ಸುದ್ದಿಒನ್, ಹಿರಿಯೂರು, ಮಾರ್ಚ್. 08 : ತಾಲೂಕಿನ ಜೆಜಿ ಹಳ್ಳಿ ಮತ್ತು ಕಸಬಾ, ಐಮಂಗಲ ಹೋಬಳಿಯ ಕೆರೆಗಳ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.

ರೈತರಿಗೆ ನೀರು ಹರಿಸುವ ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಚಿವ ಡಿ ಸುಧಾಕರ್ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ನೀರಿನ ಅವಶ್ಯಕತೆ ಇದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಆಡಳಿತ ಅವಧಿಯಲ್ಲಿ ಭದ್ರಾ ಕಾಮಗಾರಿಗೆ ಚಾಲನೆ ನೀಡಲಾಯಿತು. 2008ರಲ್ಲಿ ಆಗಿನ ಯಡಿಯೂರಪ್ಪನವರು 5 ಟಿಎಂಸಿ ನೀರು ಹರಿಸುವ ಸರ್ಕಾರಿ ಆದೇಶ ಮಾಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಹೆಚ್ಚಿನ ಅನುದಾನವನ್ನು ಈ ಕಾಮಗಾರಿಗೆ ನೀಡಿದ್ದಾರೆ. ಇದರಿಂದ ಕಾಮಗಾರಿ ವೇಗ ಪಡೆಯಿತು. ನಮಗೆ ಇದ್ದ 25 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶದ ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ವಿಸ್ತಾರವಾಯಿತು.

ತುಂಗಾದಿಂದ 17 ಹಾಗೂ ಭದ್ರಾ ದಿಂದ 11 ಟಿಎಂಸಿ ನೀರು ಹರಿಸಬೇಕು ಎಂದು ಒತ್ತಾಯಿಸಿಲಾಗಿತ್ತು. ಗಾಯತ್ರಿ ಡ್ಯಾಂಗೆ ಡಿಪಿಆರ್ ರೆಡಿ ಮಾಡಿಸಿ ನೀರು ಹಂಚಿಕೆ ಕೇಳಲಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ನೀರಾವರಿ ತಜ್ಞರ
ಜೊತೆ ಸಭೆ ನಡೆಸಿ ಚರ್ಚಿಸಿದ್ದೇವೆ. ಈಗಾಗಲೇ ನಾಲ್ಕು ಬಾರಿ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಹಾಗೂ ನೀರಾವರಿ ಸಲಹೆಗಾರರಾದ ಅನಿಲ್ ಕುಮಾರ್ ಜೊತೆಯೂ 0.5 ನೀರು ಹಂಚಿಕೆ ವಿಚಾರ ಬಗ್ಗೆ ಚರ್ಚಿಸಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಈ ಭಾಗದ ಜನರಿಗೆ ನೀರು ಕೊಡುವ ಜೊತೆಗೆ ಜಿಲ್ಲೆಯ ಇತರೆ ತಾಲ್ಲೂಕಿನ ಜನತೆ ನೀರು ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.
ನೀರಿನ ವಿಚಾರದಲ್ಲಿ ಜಿಲ್ಲೆಯ ಶಾಸಕರು ಒಳಗೊಂಡಂತೆ ಕಡೂರು, ತರೀಕೆರೆ ಶಾಸಕರ ಜೊತೆ ಮಂಗಳವಾರ ಸಂಜೆ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ನೂರಕ್ಕೆ ನೂರರಷ್ಟು ನನ್ನ ಅವಧಿಯಲ್ಲಿ ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ಸಂಕಲ್ಪ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ಡಿವೈಎಸ್ಪಿ ಶಿವಕುಮಾರ್, ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಶಿವಣ್ಣ, ರಾಮಕೃಷ್ಣಪ್ಪ, ದಿಂಡವಾರ ಚಂದ್ರಗಿರಿ, ಸಣ್ಣ ತಿಮ್ಮಣ್ಣ, ಮೀಸೆ ತಿಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಕೇಶವ್, ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು


