ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ಹಿರಿಯೂರು ತಾಲ್ಲೂಕಿನ ಅದಿವಾಲ ಗ್ರಾಮದಲ್ಲಿ ಗಂಗಮ್ಮ ಎಂಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್. 06 ರಂದು ಈ ಘಟನೆ ನಡೆದಿದೆ.
ಗಂಗಮ್ಮ ಎಮ್ಮೆ ಮೇಯಿಸಲು ಹೋದಾಗ, ಅದೇ ಗ್ರಾಮದ ಚಿರಂಜೀವಿ ಎಂಬ ಹುಡುಗನು ಗಂಗಮ್ಮಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆಯು ಈ ಘಟನೆಯನ್ನು ತೀವ್ರವಾಗಿ ವಿರೋಧಿಸಿದ್ದು ಈ ವಿಚಾರವಾಗಿ ಗಲಾಟೆಯಾಗಿದ್ದು ಚಿರಂಜೀವಿ ಸಂಬಂಧಿಕರಾದ ಲವ, ಕುಶ, ತಿಪ್ಪೇಸ್ವಾಮಿ, ಪಟೇಲ್ ಹನುಂತಪ್ಪನವರು ವಿಷಯವು ಊರಿನ ಗ್ರಾಮಸ್ಥರಿಗೆ ತಿಳಿದರೆ ನಮ್ಮ ಮಾರ್ಯಾದೆ ಹೋಗುತ್ತದೆಂದು ಗಂಗಮ್ಮಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ತೀವ್ರತರದ ಗಾಯವನ್ನುಂಟು ಮಾಡಿ ಸ್ಥಳದಿಂದ ಓಡಿಹೋಗಿರುತ್ತಾರೆ. ನಂತರ ಗಂಗಮ್ಮಳ ಮಗನಾದ ಮನೋಜ್ ನಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ತನ್ನ ತಾಯಿಯನ್ನು ಉಪಚರಿಸಿ ಆಟೋದಲ್ಲಿ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರಿಕ್ಷಿಸಿ ಗಂಗಮ್ಮಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೃತೆ ಗಂಗಮ್ಮಳ ಮಗ ಮನೋಜ್ ನೀಡಿದ ದೂರಿನ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರಂಜಿತ್ ಕುಮಾರ್ ಬಂಡಾರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಕೈಗೊಂಡು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಕೂಡಲೇ ಬಂಧಿಸಲು ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಟಿ.ಎಂ, ಡಿವೈ.ಎಸ್.ಪಿ, ಹಿರಿಯೂರು ಉಪವಿಭಾಗರವರು ಹಾಗೂ ಮಂಜುನಾಥ, ಪಿಐ ಹಿರಿಯೂರು ಗ್ರಾಮಾಂತರ ರವರು ಹಾಜರಿದ್ದರು.










