ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ಬಯಲುಸೀಮೆಯ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ₹5,300 ಕೋಟಿ (ಪರಿಷ್ಕೃತ ಲೆಕ್ಕದಲ್ಲಿ ₹6,200 ಕೋಟಿ) ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಚಿತ್ರದುರ್ಗ ಜಿಲ್ಲೆಯ ನೀರಾವರಿ ಹೋರಾಟದ ಬುನಾದಿಯೇ ಜಿಲ್ಲೆಯ ಪತ್ರಕರ್ತರು ಮತ್ತು ಪತ್ರಿಕೆಗಳಾಗಿದ್ದು, ಯೋಜನೆ ಜಾರಿ ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿಯಲ್ಲೂ ಮಾಧ್ಯಮಗಳು ಹೋರಾಟದ ಭಾಗವಾಗಿದ್ದರಿಂದಲೇ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿದೆ. ಎಚ್.ಹನುಮಂತಪ್ಪ, ಎಂ.ಜಯಣ್ಣ ಹಾಗೂ ಪಿ.ಕೋದಂಡರಾಮಯ್ಯ ಅವರ ಅಧ್ಯಕ್ಷತೆಯ ಹೋರಾಟ ಸಮಿತಿಯು ಅನೇಕ ಚಳವಳಿಗಳನ್ನು ಯಶಸ್ವಿಯಾಗಿ ನಡೆಸಲು ಪತ್ರಕರ್ತರು ಮತ್ತು ಜಿಲ್ಲೆಯ ಪತ್ರಿಕೆಗಳೇ ಪ್ರಮುಖ ಕಾರಣವಾಗಿದ್ದಾರೆ ಎಂದು ಸಮಿತಿ ತಿಳಿಸಿದೆ.
ಹೋರಾಟದ ತೀವ್ರತೆಗೆ ಸ್ಪಂದಿಸಿದ ಕೇಂದ್ರ ಸರ್ಕಾರವು ಈ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡಿದ್ದರ ಜೊತೆಗೆ ಬಜೆಟ್ನಲ್ಲಿ ₹5,300 ಕೋಟಿ (ಪರಿಷ್ಕೃತ ಲೆಕ್ಕದಲ್ಲಿ ₹6,200 ಕೋಟಿ) ಅನುದಾನವನ್ನು ಘೋಷಿಸಿದೆ. ಆದರೆ, ಇಲ್ಲಿಯವರೆಗೂ ಈ ಅನುದಾನದಲ್ಲಿ ಬಿಡಿಗಾಸೂ ಬಿಡುಗಡೆಯಾಗಿಲ್ಲ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿಯೇ ತೊಡಗಿದ್ದು, ಯೋಜನೆಯ ಕಾಮಗಾರಿ ತೀವ್ರ ವಿಳಂಬವಾಗುತ್ತಿದೆ ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನಸೆಳೆಯಲು ಈ ಹೋರಾಟದ ಮೌನ ಕಹಳೆಯ ಭಾಗವಾಗಿ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ಜಾರಿ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತೇವೆಂಬ ಸಂದೇಶ ರವಾನಿಸಬೇಕು. ಅಲ್ಲದೆ, ಕೇಂದ್ರದ ಗಮನ ಸೆಳೆದು ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಬರಗಾಲದಿಂದ ಬಯಲುಸೀಮೆ ಪ್ರದೇಶವನ್ನು ಮುಕ್ತವನ್ನಾಗಿಸಲು ಜಿಲ್ಲೆಯ ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಕೈಜೋಡಿಸಬೇಕೆಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಮನವಿ ಮಾಡಿದ್ದಾರೆ.









