ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 : ಇತ್ತೀಚೆಗೆ ಕರ್ನಾಟಕ ಸರ್ಕಾರ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕವನ್ನು ತೆಗೆದು, ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತಂದಿದೆ. ಈ ಮೂಲಕ, ತೃತೀಯ ಭಾಷೆಯನ್ನು ಕಡ್ಡಾಯ ತೇರ್ಗಡೆ ಹೊರಗಿರಿಸಿ, ಎಸೆಸೆಲ್ಸಿ ಒಟ್ಟಾರೆ ಅಂಕವನ್ನು 525ಕ್ಕೆ ಇಳಿಸಿದೆ. ಹಿಂದಿ ಭಾಷೆಯನ್ನು ಗುರಿಯಾಗಿರಿಸಿ, ತೃತೀಯ ಭಾಷೆಯ ಹೊರೆ ಕಡಿಮೆ ಗೊಳಿಸಿರುವುದು ಮುಂದೆ ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವತ್ತ ಪ್ರಮುಖ ಹೆಜ್ಜೆಯಾಗಿದೆ. ಭಾಷಾ ತಜ್ಞರು, ಶಿಕ್ಷಣ ತಜ್ಞರು ಹಲವು ವರ್ಷಗಳಿಂದ ದ್ವಿಭಾಷಾ ನೀತಿಗಾಗಿ ಆಗ್ರಹಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಜನರ ಬೇಡಿಕೆಗೆ ಮನ್ನಣೆ ನೀಡುತ್ತಾ ಸರ್ಕಾರ ಗ್ರೇಡಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಆದರೆ, ಈ ಸಂಪೂರ್ಣ ಪ್ರಕ್ರಿಯೆ ಪರೀಕ್ಷೆಯ ಮಧ್ಯ ಭಾಗದಲ್ಲಿ ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಅಪ್ರಜಾತಾಂತ್ರಿಕವಾಗಿ ಘೋಷಿಸಿರುವುದು ಅತ್ಯಂತ ಖಂಡನೀಯ.
ಇದೀಗ, ವಿದ್ಯಾರ್ಥಿಗಳ ಹಿತದೃಷ್ಟಿಯ ಹೆಸರಿನಲ್ಲಿ ಇಂತಹ ನೀತಿಯನ್ನು ಅಪ್ರಜಾತಾಂತ್ರಿಕವಾಗಿ ಜಾರಿಗೆ ತಂದರೆ, ಮುಂದೆ ಇದೇ ರೀತಿಯಲ್ಲಿ ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಸಹ ಯಾವುದೇ ಸಮಾಲೋಚನೆ, ಚರ್ಚೆ ಇಲ್ಲದೆ ಜಾರಿಗೆ ತರುವುದು ಸರ್ವೇ ಸಾಮಾನ್ಯ ಎಂಬಂತಾಗುತ್ತದೆ. ಈ ರೀತಿ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು, ಪೋಷಕರು ಯಾರ ಅಭಿಪ್ರಾಯವನ್ನು ಪಡೆಯದೇ ನೀತಿಗಳನ್ನು ಬದಲಾಯಿಸುವ ಪ್ರಕ್ರಿಯೆ ಶಿಕ್ಷಣದ ಆಶಯಕ್ಕೆ ಧಕ್ಕೆ ಉಂಟುಮಾಡುತ್ತದೆ.
ಮಾತೃಭಾಷೆ ಮತ್ತು ಆಂಗ್ಲ ಭಾಷೆಯನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಹೇಳುತ್ತಲೇ, AIDSO ವಿದ್ಯಾರ್ಥಿ ಸಂಘಟನೆಯು ಶಿಕ್ಷಣ ನೀತಿಗಳನ್ನು ಅಪ್ರಜಾತಾಂತ್ರಿಕವಾಗಿ ಜಾರಿಗೆ ತರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸುತ್ತದೆ.

















