ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ನಗರಸಭೆಗೆ ಸೇರಿದ 94 ಇಂದಿರಾ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಇಂದು ಶನಿವಾರ ಬೆಳಗಿನ ಜಾವದಿಂದಲೇ ಆರಂಭವಾಗಿದೆ.
ನಗರಸಭೆ ವ್ಯಾಪ್ತಿಯ ಮಾದೇವಿ ರಸ್ತೆ ಹಾಗೂ ಬೆಂಗಳೂರು ರಸ್ತೆ ಹಾಗೂ ಪಾವಗಡ ರಸ್ತೆಯಲ್ಲಿ ಇರುವ ಈ ಮಳಿಗೆಗಳು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ, ಪೌರ ಆಯುಕ್ತೆ ಡಾ. ನಾಗವೇಣಿ ಅವರ ಸಮ್ಮುಖದಲ್ಲಿ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ತೆರವು ಕಾರ್ಯ ಮಾಡಲಾಗುತ್ತಿದೆ.
ಸುಮಾರು ಹಲವು ವರ್ಷಗಳಿಂದ ಕಡಿಮೆ ಬಾಡಿಗೆಯಲ್ಲಿ ನೀಡಲಾಗುತ್ತಿದ್ದ ಈ ಮಳಿಗೆಗಳಿಂದ ನಗರಸಭೆ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕೆಲ ಬಾಡಿಗೆದಾರರು ಮಳಿಗೆಗಳನ್ನು ಇತರರಿಗೆ ಹೆಚ್ಚಿನ ಮೊತ್ತಕ್ಕೆ ಬಾಡಿಗೆಗೆ ನೀಡಿ ಲಾಭ ಪಡೆಯುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ. ಅಷ್ಟೇ ಅಲ್ಲದೆ 94 ಮಳಿಗೆಗೆಳಿ ಈಗಾಗಲೆ ಶಿಥಲಗೊಂಡಿದ್ದು ಅಪಾಯದ ಪರಿಸ್ಥಿತಿಯಲ್ಲಿವೆ.
ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. 1970ರಲ್ಲಿ ನಿರ್ಮಾಣಗೊಂಡ ಈ ಮಳಿಗೆಗಳು ಹಳೆಯದಾಗಿ ಶಿಥಿಲಗೊಂಡಿರುವುದರಿಂದ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದಲೂ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ, ಮಳಿಗೆ ಬಾಡಿಗೆದಾರರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರೂ, ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ತೆರವು ಕಾರ್ಯ ಮುಂದುವರೆಸುತ್ತಿದ್ದಾರೆ













