ಹಾವೇರಿ: ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಮುಸ್ಲಿಮರು ನಮಾಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ಏರ್ಪೋರ್ಟ್ ಸಿಬ್ಬಂದಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ನಮಾಜ್ ಮಾಡುವುದಕ್ಕೆಂದು ಬೇರೆ ಕೊಠಡಿ ಇದ್ದರು ಕೂಡ ಹೀಗೆ ಸಾರ್ವಜನಿಕವಾಗಿ ನಮಾಜ್ ಮಾಡಲು ಬಿಟ್ಟಿದ್ದೇಕೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಮಾಜಿ ಸಚಿವ ಆಂಜನೇಯ ಆಡಿದ ಮಾತುಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾವೇರಿಯಲ್ಲಿ ಮಾತನಾಡಿದ ಆಂಜನೇಯ, ಅದು ಪ್ರಾರ್ಥನೆ ಮಾಡುವುದು, ಕೋಲು ಹಿಡಿದುಕೊಂಡು ಹೋಗುವುದಲ್ಲ. ಗೊತ್ತಾಯ್ತಾ, ಏನು ನಮಾಜ್ ಮಾಡಬಾರದಾ..? ಪ್ರಾರ್ಥನೆ ಮಾಡಿರುವುದು. ಜನಗಳನ್ನೆಲ್ಲ ಕರೆದು ಮೈಕ್ ಹಿಡಿದುಕೊಂಡು ಮಾಡ್ತಾರಾ..? ಅವರಲ್ಲಿರುವ ಶ್ರದ್ಧೆಯನ್ನಾದರೂ ನೋಡಿ ಕಲಿತುಕೊಳ್ಳಿ ಬೇರೆಯವರೆಲ್ಲಾ. ನಮಾಜ್ ಗೆ ಟೈಮ್ ಆಯ್ತು ಅಂದ್ರೆ ಬಸ್ ಸ್ಟಾಪ್ ಇದ್ರೆ ಬಸ್ ಸ್ಟಾಪ್ ನಲ್ಲಿಯೇ ಮಾಡ್ತಾರೆ.
ಏನು ಇವ್ರ ಥರ ನಾಮ ಹಾಕಿಕೊಂಡು, ಪೂಜೆ ಇಟ್ಟುಕೊಂಡು, ಹಾಕಯ್ಯ ತಟ್ಟೆಗೆ ಅಂತ ಕೇಳಿಲ್ಲ. ಅವರೇನು ಮೂರ್ಖರಲ್ಲ. ಮಸೀದಿ ಇದೆ ಅಲ್ಲೋಗಿ ಮಾಡ್ತಾರೆ. ದಾರಿಯಲ್ಲಿ ಯಾಕೆ ಮಾಡ್ತಾರೆ..? ಅವರು ಕರೆಕ್ಟ್ ಆಗಿದ್ದಾರೆ. ಅವರ ಆಚರಣೆ ಬೇರೆ ಇವರ ಆಚರಣೆ ಬೇರೆ. ಯಾರ ಆಚರಣೆಗೂ ಧಕ್ಕೆಯಾಗಬಾರದು. ತೊಂದ್ರೆ ಕೊಡುವಂತಹ ಕೆಲಸವನ್ನು ಮಾಡಬಾರದು. ಯಾವುದೋ ಒಂದು ವರ್ಗದ ವಿರುದ್ಧ ಶಕ್ತಿ ಪ್ರದರ್ಶನ ಮಾಡಬಾರದು. ಗಣೇಶನ ಹಬ್ಬದಲ್ಲಿ ಬ್ರ್ಯಾಂಡಿ ಅಂಗಡಿಗಳು ಫುಲ್ ರಶ್ ಇರುತ್ತವೆ. ಗಣೇಶ ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಬದಲಾಗಿ ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಹೌಸ್ಫುಲ್ ಆಗುತ್ತವೆ ಎಂದು ಹೆಚ್.ಆಂಜನೇಯ ಅಭಿಪ್ರಾಯ ತಿಳಿಸಿದ್ದಾರೆ.

