ಹುಟ್ಟಿದ ಮೇಲೆ ಸಾವು ಖಚಿತ ಎಂಬುದು ಪ್ರಕೃತಿಯ ನಿಯಮ. ಆದರೆ ಸಾವಿನ ನಂತರ ಏನಾಗುತ್ತದೆ? ಈ ಪ್ರಶ್ನೆಗೆ ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲೊಂದಾದ ‘ಗರುಡ ಪುರಾಣ’ದಲ್ಲಿ ಸ್ಪಷ್ಟವಾದ ಉತ್ತರಗಳಿವೆ. ಗರುಡ ಪುರಾಣದ ಪ್ರಕಾರ, ಮನುಷ್ಯ ಮರಣ ಹೊಂದಿದ ತಕ್ಷಣ ಆತನ ಆತ್ಮವು ಈ ಲೋಕವನ್ನು ಬಿಟ್ಟು ಹೋಗುವುದಿಲ್ಲ. ಬದಲಿಗೆ, ಅಂತಿಮ ಪ್ರಯಾಣ ಬೆಳೆಸುವ ಮುನ್ನ ಪವಿತ್ರ 13 ದಿನಗಳ ಕಾಲ ತನ್ನ ಕುಟುಂಬದ ಸುತ್ತಮುತ್ತಲೇ ಇರುತ್ತದೆ ಎನ್ನಲಾಗಿದೆ. ಆ 13 ದಿನಗಳಲ್ಲಿ ಆತ್ಮದ ಸ್ಥಿತಿ ಹೇಗಿರುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಮೊದಲ 24 ಗಂಟೆಗಳಲ್ಲಿ ಏನಾಗುತ್ತದೆ?
ಮನುಷ್ಯನ ಪ್ರಾಣ ಹೋದ ತಕ್ಷಣವೇ ಯಮದೂತರು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಚಿತ್ರಗುಪ್ತನು ಆ ಜೀವಿಯು ಜೀವಿತಾವಧಿಯಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕಾಚಾರವನ್ನು ಪರಿಶೀಲಿಸುತ್ತಾನೆ. ಈ ಸಂಪೂರ್ಣ ಪ್ರಕ್ರಿಯೆಯು ಸಾವಿನ ಮೊದಲ 24 ಗಂಟೆಗಳ ಒಳಗಾಗಿ ಮುಕ್ತಾಯಗೊಳ್ಳುತ್ತದೆ. ಲೆಕ್ಕಾಚಾರ ಮುಗಿದ ನಂತರ, ಯಮದೂತರು ಆತ್ಮವನ್ನು ಮರಳಿ ಅದರ ಸ್ವಂತ ಮನೆಗೇ ತಂದು ಬಿಡುತ್ತಾರೆ.
1 ರಿಂದ 10ನೇ ದಿನ: ಸೂಕ್ಷ್ಮ ರೂಪದಲ್ಲಿ ಆತ್ಮದ ಸಂಚಾರ
ಮನೆಗೆ ಮರಳಿದ ಆತ್ಮವು ಅತ್ಯಂತ ಸೂಕ್ಷ್ಮ ರೂಪವನ್ನು ಧರಿಸಿರುತ್ತದೆ. ಈ 10 ದಿನಗಳ ಕಾಲ ಅದು ತಾನು ಬದುಕಿದ್ದ ಮನೆ ಹಾಗೂ ತನ್ನ ಅಂತ್ಯಕ್ರಿಯೆ ನಡೆದ ಜಾಗದ ಸುತ್ತಮುತ್ತಲೇ ಅಲೆಯುತ್ತಿರುತ್ತದೆ. ಈ ಸಮಯದಲ್ಲಿ ಕುಟುಂಬಸ್ಥರು ಮಾಡುವ ‘ಪಿಂಡ ಪ್ರದಾನ’ ಮತ್ತು ಇತರ ಧಾರ್ಮಿಕ ವಿಧಿವಿಧಾನಗಳೇ ಆ ಆತ್ಮಕ್ಕೆ ಆಹಾರವಾಗುತ್ತವೆ. ಇವುಗಳಿಂದಲೇ ಆತ್ಮಕ್ಕೆ ಮುಂದಿನ ಕಠಿಣ ಪ್ರಯಾಣಕ್ಕೆ ಅಗತ್ಯವಿರುವ ಶಕ್ತಿ ಸಿಗುತ್ತದೆ.
11 ಮತ್ತು 12ನೇ ದಿನ: ವಿಶೇಷ ಪೂಜೆ ಹಾಗೂ ದಾನಧರ್ಮ
ಈ ದಿನಗಳಲ್ಲಿ ಕುಟುಂಬದವರು ವಿಶೇಷ ಪೂಜೆಗಳನ್ನು ನೆರವೇರಿಸಿ, ದಾನಧರ್ಮಗಳನ್ನು ಮಾಡುತ್ತಾರೆ. ಇದು ಆತ್ಮದ ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ. ಕುಟುಂಬಸ್ಥರ ಪ್ರಾರ್ಥನೆಗಳು ಹಾಗೂ ಸಂಜೆ ಬೆಳಗುವ ದೀಪವು ಆತ್ಮಕ್ಕೆ ಮಾರ್ಗದರ್ಶನ ನೀಡುತ್ತವೆ. ಈ ಮೂಲಕ ಆತ್ಮವು ಲೌಕಿಕ ಬಂಧನಗಳನ್ನು ಕಡಿದುಕೊಂಡು, ಯಮಲೋಕದತ್ತ ಪ್ರಯಾಣಿಸಲು ಸಿದ್ಧವಾಗುತ್ತದೆ.
13ನೇ ದಿನ: ಮನೆಯಿಂದ ಕಡೆಗಾಲದ ವಿದಾಯ!
ಗರುಡ ಪುರಾಣದ ಪ್ರಕಾರ, ಮರಣ ಹೊಂದಿದ 13ನೇ ದಿನದಂದು ಆತ್ಮವು ತನ್ನ ಮನೆ ಹಾಗೂ ಈ ಐಹಿಕ ಪ್ರಪಂಚವನ್ನು ಶಾಶ್ವತವಾಗಿ ತೊರೆಯುತ್ತದೆ. 13ನೇ ದಿನದ ಉತ್ತರಕ್ರಿಯೆ ಹಾಗೂ ವಿಧಿವಿಧಾನಗಳು ಮುಗಿದ ತಕ್ಷಣ, ಯಮದೂತರು ಆತ್ಮವನ್ನು ಯಮಲೋಕದತ್ತ ಕರೆದೊಯ್ಯುತ್ತಾರೆ. ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಈ ಅಂತಿಮ ಪ್ರಯಾಣವು 47 ದಿನಗಳಿಂದ ಹಿಡಿದು ಒಂದು ವರ್ಷದವರೆಗೆ ತೆಗೆದುಕೊಳ್ಳಬಹುದು.
13 ದಿನಗಳ ಕಾಲ ಕುಟುಂಬಸ್ಥರು ಪಾಲಿಸಬೇಕಾದ ನಿಯಮಗಳು:
ಶುಚಿತ್ವಕ್ಕೆ ಆದ್ಯತೆ: ಆತ್ಮವು ಮನೆಯಲ್ಲೇ ಇರುವುದರಿಂದ ಸಾವು ಸಂಭವಿಸಿದ ಮನೆಯನ್ನು 13 ದಿನಗಳ ಕಾಲ ಅತ್ಯಂತ ಸ್ವಚ್ಛವಾಗಿಡಬೇಕು.
ದಿನಚರಿ: ಕುಟುಂಬದ ಸದಸ್ಯರು ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು. ರಾತ್ರಿಯ ಸಮಯದಲ್ಲಿ ಅತಿಯಾಗಿ ಅಳುವುದನ್ನು ತಪ್ಪಿಸಬೇಕು.
ಹೆಸರಿಡಿದು ಕರೆಯಬೇಡಿ: ಮೃತಪಟ್ಟವರ ಹೆಸರನ್ನು ಪದೇ ಪದೇ ನೆನೆದು ಜೋರಾಗಿ ಅಳುವುದು ಅಥವಾ ಅವರನ್ನು ಕೂಗುವುದನ್ನು ಮಾಡಬಾರದು. ಹೀಗೆ ಮಾಡುವುದರಿಂದ ಆತ್ಮಕ್ಕೆ ತೀವ್ರ ನೋವು ಮತ್ತು ಗೊಂದಲ ಉಂಟಾಗಿ, ಅದರ ಮುಂದಿನ ಪ್ರಯಾಣಕ್ಕೆ ಅಡ್ಡಿಯಾಗುತ್ತದೆ.

















