ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 07 : ಶೋಷಿತರು, ದಲಿತರು, ಧಮನಿತರ ಉದ್ದಾರಕ್ಕಾಗಿ ತಮಗೆ ಸಿಕ್ಕ ಅಧಿಕಾರವನ್ನು ಬಳಸಿದ ದೇಶದ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂರವರ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬುಜಗಜೀವನರಾಂರವರ ಪುಣ್ಯತಿಥಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಉತ್ತಮ ಸಂಸದೀಯ ಪಟು, ಸೋಲಿಲ್ಲದ ಸರದಾರ ಡಾ.ಬಾಬುಜಗಜೀವನರಾಂರವರು ದೇಶದಲ್ಲಿ ಬಡತನವಿದ್ದಾಗ ಹೊರ ದೇಶದಿಂದ ಬೀಜ ಗೊಬ್ಬರ ತರಿಸಿ ರೈತರಿಗೆ ಕೊಟ್ಟ ಪರಿಣಾಮ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಲು ಕಾರಣವಾಯಿತು. ಅಣೆಕಟ್ಟೆ ನೀರಾವರಿ ದೇಶದಲ್ಲಿದೆಯೆಂದರೆ ಅದಕ್ಕೆ ಡಾ.ಬಾಬುಜಗಜೀವನರಾಂ ಕಾರಣ. ದೇಶದ ಪ್ರಧಾನಿಯಾಗಬೇಕಿತ್ತು. ದಲಿತರೆಂಬ ಕಾರಣಕ್ಕಾಗಿ ಅವಕಾಶ ವಂಚಿತರಾದರೆಂದರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ ದೇಶಕ್ಕಾಗಿ ತ್ಯಾಗ ಬಲಿದಾನಗೈದವರನ್ನು ಮಾತ್ರ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಅಂತಹವರ ಸಾಲಿನಲ್ಲಿ ಡಾ.ಬಾಬುಜಗಜೀವನರಾಂರವರು ಒಬ್ಬರು. ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದರು. ಅಂತಹ ಮಹಾನ್ ನಾಯಕನ ಆದರ್ಶ ಗುಣಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ರಾಷ್ಟ್ರಪಿತ ಮಹಾತ್ಮಗಾಂಧಿ ಜೊತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಡಾ.ಬಾಬುಜಗಜೀವನರಾಂರವರು ಕೇಂದ್ರದಲ್ಲಿ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿ ಹೊರ ದೇಶಗಳಿಗೆ ರಫ್ತು ಮಾಡುವಷ್ಟು ಬಲಶಾಲಿಯಾಗಿದೆಯೆಂದರೆ ಎಂದರೆ ಅದಕ್ಕೆ ಜಗಜೀವನರಾಂರವರ ಕೊಡುಗೆಯಿದೆ ಎಂದು ಸ್ಮರಿಸಿದರು.

ನೆಹರು, ಲಾಲ್ಬಹದ್ದೂರ್ಶಾಸ್ತ್ರಿ, ಇಂದಿರಾಗಾಂಧಿರವರು ಪ್ರಧಾನಿಯಾಗಿದ್ದಾಗ ಕೃಷಿ, ರಕ್ಷಣಾ ಸಚಿವರಾಗಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟಿರುವುದು ಕಾಂಗ್ರೆಸ್. ದಲಿತರೆಂಬ ಕೀಳರಿಮೆ ಡಾ.ಬಾಬು ಜಗಜೀವನರಾಂರವರಲ್ಲಿ ಇರಲಿಲ್ಲ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ ಕೇಂದ್ರದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿದ ಡಾ.ಬಾಬುಜಗಜೀವನರಾಂರವರು ದೇಶದ ಉಪ ಪ್ರಧಾನಿಯಾಗಿದ್ದುಕೊಂಡು ಬಡವರು, ಶೋಷಿತರು, ದಲಿತರ ಪರವಾಗಿ ಕೆಲಸ ಮಾಡಿದರು. 31 ವರ್ಷಗಳ ಕಾಲ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅವರಿಗೆ ಪ್ರಧಾನಿಯಾಗಲು ಮೇಲ್ಜಾತಿಯವರು ಬಿಡಲಿಲ್ಲ. ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಜಗಜೀವನರಾಂರವರ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ಕುಮಾರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಎ.ಎಂ.ಇಮಾಮ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ
ಎನ್.ಡಿ.ಕುಮಾರ್, ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಮರ್ಥರಾಯ್, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಮುದಸಿರ್ನವಾಜ್, ನೇತ್ರಾವತಿ,
ಡಿ.ಕುಮಾರಸ್ವಾಮಿ, ವಿಜಯಕುಮಾರ್, ಆರ್.ರಮೇಶ್, ರಾಮಪ್ಪ ಪಿಳ್ಳೆಕೆರನಹಳ್ಳಿ, ಎಲ್.ಕೆ.ರಾಬರ್ಟ್, ಜಿ.ವಿ.ಮಧುಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಸ್.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ಪ್ರಕಾಶ್, ಇಂದಿರಾ ಇನ್ನು ಅನೇಕರು ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು.


















