ಸುದ್ದಿಒನ್, ಹಿರಿಯೂರು, ಜೂನ್. 02 : ದಿವಂಗತ ಮಾಜಿ ಸಚಿವ ಡಿ ಸುಧಾಕರವರ ಅಕಾಲಿಕ ನಿಧನ ಬೇಸರ ತರಿಸಿದ್ದು, ಇಂತಹ ಸಂದರ್ಭ ಬರುತ್ತದೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ತಿಳಿಸಿದರು.
ನಗರದ ಅನ್ನಪೂರ್ಣೆಶ್ವರಿ ಹೋಟೆಲ್ ಸಭಾಂಗಣದಲ್ಲಿ ದಿವಂಗತ ಡಿ. ಸುಧಾಕರವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಕುರಿತು ಮಾತನಾಡಿದರು.
ಚಳ್ಳಕೆರೆಯಲ್ಲಿ ಒಮ್ಮೆ ಹಿರಿಯೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು, ನನಗಿಂತ ಐದು ವರ್ಷ ದೊಡ್ಡವರಾಗಿದ್ದರು. ಶಾಸಕರವಧಿ ಇನ್ನು ಎರಡು ವರ್ಷ ಇತ್ತು ಅವಧಿಗೂ ಮುನ್ನವೇ ನಿಧನ ಹೊಂದಿರುವುದು ಅತೀವ ನೋವು ತಂದಿದೆ. ಆ ಭಗವಂತ ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಸಚಿವರ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಜನತೆಯ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿವೆ. ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ರೈತರ ಹಿತ ಕಾಪಾಡಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಯಶಸ್ವಿಗೊಳಿಸಲು ಸುಧಾಕರ್ ಸಾಕಷ್ಟು ಶ್ರಮವಹಿಸಿದ್ದರು. ಬಡವರ ಬದುಕಿಗೆ ಬೆಳಕಾಗಿದ್ದ ಸಚಿವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಸಹ ಅವರ ಶಾಶ್ವತ ಅಭಿವೃದ್ಧಿ ಕೆಲಸಗಳು ಜನತೆಯ ಮನಸ್ಸಿನಲ್ಲಿ ಸದಾ ಉಳಿದಿವೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಹಾಲಿನ ಸೊಸೈಟಿ ಹೆಚ್ಚಳದಿಂದ, ಹಾಲಿನ ಉತ್ಪಾದನೆಯಲ್ಲಿ ಏರಿಕೆ ಕಂಡಿದೆ. ಮುಂದಿನ ಎರಡು ವರ್ಷಗಳಲ್ಲಿ ಹಿರಿಯೂರು 10, ಚಳ್ಳಕೆರೆ 8 ಹಾಗೂ ಮೊಳಕಾಲ್ಮೂರು 2 ಸೇರಿದಂತೆ ಒಟ್ಟು 20 ಬಿಎಂಸಿ ಕೇಂದ್ರ ತೆರೆಯಲು ಚಿಂತನೆ ನಡೆಸಿದೆ. ಅತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ವಿವಿ ಪುರ, ನಂಜಯ್ಯನಕೊಟ್ಟಿಗೆ, ಕಂದಿಕೆರೆ, ಸೂಗೂರು, ಪಟ್ರೆಹಳ್ಳಿ ಸೇರಿದಂತೆ ತಾಲ್ಲೂಕಿನಲ್ಲಿ 10 ಹೊಸ ಬಿಎಂಸಿ ಕೇಂದ್ರ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಬಿಎಂಸಿ ಕೇಂದ್ರ ತೆರೆಯಲು ಆಸಕ್ತಿ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ದಾಖಲೆಗಳೊಂದಿಗೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕು. ಬಿಎಂಸಿ ಕೇಂದ್ರ ಆರಂಭದಿಂದ ರೈತರಿಗೆ ಹಾಗೂ ಹಾಲಿನ ಡೈರಿಗಳಿಗೆ ಅನುಕೂಲವಾಗಲಿದೆ ಎಂದು ಬಿಸಿ ಸಂಜೀವಮೂರ್ತಿ ಹೇಳಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗಾಧಿಕಾರಿ ಪುಟ್ಟರಾಜು, ಎಸ್.ಜಿ. ಕೃಷ್ಣಕುಮಾರ್, ಮನೋಹರ್, ಜೆಜಿ ಹಳ್ಳಿ ಗೋವಿಂದರಾಜು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












