ಚಿತ್ರದುರ್ಗ ಫೆ. 01 : ಏಳುಸುತ್ತಿನ ಕೋಟೆಯ ನಾಡು, ಐತಿಹಾಸಿಕ ಪರಂಪರೆ, ವೀರಗಾಥೆಗಳು ಮತ್ತು ಸಾಂಸ್ಕøತಿಕ ವೈಭವದಿಂದ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗವನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಪ್ರಾರಂಭಿಸಿದ್ದು, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಶ್ರಮದ ಫಲವಾಗಿ ಇದು ಅನುಷ್ಠಾನಕ್ಕೆ ಬಂದಿದೆ.
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೋಟೆಯ ನಾಡು ಚಿತ್ರದುರ್ಗದ ಐತಿಹಾಸಿಕ ಮಹತ್ವವನ್ನು ಸದನದಲ್ಲಿ ಮಂಡಿಸಿ, ಚಿತ್ರದುರ್ಗಕ್ಕೆ ಚಿತ್ರದುರ್ಗಕ್ಕೆ ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಜಾರಿಗೊಳಿಸುವಂತೆ ಮಾಡಿದ ಮನವಿಗೆ ಫಲ ದೊರೆತಿದ್ದು, ಈಗಾಗಲೆ ಕೆಎಸ್ಟಿಡಿಸಿ ವತಿಯಿಂದ ಪ್ರತಿ ವಾರ ಗುರುವಾರದಿಂದ ಭಾನುವಾರದವರೆಗೂ ನಿತ್ಯವೂ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸ ಪ್ಯಾಕೇಜ್ ಲಭ್ಯಗೊಳಿಸಲಾಗಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಇದುವರೆಗೂ ಸುಮಾರು 7 ಟ್ರಿಪ್ ಪ್ರವಾಸಗಳು ಪೂರ್ಣಗೊಂಡಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದುರ್ಗದ ಕೊಟೆ, ಐತಿಹಾಸಿಕ ಸ್ಥಳಗಳು ಮತ್ತು ಸ್ಥಳೀಯ ಸಂಸ್ಕøತಿಯ ಬಗ್ಗೆ ಶ್ಲಾಘನೆ ದೊರೆಯುತ್ತಿದೆ. ಕೋಟೆ ನಾಡಿನ ಖ್ಯಾತಿ ರಾಜ್ಯಾದ್ಯಂತ ಪ್ರತಿಧ್ವನಿಸುವ ಸಾಧನೆ, ಜನರ ಧ್ವನಿಯನ್ನು ಸದನಕ್ಕೆ ತಲುಪಿಸಿ, ಕ್ಷೇತ್ರದ ಹಿತಕ್ಕಾಗಿ ಪ್ರಯತ್ನಿಸಿದ ಫಲದಿಂದಾಗಿ ಚಿತ್ರದುರ್ಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಮುಂಚೂಣಿಗೆ ಬರಲು ಸಾಧ್ಯವಾಗಲಿದೆ.
ಪ್ಯಾಕೇಜ್ನಲ್ಲಿ ಏನೇನಿದೆ : ಕೆಎಸ್ಟಿಡಿಸಿ ವತಿಯಿಂದ ಪ್ರತಿ ವಾರ ಗುರುವಾರದಿಂದ ಭಾನುವಾರದವರೆಗೂ ನಿತ್ಯವೂ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಒಂದು ದಿನದ ಪ್ರವಾಸವನ್ನು ಸುಸಜ್ಜಿತ ಅತ್ಯುತ್ತಮ ಹಾಗೂ ಆರಾಮದಾಯಕ ಬಸ್ನಲ್ಲಿ ಏರ್ಪಡಿಸುತ್ತಿದ್ದು, ಪ್ರತಿ ಒಂದು ಸೀಟ್ಗೆ ರೂ. 1073 ದರ ನಿಗದಿಪಡಿಸಲಾಗಿದೆ. ಇದರಲ್ಲಿ ಸಾಗಾಣಿಕೆ ಮತ್ತು ಗೈಡ್ ಸೌಲಭ್ಯ ಇರುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 06 ಗಂಟೆಗೆ ಹೊರಡುವ ಬಸ್ ಚಿತ್ರದುರ್ಗಕ್ಕೆ ಆಗಮಿಸಿ, ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಭೇಟಿ ನೀಡಲಿದೆ. ಸಂಜೆ 05 ಗಂಟೆಯ ಬಳಿಕ ಚಿತ್ರದುರ್ಗದಿಂದ ಹೊರಟು, ರಾತ್ರಿ 10 ಗಂಟೆಯ ವೇಳೆಗೆ ವಾಪಸ್ ಬೆಂಗಳೂರು ತಲುಪಲಿದೆ. ಪ್ರಾಯೋಗಿಕವಾಗಿ ನಾವು ಗುರುವಾರದಿಂದ ಭಾನುವಾರದವರೆಗೆ ನಿತ್ಯವೂ ಟ್ರಿಪ್ ಹಾಕಿಕೊಳ್ಳುತ್ತಿದ್ದೇವೆ. ಸೀಟ್ಗಳ ಬುಕಿಂಗ್ ಆಧಾರದಲ್ಲಿ ಪ್ರವಾಸ ಏರ್ಪಡಿಸುತ್ತೇವೆ, ಈಗಾಗಲೆ 7 ಟ್ರಿಪ್ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆಎಸ್ಟಿಡಿಸಿ ವತಿಯಿಂದ ಹಾಕಿಕೊಂಡಿರುವ ಈ ನೂತನ ಪ್ರವಾಸ ಪ್ಯಾಕೇಜ್ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಹೆಚ್ಚು ಹೆಚ್ಚು ಪ್ರವಾಸಿಗರ ಬೇಡಿಕೆ ಬಂದಲ್ಲಿ ವಾರದ ಎಲ್ಲ ದಿನವೂ ಪ್ರವಾಸ ಏರ್ಪಡಿಸುತ್ತೇವೆ. ಆನ್ಲೈನ್ ಮೂಲಕ ಸದ್ಯ ಬೆಂಗಳೂರಿನಿಂದ ಮಾತ್ರ ಪ್ಯಾಕೇಜ್ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಿದ್ದು, ಆಸಕ್ತರು https://kstdc.co ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080-43344334 ದೂರವಾಣಿಯನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಕೆಎಸ್ಟಿಡಿಸಿ ವ್ಯವಸ್ಥಾಪಕ ಚೇತನ್ ಅವರು.
ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪ್ರಾಚೀನ ಮಹತ್ವವುಳ್ಳ ಅನೇಕ ಪ್ರವಾಸಿ ತಾಣಗಳಿವೆ. ಇದರಲ್ಲಿ ಚಿತ್ರದುರ್ಗದ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ಕೂಡ ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಮಹತ್ವವನ್ನು ಸಾರುವಂತಾಗಲು ಕೆಎಸ್ಟಿಡಿಸಿ ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ನಿರತವಾಗಿದೆ. ಇದು ಕೇವಲ ಪ್ರವಾಸ ಮಾತ್ರವಲ್ಲ, ಇದರಿಂದಾಗಿ ಸ್ಥಳೀಯರಿಗೂ ಉದ್ಯೋಗ, ವ್ಯಾಪಾರ, ವಾಣಿಜ್ಯಕ್ಕೆ ಉತ್ತೇಜನ ದೊರೆತಂತಾಗುತ್ತದೆ ಎಂದು ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
– ಪ್ರಶಾಂತ್ ಕುಮಾರ್ ಮಿಶ್ರಾ,
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ,
ಬೆಂಗಳೂರು
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













