ಉಡುಪಿ: ರಾಜು ತಾಳಿಕೋಟೆ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೂಟಿಂಗ್ ಸಮಯದಲ್ಲಿಯೇ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರ ಮಗ ಭರತ್ ತಾಳಿಕೋಟೆ ಅವರು ತಂದೆಯ ಆರೋಗ್ಯದ ಬಗ್ಗೆಯೂ ಮಾತನಾಡಿದ್ದಾರೆ.
ತಂದೆಯವರನ್ನು ಉಳಿಸಲು ಇಡೀ ಚಿತ್ರತಂಡ ಪ್ರಯತ್ನ ಮಾಡಿತ್ತು. ಆದರೆ ಇಂದು ಸಂಜೆ ವೇಳೆಗೆ ನಮ್ಮನ್ನು ತಂದೆ ಅಗಲಿದ್ದಾರೆ. ಐ ಮಿಸ್ ಯು ಪಪ್ಪ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈ ಹಿಂದೆ ಒಮ್ಮೆ ತಂದೆಗೆ ಹೃದಯಾಘಾತವಾಗಿತ್ತು. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಎರಡನೇ ಬಾರಿಗೆ ತೀವ್ರ ಹೃದಯಾಘಾತ ಆಗಿದ್ದರಿಂದ ಮೃತಪಟ್ಟಿದ್ದಾರೆ.
ಉತ್ತರ ಕರ್ನಾಟಕದಲ್ಲಿ 35 ವರ್ಷದಿಂದ ನಾಟಕ ಮಾಡುತ್ತಿದ್ದಾರಡ. ಸುಮಾರು 70 ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಸರ್ಕಾರ ಅವರನ್ನು ಗುರುತಿಸಿ ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಸುಮಾರು 10 ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಾಗಿದೆ. ತಂದೆಯವರ ಮೃತದೇಹವನ್ನು ಮೊದಲು ಧಾರವಾಡದ ರಂಗಾಯಣಕ್ಕೆ ತೆಗೆದುಕೊಂಡು ಹೋಗುತ್ತೇವೆ. ಬಿಜಾಪುರದ ಸಿಂಧಗಿ ತಾಲೂಕಿನ ಚಿಕ್ಕಸಿಂಧಗಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರು ಯಾವತ್ತೂ ತೋಟದಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲಿಯೃ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ. ಅವರ ಪ್ರೀತಿಸುವವರು ಅಭಿಮಾನಿಗಳು, ಸಂಬಂಧಿಕರು, ಚಿಕ್ಕ ಸಿಂಧಗಿಗೆ ಬಂದು ದರ್ಶನ ಪಡೆದುಕೊಳ್ಳಬಹುದು ಎಂದು ಅವರ ಮಗ ಭರತ್ ತಾಳಿಕೋಟೆ ಮಾಹಿತಿಯನ್ನು ನೀಡಿದ್ದಾರೆ. ರಾಜು ತಾಳಿಕೋಟೆ ಅವರನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿದೆ. ಭರತ್ ಅಂತು ಮಾತನಾಡುವಾಗಲೇ ದುಃಖ ಜೋರಾಗಿ ಇತ್ತು. ಆದರೂ ತಂದೆಯ ಬಗ್ಗೆ ಮಾತನಾಡಿದರು.





