ಸುದ್ದಿಒನ್, ಚಿತ್ರದುರ್ಗ, ಆ.14 : ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದಿಂದ ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ಬಸ್ ನಿಲ್ದಾಣಗಳಿಂದ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ಆಗಸ್ಟ್ 15 ಮತ್ತು 16 ರಂದು ಈ ವಿಶೇಷ ಬಸ್ ಕಾರ್ಯಚರಣೆ ನಡೆಸಲಿದ್ದು, ಚಿತ್ರದುರ್ಗ – ಹೊಳಲ್ಕೆರೆ – ಚನ್ನಗಿರಿ – ಶಿವಮೊಗ್ಗ – ಸಾಗರ ಮಾರ್ಗವಾಗಿ ವರದಮೂಲ, ಇಕ್ಕೇರಿ ಹಾಗೂ ಜೋಗ ಜಲಪಾತಕ್ಕೆ ಸಂಚರಿಸಲಿವೆ.
ಚಳ್ಳಕೆರೆಯಿಂದ ಜೋಗಕ್ಕೆ ಹೊರಡುವ ಬಸ್ ಬೆಳಿಗ್ಗೆ 5:15ಕ್ಕೆ ನಿರ್ಗಮಿಸಲಿದ್ದು, ರಾತ್ರಿ 10:00 ಗಂಟೆಗೆ ವಾಪಸ್ ತಲುಪಲಿದೆ. ಈ ಮಾರ್ಗಕ್ಕೆ ವಯಸ್ಕರಿಗೆ ರೂ.600 ಹಾಗೂ ಮಕ್ಕಳಿಗೆ ರೂ500 ದರ ನಿಗದಿಪಡಿಸಲಾಗಿದೆ.
ಚಿತ್ರದುರ್ಗದಿಂದ ಹೊರಡುವ ಬಸ್ ಬೆಳಿಗ್ಗೆ 6:00 ಗಂಟೆಗೆ ಸಂಚಾರ ಆರಂಭಿಸಿ ರಾತ್ರಿ 9:15ಕ್ಕೆ ವಾಪಸ್ ತಲುಪಲಿದ್ದು, ವಯಸ್ಕರಿಗೆ ರೂ.500 ಹಾಗೂ ಮಕ್ಕಳಿಗೆ ರೂ400 ಟಿಕೆಟ್ ದರ ಇರಲಿದೆ. ಹೊಳಲ್ಕೆರೆಯಿಂದ ಬೆಳಿಗ್ಗೆ 6:45ಕ್ಕೆ ಹೊರಡುವ ಬಸ್ ರಾತ್ರಿ 8:15ಕ್ಕೆ ವಾಪಸ್ ಬರಲಿದ್ದು, ಈ ಪ್ರಯಾಣಕ್ಕೆ ವಯಸ್ಕರಿಗೆ ರೂ450 ಹಾಗೂ ಮಕ್ಕಳಿಗೆ ರೂ.350 ದರ ನಿಗದಿ ಮಾಡಲಾಗಿದೆ.
ಈ ವಿಶೇಷ ಟೂರ್ ಪ್ಯಾಕೇಜ್ಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಅನ್ವಯಿಸುವುದಿಲ್ಲ. ಸಾರ್ವಜನಿಕರು ನಿಗಮದ ವೆಬ್ಸೈಟ್ ತಿತಿತಿ.ಞsಡಿಣಛಿ.iಟಿ ಮೂಲಕ ಆನ್ಲೈನ್ನಲ್ಲಿ ಮುಂಗಡ ಆಸನ ಕಾಯ್ದಿರಿಸಬಹುದು. ಆಸನಗಳು ಖಾಲಿ ಇದ್ದಲ್ಲಿ ನೇರವಾಗಿ ಬಸ್ ನಿರ್ವಾಹಕರಿಂದಲೂ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.









