ಆರೋಗ್ಯ, ಉದ್ಯೋಗ, ಮದುವೆ ಅಥವಾ ಕುಟುಂಬದ ಸಮಸ್ಯೆಗಳ ಪರಿಹಾರಕ್ಕಾಗಿ ದೇವರಿಗೆ ಹರಕೆ ಪತ್ರ ಬರೆಯುವುದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ ಪತ್ತೆಯಾದ ಹರಕೆ ಪತ್ರವೊಂದು ಭಕ್ತರನ್ನು ಅಚ್ಚರಿಗೆ ದೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮಠದ ಹುಂಡಿ ಎಣಿಕೆ ವೇಳೆ ಅನಾಮಧೇಯ ಭಕ್ತನೊಬ್ಬ ಬರೆದಿದ್ದ ಪತ್ರ ಪತ್ತೆಯಾಗಿದೆ. ಪತ್ರದ ಆರಂಭದಲ್ಲಿ “ಶ್ರೀ ಗಣಪತಿಯೇ ನಮಃ” ಹಾಗೂ “ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಬರೆದು, ಬಳಿಕ ತನ್ನ ವೈಯಕ್ತಿಕ ಸಂಕಷ್ಟವನ್ನು ರಾಯರ ಮುಂದೆ ಮನಬಿಚ್ಚಿ ಬರೆದಿದ್ದಾನೆ.ಪತ್ರದಲ್ಲಿ, “ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು… ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು… ಈ ಕಷ್ಟದಿಂದ ನಮ್ಮನ್ನು ಪಾರು ಮಾಡು. ನಮ್ಮ ಜೊತೆ ರಾಯರಿದ್ದಾರೆ ಎಂಬ ನಂಬಿಕೆಯಿಂದ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ. ಗುರುಗಳೇ, ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಿ” ಎಂದು ಭಾವನಾತ್ಮಕವಾಗಿ ಮನವಿ ಮಾಡಲಾಗಿದೆ.

ವಿಶೇಷವೆಂದರೆ, ಪತ್ರದಲ್ಲಿ ಹೆಸರು, ವಿಳಾಸ ಅಥವಾ ಯಾವುದೇ ವೈಯಕ್ತಿಕ ವಿವರಗಳನ್ನು ಉಲ್ಲೇಖಿಸಿಲ್ಲ. ಆದರೂ ಅದರಲ್ಲಿರುವ ಮನವಿಯ ಶೈಲಿ ಮತ್ತು “ಆ ಹುಡುಗಿಯಿಂದ ಕಾಪಾಡಿ” ಎಂಬ ಸಾಲು ಭಕ್ತರು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.ಈ ವಿಚಿತ್ರ ಹರಕೆ ಪತ್ರ ಮಠದ ಸಿಬ್ಬಂದಿಯನ್ನಷ್ಟೇ ಅಲ್ಲ, ಭಕ್ತರಲ್ಲೂ ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.











