Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರೆ ನೀರಿಗಾಗಿ ಬದುಕು ಮೀಸಲು : ಕೆ.ಟಿ.ತಿಪ್ಪೇಸ್ವಾಮಿ ಹೋರಾಟದ ಕಿಚ್ಚಿನ ಮಾತು

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 17 : ನನಗೆ ನನ್ನ ಆರೋಗ್ಯ, ಬದುಕು ಮುಖ್ಯವಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ಜನರ ಬದುಕು ಉನ್ನತಗೊಳ್ಳಬೇಕು. ಅದೇ ನನ್ನ ಗುರಿ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

 

ಹಿರಿಯೂರು ತಾಲ್ಲೂಕಿನ ಬೀರನಹಳ್ಳಿ ತಮ್ಮ ನಿವಾಸಕ್ಕೆ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ವೇಳೆ ಹೋರಾಟದ ಕಿಚ್ಚು ಹಚ್ಚುವ
ಮಾತನ್ನೇಳುವ ಮೂಲಕ ಅಚ್ಚರಿ ಮೂಡಿಸಿದರು.

 

ಮೂರು ತಿಂಗಳು ನಿರಂತರ ಹೋರಾಟ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲೆಯ ಭದ್ರಾ ಯೋಜನೆ ಪರವಾಗಿ
ಬಜೆಟ್‌ನಲ್ಲಿ ಹಣ ಘೋಷಿಸಲಿಲ್ಲ. ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ 5,300 ಕೋಟಿ ರೂ. ಘೋಷಿಸಿತು, ಜೊತೆಗೆ ರಾಷ್ಟಿçÃಯ ಯೋಜನೆಯೆಂದು ಘೋಷಿಸುತ್ತೇವೆಂದು ನರೇಂದ್ರ ಮೋದಿ ಸೇರಿ ಎಲ್ಲ ನಾಯಕರು ಘೋಷಿಸಿದರು. ಅದೇ ರೀತಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ
ನಿರ್ವಹಿಸುವಲ್ಲಿ ಸ್ಪಷ್ಟವಾಗಿ ತಿಳಿಸುತ್ತಿಲ್ಲ ಎಂದು ಬೇಸರಿಸಿದರು.

 

ಜಿಲ್ಲೆಯಲ್ಲಿ ಅಂತರ್ಜಲ ಕುಸಿತಗೊಂಡಿದೆ. ಕುಡಿಯುವ ನೀರು ಯೋಗ್ಯವಿಲ್ಲವೆಂದು ಅನೇಕ ವರದಿಗಳು ಹೇಳಿವೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಪರದಾಟ ಆರಂಭವಾಗಿದೆ. ಆದರೂ ಸರ್ಕಾರಗಳು ನಮ್ಮ ಜಿಲ್ಲೆಗೆ ಭದ್ರಾ ನೀರು ಹರಿಸಿ ಬದುಕು ಹಸನುಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

 

ಮೂರು ತಿಂಗಳು ಸರಣಿ ರೀತಿ ಜಿಲ್ಲೆಯಲ್ಲಿ ಚಳವಳಿ ನಡೆಸಲಾಯಿತು. ಜನರು ಎಲ್ಲೆಡೆ ಕೂಗು ಹಾಕಿದರು. ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳು
ಸಂಪೂರ್ಣ ಬಂದ್ ಮಾಡುವ ಮೂಲಕ ಭದ್ರಾ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಜಿಲ್ಲಾ ಕೇಂದ್ರದಲ್ಲಿ 3 ಸಾವಿರ ಮಂದಿ ಸೇರಿ ಸಮಾವೇಶ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಾಯಿತು. ಜಿಲ್ಲೆಯ ಜನಪ್ರತಿನಿಧಿಗಳು ಎಲ್ಲರೂ ಮುಖ್ಯಮಂತ್ರಿ,
ಉಪಮುಖ್ಯಮಂತ್ರಿ ಬಳಿ ತೆರಳಿ ಭದ್ರಾ ಯೋಜನೆಗೆ 5 ಸಾವಿರ ಕೋಟಿ ರೂ. ಮೀಸಲಿಡುವಂತೆ ಮನವಿ ಮಾಡಿದರು. ಆದರೂ ಯಾವುದು ಫಲ ಕೊಡಲಿಲ್ಲ ಎಂದು ನೊಂದುಕೊಂಡರು. ಕೇಂದ್ರ ಸರ್ಕಾರ ಘೋಷಿಸಿದ 5,300 ಕೋಟಿ ರೂಪಾಯಿಯನ್ನು ಯಾವುದೇ ಷರತ್ತು ಇಲ್ಲದೆ
ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ 157 ಕೆರೆ ತುಂಬಿಸುವುದು, 135 ಕಿಮೀ ಕಾಲುವೆ ಕಾಮಗಾರಿ 2027ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿದೆ. ಇದಕ್ಕೆ
ಇಂತಿಷ್ಟು ಹಣವನ್ನು ಎತ್ತಿಡಬೇಕು. ಈ ಸಂಬಂಧ ಅಧಿವೇಶನದಲ್ಲಿ ನೀರಾವರಿ ಮಂತ್ರಿಗಳು
ಪ್ರಕಟಿಸಬೇಕು ಎಂದು ಆಗ್ರಹಿಸಿದರು.

 

ಜಿಲ್ಲೆಯ ಜನ ಇನ್ನಷ್ಟು ಉಗ್ರವಾಗಿಯೇ ಸರ್ಕಾರಗಳಿಗೆ ಚಾಟಿ ಬೀಸಬೇಕು. ಜನಾಂದೋಲನ ರೂಪುಗೊಳ್ಳಬೇಕು. ಎಲ್ಲ ಜನಪ್ರತಿನಿಧಿಗಳ ಮನೆ ಬಾಗಿಲ ಬಳಿ ಪ್ರತಿಭಟನೆ, ಬೀಗ ಜಡಿದು ಮುಷ್ಕರ, ವಿಧಾನಸೌಧಕ್ಕೆ ಮುತ್ತಿಗೆ, ದೆಹಲಿ ಚಲೋ ಹಮ್ಮಿಕೊಳ್ಳಬೇಕು. ಆಗ ಮಾತ್ರ ಸರ್ಕಾರಗಳು ಭದ್ರಾ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತವೇ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕೆಂದು ಹೇಳಿದರು.

 

ಭೋವಿ ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ರಾಜ್ಯ ಕುರುಬ ಸಂಘದ ಮಾಜಿ ನಿರ್ದೇಶಕ ಎಮ್ಮೆಹಟ್ಟಿ ಹನುಮಂತಪ್ಪ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶಬಾಬು, ಮುಖಂಡ ಎಂ.ದಯಾನಂದ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ್ ಅಪ್ಪು, ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು, ಪತ್ರಕರ್ತರಾದ ಬಸವರಾಜ್ ಮುದನೂರು, ವಿ.ಚಂದ್ರಪ್ಪ, ಕಿರಣ್ ತೊಡರನಾಳ್, ವೀರೇಂದ್ರಕುಮಾರ್ ಕೋಗುಂಡೆ, ಕೆ.ಪಿ.ಓಂಕಾರಮೂರ್ತಿ, ದ್ವಾರಕನಾಥ್,
ರಂಗನಾಥ್ ಸೇರಿ 25ಕ್ಕೂ ಹೆಚ್ಚು ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

 

ಆರೋಗ್ಯದತ್ತ ಚಿತ್ತ ಇರಲಿ :
ಆರೋಗ್ಯ ಇದ್ದರೇ ಮಾತ್ರ ಜನರ ಸೇವೆ ಮಾಡಲು ಸಾಧ್ಯ. ಆದ್ದರಿಂದ ಇನ್ನೂ ನಾಲ್ಕೈದು ತಿಂಗಳು ಕಾಲ ಸಂಘಟನೆ, ಚಳವಳಿ ಎಲ್ಲವನ್ನೂ ಮರೆತು ವಿಶ್ರಾಂತಿ ಪಡೆಯಿರಿ. ಬಳಿಕ ಬೃಹತ್ ಹೋರಾಟ ರೂಪಿಸುವಂತೆ ನಾವೆಲ್ಲರೂ ಬೆಂಬಲವಾಗಿರುತ್ತೇವೆ ಎಂದು ಭೇಟಿ ನೀಡಿದ್ದ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಕಿವಿಮಾತು ಹೇಳಿದರು. ಉಪವಾಸ ಸತ್ಯಾಗ್ರಹದ ಬಳಿಕ ಕೆಲವೇ ಗಂಟೆಗಳಲ್ಲಿ ನಿಮ್ಮ ಆರೋಗ್ಯ ಕೈಕೊಟ್ಟಾಗ
ತಕ್ಷಣವೇ ನಿಮ್ಮ ನೆರವಿಗೆ ಬಂದಿರುವುದು ನಿಮ್ಮ ಕುಟುಂಬ. ಆದ್ದರಿಂದ ಅವರು ಹೇಳಿದಂತೆ ಸ್ವಲ್ಪ ದಿನ ಆರೋಗ್ಯದತ್ತ ಗಮನಹರಿಸಿ, ಬಳಿಕ ಹೋರಾಟ ಇದ್ದೇ ಇರುತ್ತದೆ ಎಂದು ಸಲಹೆ ನೀಡಿದರು.

ಹೋರಾಟದ ಮನಸ್ಸುಗಳು : ಚಿತ್ರದುರ್ಗ ಜಿಲ್ಲೆಯ ಬಹುತೇಕ ಪತ್ರಕರ್ತರು ಹೋರಾಟದ ಮನಸ್ಸುಳ್ಳವರು. ನನ್ನ ಆರೋಗ್ಯ
ಕುರಿತು ಕಾಳಜಿ ವಹಿಸಿ ದೂರದಿಂದ ನಿವಾಸಕ್ಕೆ ಭೇಟಿ ನೀಡಿರುವುದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ನಿಮ್ಮ ಈ ಪ್ರೀತಿಗೆ ಸದಾ ಚಿರಋಣಿ ಎಂದು ಕೆ.ಟಿ.ತಿಪ್ಪೇಸ್ವಾಮಿ ಭಾವುಕರಾದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now