ಪೌರಾಯುಕ್ತರ ವಿರುದ್ಧ ಮುಗಿಬಿದ್ದ ಸದಸ್ಯರು : ನಗರಸಭೆಯಲ್ಲಿ ನಡೆದಿದ್ದೇನು ?

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 26 :
ನಗರದಲ್ಲಿ ಕಳೆದ 20 ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಪೌರಾಯುಕ್ತರೇ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ ? ಅಧ್ಯಕ್ಷರ ಮಾತಿಗೆ ಕಿಮ್ಮತ್ತೇ ಕೂಡುವುದಿಲ್ಲ. ಈ ರೀತಿ ಮಾಡಿದರೆ ನಗರದ ಅಭಿವೃದ್ದಿ ಆಗುತ್ತಾ ಮಾತನಾಡಿ, ಇದು ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪೌರಾಯುಕ್ತೆ ಶ್ರೀಮತಿ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದಾಗಿದೆ.

ಅಧ್ಯಕ್ಷೆ ಶ್ರೀಮತಿ ಸುಮಿತ ಅವರ ಆಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬೇಸಿಗೆ ಕಾಲ ಬಂದರೂ ಕುಡಿಯುವ ನೀರು ಸಿಗದಿರುವ ಬಗ್ಗೆ ಸಾಕಷ್ಟು ಸದಸ್ಯರ ಆಕ್ರೋಶಕ್ಕೆ ಪೌರಾಯುಕ್ತೆ ಶ್ರೀಮತಿ ರೇಣುಕಾ ಗುರಿಯಾದರು.

ಯುಗಾದಿ ಹಾಗೂ ರಂಜಾನ್ ಹಬ್ಬ ಹತ್ತಿರ ಬಂದಿದೆ. ಎಲ್ಲೆಡೆ ಬೇಸಿಗೆಯ ಬಿಸಿಲು ಧಗೆ ಏರುತ್ತಿದೆ. ಆದರೂ 20 ದಿನಗಳಿಂದ ಜನರಿಗೆ ನೀರು ಸಿಗುತ್ತಿಲ್ಲ. ಮತ ಹಾಕಿರುವ ಜನರು ನಮ್ಮ ಮನೆಗಳಿಗೆ ಬಂದು ಮನಃ ಬಂದಂತೆ ಕೆಟ್ಟದಾಗಿ ಮಾತಾಡುತ್ತಾರೆ. ನೀವು ಎ.ಸಿ. ರೂಮಿನಲ್ಲಿ ನಿಮ್ಮದಿಯಾಗಿ ಮಲಗಿರುತ್ತಿರಾ. ಯಾರು ಇದಕ್ಕೆ ಉತ್ತರ ಕೊಡಬೇಕು ಎಂದು ಅಧ್ಯಕ್ಷೆ ಸುಮೀತಾ, ಉಪಾಧ್ಯಕ್ಷೆ ಶ್ರೀದೇವಿ ಸೇರಿದಂತೆ ಸದಸ್ಯರಾದ ಶ್ರೀನಿವಾಸ್, ದೀಪು, ಮೊಹಮ್ಮದ್ ಜೈಲುದ್ದಿನ್, ಶಶಿಧರ್, ಮೀನಾಕ್ಷಿ, ಮಹಮದ್ ಅಹ್ಮದ್ ಪಾಷ ಅವರುಗಳು ಪೌರಾಯುಕ್ತರ ಮೇಲೆ ಹರಿಹಾಯ್ದರು. ಇದಕ್ಕೆ ಪೌರಾಯುಕ್ತರು ಉತ್ತರಿಸುತ್ತಾ, ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿದೆ. ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಕುಡಿಯಲು ನೀರು ಕೊಡಿ ಎಂದು ಜನರು ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಾರೆ. ಏನು ಸಮಸ್ಯೆ ಎಂದು ಕೇಳಲು ಇಂಜಿನಿಯರ್ ಮುನಿಸ್ವಾಮಿ ಪೋನ್ ಮಾಡಿದರೆ ಪೋನ್ ರೀಸಿವ್ ಮಾಡುವುದಿಲ್ಲ. ಪೌರಾಯುಕ್ತರೆ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ ? ಎಂದು 25 ನೇ ವಾರ್ಡಿನ ಸದಸ್ಯ ಮೊಹಮ್ಮದ್ ಜೈಲುದ್ದೀನ್ ಏರುಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಪೌರಾಯುಕ್ತರು ಮೌನ ವಹಿಸಿದ್ದು ಸದಸ್ಯರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇಂಜಿನಿಯರ್ ಮುನಿಸ್ವಾಮಿ ಅವರನ್ನು ಕೂಡಲೇ ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು.

ಚಿತ್ರದುರ್ಗದ ಬಹುತೇಕ ನಗರಸಭೆ ಆಸ್ತಿಯನ್ನು ಸದಸ್ಯರು ಉಳಿಸಿಕೊಟ್ಟಿದ್ದೆವೆ. ಆದರೂ ಇವುಗಳನ್ನು ಒಳಗಿಂದ ಒಳಗೆ ಮಾರಾಟ ಮಾಡಿರುವ ವಿಷಯ ಕೇಳಿ ಬರುತ್ತಿದೆ. ಒಂದು ವೇಳೆ ಯಾರಿಗಾದರೂ ಮಾರಾಟ ಮಾಡಿದರೆ ಜೈಲಿಗೆ ಕಳಿಸಬೇಕಾಗುತ್ತದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸದಸ್ಯ ಶ್ರೀನಿವಾಸ್ ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *