ಸುದ್ದಿಒನ್, ಹಿರಿಯೂರು, ಜುಲೈ. 13 : ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ದಿಂಡಾವರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಹಬ್ಬ ಹರಿದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಗ್ರಾಮದಲ್ಲಿ ನಾಳೆ (ಜುಲೈ 14ರಂದು ಸೋಮವಾರ) ಭೂತಪ್ಪನ ಜಾತ್ರೆ ನಡೆಯಲಿದೆ. ಆದರೆ ಕುಡಿಯುವ ನೀರು ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಬ್ಬಕ್ಕೆ ಬರುವ ನೆಂಟರಿಷ್ಟರು, ಸ್ನೇಹಿತರು ಹಾಗೂ ಬಂಧುಗಳು ಬರುವವರಿಗೆ ಊಟ ನಮ್ದು !ನೀರು ನಿಮ್ಮದು!* ಎಂದು ಅಭಿಯಾನ ಆರಂಭಿಸಿದ್ದಾರೆ.

ಹಬ್ಬ ಇದ್ದರೂ ಗ್ರಾಮದಲ್ಲಿ ನೀರಿನ ಸಮಸ್ಯೆ ಪೂರೈಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಬಿಟ್ಟು ಅಸಮಾಧಾನ ಹೊರಹಾಕಿದ್ದಾರೆ.
ನೀರಿನ ತೀವ್ರ ಅಭಾವದ ನಡುವೆಯೂ ದಿಂಡಾವರ ಪಂಚಾಯತ್ ಪಿ.ಡಿ. ಓ.ರವರ ಫೋನ್ ಸ್ವಿಚ್ ಆಫ್ ಆಗಿದೆ. ಸೆಕ್ರೆಟರಿ ಅವರನ್ನು ಕೇಳಿದರೂ ಸಹ ಅವರು ನಮಗೆ ನೀರು ಬಿಡಲು ಸ್ಪಂದಿಸುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಚಂದ್ರಗಿರಿ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನು ಕೇಳಿದರು ಸಹ ಅವರು ತಾಲೂಕ್ ಪಂಚಾಯಿತಿಗೆ ಪತ್ರ ಬರೆದಿದ್ದೇವೆ ಎಂದು ಹೇಳುತ್ತಾರೆ. ಹೊಸದಾಗಿ ಬಂದಿರುವ ತಾಲೂಕು ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಸಹ ಫೋನನ್ನು ತೆಗೆಯುತ್ತಿಲ್ಲ. ಹಿರಿಯೂರು ತಾಲ್ಲೂಕಿನಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ನಾವು ಯಾರನ್ನ ಕೇಳುವುದು, ನೀರು ಎನ್ನುವುದು ದಿಂಡಾವರ ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ.
ನಮಗೆ ಕುಡಿಯಲು ನೀರು ಕೊಡಿ! ಊರ ಜಾತ್ರೆಗೆ ಬಂದ ನೆಂಟರಿಷ್ಟರ ಎದುರಿಗೆ ನಮ್ಮ ಮಾನವನ್ನ ಉಳಿಸಿ! ಎನ್ನುವುದು ನಮ್ಮ ಬೇಡಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದಿಂಡಾವರದ ಯುವಕರಿಗೆ ಯಾರು ಹೆಣ್ಣುಕೊಟ್ಟಾರು?ಎನ್ನುವುದು ಮದುವೆಯಾಗದೆ ಉಳಿದ ಗಂಡು ಮಕ್ಕಳ ಕೊರಗಾಗಿದೆ ಎಂದು ರೈತ ಮುಖಂಡ ಚಂದ್ರಗಿರಿ ಆತಂಕ ವ್ಯಕ್ತಪಡಿಸಿದ್ದಾರೆ.
















