ಬೆಂಗಳೂರು: ವಾಲ್ಮೀಕಿ ಹಗರದಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ಅವರು ರಾಜೀನಾಮೆ ಕೊಡುವಂತೆ ಆಯ್ತು. ಮತ್ತೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಈ ಸಂಬಂಧ ಜಮೀರ್ ಅಹ್ಮದ್ ಕೂಡ ಮಾತನಾಡಿದ್ದರು. ಈ ಸಂಬಂಧ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವಂಥದ್ದು. ಸಾಮಾನ್ಯವಾಗಿ ಸಂಪುಟ ವಿಸ್ತಾರಣೆಯಾಗಿ, ಪುನರ್ ರಚನೆಯಾಗಲಿ ಇದೆಲ್ಲವು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ನಮಗೆ ಯಾರಿಗೂ ಗೊತ್ತಾಗುವುದಿಲ್ಲ. ಯಾರಿಗೂ ಅದನ್ನ ಹೇಳುವುದು ಇಲ್ಲ. ಕೆಲವರು ಆ ಬಗ್ಗೆ ಹೇಳಿದರೆ ಅದು ಅವರವರ ವೈಯಕ್ತಿಕ ಅಭಿಪ್ರಾಯವೇ ಆಗಿರುತ್ತದೆ. ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿರುವುದು ನಮಗೆ ಅದೆಲ್ಲ ಗೊತ್ತೆ ಇಲ್ಲ. ಎರಡೂವರೆ ಎರಡೂವರೆ ಅಂತ ಹೇಳೋದು ನಮಗೆ ಗೊತ್ತಿಲ್ಲ. ಹೈಕಮಾಂಡ್ ಆಗಲಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಹೇಳಿಲ್ಲ, ನಮ್ಮ ಸಾಹೇಬ್ರು ಶಿವಕುಮಾರ್ ಅವರು ಹೇಳಿಲ್ಲ. ಒಳಗೊಳಗೆ ಅವರು ಯಾವ ಹೊಂದಾಣಿಕೆಗೆ ಬಂದಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ.

ಇದೇ ವೇಳೆ ನಿಗಮ ಮಂಡಳಿಯ ಅದಲು ಬದಲು ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಕೂತು ಈ ಬಗ್ಗೆ ಚರ್ಚೆ ಮಾಡಿ, ಫೈನಲ್ ಮಾಡಿ, ಹೈಕಮಾಂಡ್ ಗಮನಕ್ಕೆ ತಂದು ಮಾಡ್ತಾರೆ. ನಾನು ಅಧ್ಯಕ್ಷನಾಗಿದ್ದಾಗಲೂ ಇದನ್ನೇ ಮಾಡ್ತಾ ಇದ್ದೆವು. ಬದಲಾಯಿಸಿದ್ದಾರೆ ಅಂತ ಕೇಳಿದ್ದೇನೆ. ನಾವು ಇದ್ದಾಗಲೂ ಹೇಗೆ ನಡೆಯುತ್ತಿತ್ತೋ ಅದೇ ರೀತಿ ಆಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.


















