ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 1999ರ ಚುನಾವಣೆಯ ಸೋಲಿನ ನಂತರ ಸಿದ್ದರಾಮಯ್ಯ ರಾಜಕೀಯದಿಂದ ದೂರವಾಗುವ ಬಗ್ಗೆ ನಿರ್ಧರಿಸಿದ್ದಾಗ, ತಮ್ಮ ತಂದೆ ಎಚ್ ಡಿ ದೇವೆಗೌಡ ಅವರು ಅವರನ್ನು ಸಮಾಧಾನಪಡಿಸಿದ್ದ ಘಟನೆನ್ನು ಅವರು ನೆನಪಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “1999ರಲ್ಲಿ ನಾವು ಎಲ್ಲರೂ ಸೋತಾಗ ಸಿದ್ದರಾಮಯ್ಯ ಹಾಗೂ ಡಾ. ಎಚ್.ಸಿ. ಮಹದೇವಪ್ಪ ದೇವೇಗೌಡರ ಮನೆಗೆ ಬಂದಿದ್ದರು. ಆ ವೇಳೆ ಸಿದ್ದರಾಮಯ್ಯ ರಾಜಕೀಯವೇ ಸಾಕೆಂದು ಕಣ್ಣೀರಿಟ್ಟಿದ್ದರು. ಅವರಿಗೆ ಧೈರ್ಯ ತುಂಬಿ ಮುಂದಿನ ದಾರಿ ತೋರಿಸಿದ್ದು ದೇವೇಗೌಡರು” ಎಂದು ಹೇಳಿದರು.ಮುಂದುವರಿದು, “ಅಂದು ಅವರ ಕಣ್ಣೀರು ಬಕೆಟ್ಟೇ ತುಂಬುವಷ್ಟು ಇತ್ತು. ಆ ಘಟನೆಯ ಸಾಕ್ಷಿ ನಾನೇ” ಎಂದು ತಿಳಿಸಿದರು.
2006ರ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, “ಅಹಿಂದ ಹೆಸರಿನಲ್ಲಿ ನಮ್ಮ ಪಕ್ಷಕ್ಕೆ ಸಿದ್ದರಾಮಯ್ಯ ಚೂರಿ ಹಾಕಿದರು. ಅವರು ಪಕ್ಷ ಬಿಟ್ಟಾಗ ಕೇವಲ 8 ಮಂದಿ ಮಾತ್ರ ಜೊತೆಗಿದ್ದರು. ಈ ಎಲ್ಲವೂ ಅವರಿಗೆ ಈಗ ನೆನಪಿಲ್ಲವೇ?” ಎಂದು ಪ್ರಶ್ನಿಸಿದರು.
“ತಮ್ಮನ್ನು ಅಹಿಂದ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರಬಂದು ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲಿ ನೋಡೋಣ” ಎಂದು ಸವಾಲು ಹಾಕಿದರು.
“ಕಾಂಗ್ರೆಸ್ಗೆ ಕೊನೆಯ ಮೊಳೆ ಹೊಡೆಯುವವರು ಸಿದ್ದರಾಮಯ್ಯನೇ” ಎಂದು ಟೀಕಿಸಿದರು.ಇನ್ನೂ, “ಅವರನ್ನು ಕಂಡು ನಮಗೆ ಅಸೂಯೆ ಇಲ್ಲ. ಕಾಂಗ್ರೆಸ್ ಒಳಗೇ ಕೆಲವರಿಗೆ ಹೊಟ್ಟೆಕಿಚ್ಚು ಇದೆ” ಎಂದು ವ್ಯಂಗ್ಯವಾಡಿದರು.ರಾಜ್ಯದ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಕರ್ನಾಟಕಕ್ಕೆ ಹೆಚ್ಚಿನ ಕೈಗಾರಿಕೆಗಳನ್ನು ತರಲು ಸಿದ್ಧನಿದ್ದೇನೆ” ಎಂದರು.
ಮುಖ್ಯಮಂತ್ರಿ ಸ್ಥಾನ ಕುರಿತು ಮಾತನಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ. ಅವರ ಸ್ವಭಾವ ನನಗೆ ಗೊತ್ತಿದೆ. ಸಿಎಂ ಸ್ಥಾನಕ್ಕಾಗಿ ಕೆಲವರು ದೇವರ ಮೊರೆ ಹೋಗುತ್ತಿದ್ದಾರೆ. ಆದರೆ ಸ್ವಾರ್ಥಕ್ಕಾಗಿ ಬೇಡಿಕೊಂಡರೆ ದೇವರು ಫಲ ಕೊಡಲ್ಲ” ಎಂದು ಹೇಳಿದರು.
ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದ ಅವರು, “ನಾನು ಮುಖ್ಯಮಂತ್ರಿಯಾದದ್ದು ದೇವರ ಕೃಪೆಯಿಂದ. ಬಹುಮತವಿಲ್ಲದೇ ಎರಡು ಬಾರಿ ಸಿಎಂ ಆಗಿದ್ದೇನೆ. ಮುಂದೆಯೂ ದೇವರ ಅನುಗ್ರಹ ಇದ್ದರೆ ಆಗುತ್ತೇನೆ” ಎಂದು ಹೇಳಿದರು.ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಿದ ಅವರು, “ಸಿದ್ದರಾಮಯ್ಯ ಹಣ ವಸೂಲಿಗಾಗಿ ತಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದಾರೆ. ಆದರೆ ನಾನು ನನ್ನ ಮಗ ನಿಖಿಲ್ ಅವರನ್ನು ಜನರ ಆಶಯದ ಮೇರೆಗೆ ರಾಜಕೀಯಕ್ಕೆ ತಂದಿದ್ದೇನೆ” ಎಂದು ಹೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















