆ. ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ತುಂಗಾ ಕಾಮಗಾರಿ ಪೂರ್ಣಗೊಳಿಸಿ ನೀರು ಒಯ್ಯಲಿ, ಅಲ್ಲಿಯವರೆಗೂ ಯೋಜನೆಗೆ ನೀರು ಕೊಡಬಾರದೆನ್ನಲು ದಾವಣಗೆರೆ ರೈತರಿಗೆ ಯಾವುದೇ ನೈತಿಕತೆ ಇಲ್ಲ. ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಮಾಡುವ ಹಾಗೂ ಕನಿಷ್ಟ ಬದ್ದತೆ ಪ್ರದರ್ಶಿಸುವ ಕೆಲಸವ ದಾವಣಗೆರೆ ರೈತರು ಮಾಡಲಿ ಎಂದು ನೀರಾವರಿ ಅನುಷ್ಠಾನ ಸಮಿತಿ ಸಲಹೆ ಮಾಡಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ನಾಲ್ಕು ಜಿಲ್ಲೆಗಳ 367 ಕೆರೆಗಳ ತುಂಬಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕುಡಿವ ನೀರು ಪೂರೈಕೆಗೆ ಅನುಕೂಲವಾಗುತ್ತದೆ. ದಾವಣಗೆರೆ ರೈತರ ರೀತಿ ಗದ್ದೆ ಹೊಡೆದು, ಭತ್ತ ಬೆಳೆದು ನೀರನ್ನು ಪೋಲು ಮಾಡಲು ಹೋಗುವುದಿಲ್ಲ. ಸದಾ ಬರವನ್ನೇ ಉಂಡಿರುವ ಚಿತ್ರದುರ್ಗ ಜಿಲ್ಲೆಯ ರೈತರಿಗೆ ನೀರನ್ನು ಮಿತವಾಗಿ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಇದೆ. ದಾವಣಗೆರೆ ಜಿಲ್ಲೆ ರೈತರು ವಾಟರ್ ಮ್ಯಾನೇಜ್ ಮೆಂಟ್ ಬಗ್ಗೆ ಕನಿಷ್ಟ ತಿಳುವಳಿಕೆ ಇಟ್ಟುಕೊಳ್ಳುವುದು ಅಗತ್ಯ.
ಭದ್ರಾ ಜಲಾಶಯವ ನಿರ್ಮಿಸಿದಾಗ ಅರೆ ನೀರಾವರಿಯ ಒಂದು ಬೆಳೆಗೆ ಮಾತ್ರ ನೀರು ಪೂರೈಕೆ ಎಂಬ ಒಡಂಬಡಿಕೆ ಇದೆ. ಅಂದರೆ ಸೇಂಗಾ, ಸೂರ್ಯಕಾಂತಿ, ಮೆಕ್ಕೇಜೋಳದಂತಹ ಪೈರು ಬೆಳೆಯಬೇಕು. ಎಲ್ಲಿಯೂ ಗದ್ದೆ ಮಾಡಿ ಭತ್ತ ಬೆಳೆಯುವಂತಿಲ್ಲ. ದಾವಣಗೆರೆ ರೈತರು ಗದ್ದೆ ಮಾಡಿ ಎರಡು ಫಸಲು ಪಡೆಯುತ್ತಿದ್ದಾರೆ. ಈ ರೀತಿ ನೀರನ್ನು ಸ್ವೇಚ್ಚಾಚಾರವಾಗಿ ಬಳಕೆ ಮಾಡಿಕೊಳ್ಳಲು ಅವರಿಗೆ ಹಕ್ಕು ನೀಡಿದವರು ಯಾರು. ಈ ಬಗ್ಗೆ ಹೇಳಿಕೆ ನೀಡುತ್ತಿರುವ ದಾವಣಗೆರೆ ಜಿಲ್ಲೆಯ ಸ್ವಯಂ ಘೋಷಿತ ನೀರಾವರಿ ತಜ್ಞರು ಮೊದಲು ಸ್ಪಷ್ಟಪಡಿಸಲಿ.
ಭದ್ರಾ ಮೇಲ್ಡಂಡೆಯಡಿ ಜಗಳೂರಿಗೆ ನೀರು ಕೊಡಬೇಕಾಗಿದೆ.ಜಗಳೂರು ಕೂಡಾ ದಾವಣಗೆರೆ ಜಿಲ್ಲೆಯಲ್ಲಿದೆ. ಆ ತಾಲೂಕನ್ನು ಕಡೆಗಣಿಸುವುದು ಸೂಕ್ತವಲ್ಲ. ದಾವಣಗೆರೆ ರೈತರು ಜಗಳೂರಿಗೆ ಬೇಗನೆ ನೀರು ಕೊಡಿ ಎಂದು ಸರ್ಕಾರವ ಆಗ್ರಹಿಸಬೇಕು. ಅದು ಬಿಟ್ಟು ತಮ್ಮ ಜಿಲ್ಲೆಯಲ್ಲಿರುವ ಜಗಳೂರು ತಾಲೂಕಿನವರ ಸವತಿ ಮಕ್ಕಳಂತೆ ಕಾಣುವುದು ಸೂಕ್ತವಲ್ಲ.
ಭದ್ರಾ ಮೇಲ್ದಂಡೆ ವಿಷಯ ಬಂದಾಗಲೆಲ್ಲ ದಾವಣಗೆರೆ ಮಂದಿ ನೀರು ಬಿಡಬೇಡಿ ಎಂದು ಚೇಷ್ಟೆ ಮಾತುಗಳನ್ನಾಡುವುದ ಮೊದಲು ಬಿಡಲಿ. ಯೋಜನೆಗೆ ಈಗಾಗಲೇ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ವಿವಿ ಸಾಗರ ಜಲಾಶಯಕ್ಕೆ 20 ಕ್ಕೂ ಹೆಚ್ಚು ಟಿಎಂಸಿ ನೀರನ್ನು ಲಿಫ್ಟ್ ಮಾಡಿ ಯೋಜನೆ ಸಾಕಾರಗೊಂಡಿರುವುದ ತೋರಿಸಲಾಗಿದೆ. ಹೊಟ್ಟೆ ತುಂಬಾ ಉಂಡವರಿಗಿಂತ ಹಸಿದವರ ಆಕ್ರೋಶ ಜಾಸ್ತಿ ಎಂಬ ಮಾತು ದಾವಣಗೆರೆ ಜಿಲ್ಲೆ ರೈತರಿಗೆ ನೆನಪಿದ್ದರೆ ಸಾಕು ಎಂದು ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.










