ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 14 : ಕೃಷಿಗೆ ಮಾರಕವಾಗಿರುವ ಅಂತರಾಷ್ಟ್ರೀಯ ವಾಣಿಜ್ಯ ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯದಿದ್ದರೆ ಮುಂದಿನ ತಿಂಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಳುವಳಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಸವರಾಜಪ್ಪ ಎಚ್ಚರಿಸಿದರು.
ರೈತ ಭವನದಲ್ಲಿ ಮಂಗಳವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರು ಬೆಳೆದ ಬೆಳೆಗಳಿಗೆ ಖರೀಧಿ ಕೇಂದ್ರವಿಲ್ಲದೆ ವೈಜ್ಞಾನಿಕ ಬೆಲೆ ಸಿಗದ ಕಾರಣ ಕೃಷಿಗಾಗಿ ಸಾಲ ಮಾಡಿದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ವಿದ್ಯುತ್ ಸಮಸ್ಯೆಯಿದೆ. ಬೆಳೆವಿಮೆ ಪಾವತಿಸಿರುವ ರೈತರಿಗೆ ವಿಮೆ ಕಂಪನಿಗಳು ಪರಿಹಾರ ನೀಡುತ್ತಿಲ್ಲ. ಅನಧಿಕೃತ ಗಣಿಗಾರಿಕೆಗಳು ನಿಲ್ಲಬೇಕು. ಇದರ ವಿರುದ್ದ ರೈತರು ಮೊದಲು ಜಾಗೃತರಾಗಬೇಕೆಂದು ಹೇಳಿದರು.
ಅಮೇರಿಕಾ, ಜಪಾನ್, ಕೊರಿಯಾ, ಯೂರೋಪ್ ದೇಶಗಳಲ್ಲಿ ರೈತರಿಗೆ ಒಳ್ಳೆ ಸಬ್ಸಿಡಿ ಸಿಗುತ್ತಿದೆ. ನಮ್ಮ ದೇಶದಲ್ಲಿ ರೈತನಿಗೆ ಸಬ್ಸಡಿ ಇಲ್ಲದಂತಾಗಿದೆ. ಜಿಎಂ. ತಳಿಗಳ ಆಹಾರ ಉತ್ಪಾದನೆ ಸೇವಿಸುತ್ತಿರುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೃಷಿಯಲ್ಲಿ ಕೈ ಸುಟ್ಟುಕೊಂಡಿರುವ ರೈತರು ಹೈನುಗಾರಿಕೆಯಲ್ಲಿ ಜೀವ ಹಿಡಿದುಕೊಂಡಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಂದಿನಿ ಉತ್ಪನ್ನಗಳ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ತೆಂಗು, ತರಕಾರಿ ಬೆಳೆಗಳಿಗೆ ಹೊಡೆತ ಬೀಳುತ್ತಿದೆ ಎಂದರು.
ಕೇಂದ್ರ ಸರ್ಕಾರದ ಎಫ್ಟಿಎ. ಒಪ್ಪಂದವನ್ನು ಈಗಾಗಲೆ ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ವಿರೋಧಿಸಲಾಗಿದೆ. ಕರ್ನಾಟಕ ಸರ್ಕಾರವು ಕೂಡ ವಿಶೇಷ ವಿಧಾನಸಭೆ ಕರೆದು ಚರ್ಚಿಸಿ ಕೇಂದ್ರದ ಏಕಪಕ್ಷೀಯ ನೀತಿಯನ್ನು ವಿರೋಧಿಸಿ ಕೃಷಿ ಬಿಕ್ಕಟ್ಟಿನಿಂದ ರೈತರನ್ನು ರಕ್ಷಿಸಬೇಕು. ಸಿಬಿಲ್ ಸ್ಕೋರ್ ಕೈಬಿಡಬೇಕು. ಸಾಲ ವಸೂಲಾತಿಗಾಗಿ ರೈತರು ಅನುಭವಿಸುತ್ತಿರುವ ಕಿರುಕುಳ ನಿಲ್ಲಬೇಕು. ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.
ಸ್ವಂತ ಭೂಮಿಯಿಲ್ಲದ ಬಡವರು ಹೊಟ್ಟೆ ಪಾಡಿಗಾಗಿ ತುಂಡು ಭೂಮಿಗಳನ್ನು ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದಾರೆ. 26 ಲಕ್ಷದಲ್ಲಿ 18 ಲಕ್ಷ ಅರ್ಜಿಗಳು ತಿರಸ್ಕøತವಾಗಿದ್ದು, ದರಕಾಸ್ತ್ ಕಮಿಟಿಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ದೊಡ್ಡ ದೊಡ್ಡ ಗಂಡಾಂತರವಿದೆ. ಹಾಲು, ಹೈನುಗಾರಿಕೆ, ಸೋಯಾಬೀನ್ಗಳನ್ನು ರೈತರಿಂದ ನೇರವಾಗಿ ಖರೀಧಿ ಮಾಡುತ್ತಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕಿದೆ. ಕೃಷಿಗೆ ಹಾಕಿದ ಬಂಡವಾಳವು ಬಾರದ ಕಾರಣ ರೈತ ಸಾಲಗಾರನಾಗುತ್ತಿದ್ದಾನೆ. ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಆಳುವ ಸರ್ಕಾರಗಳು ಇನ್ನು ನೀಡುತ್ತಿಲ್ಲ. ಒಕ್ಕಲೆಬ್ಬಿಸುವ ಕೆಲಸವಾಗುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಕೃಷಿಗೆ ಕಂಟಕವಾಗಿರುವ ಎಫ್ಟಿಎ. ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದಕ್ಕೆ ಸರಿಯಬೇಕೆಂದು ಬಸವರಾಜಪ್ಪ ಒತ್ತಾಯಿಸಿದರು.
ತರಿಕೆರೆ ಮಹೇಶ್, ಅಮೀನ್ಪಾಷ ದಿದ್ಗಿ, ರಾಜು ಹಿಟ್ಟೂರು, ಶಂಕರಮ್ಮ, ಮಲ್ಲಮ್ಮ, ನಾಗರಾಜ್, ನಿಂಗಪ್ಪ, ಮುನಿಯಪ್ಪ, ಕಬ್ಬಿಗೆರೆ ನಾಗರಾಜ್, ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಇವರುಗಳು ವೇದಿಕೆಯಲ್ಲಿದ್ದರು.
ಚಾಮರಾಜನಗರ, ಧಾರವಾಡ, ಗದಗ, ಶಿವಮೊಗ್ಗ, ತುಮಕೂರು, ದಾವಣಗೆರೆ, ಗುಲ್ಬರ್ಗ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ರಾಜ್ಯ ಸಮಿತಿ ಸಭೆಯಲ್ಲಿ ಹಾಜರಿದ್ದರು.
















