ಸುದ್ದಿಒನ್ : ಆಧುನಿಕತೆಯತ್ತ ಸಾಗುತ್ತಿದ್ದರೂ, ಸಮಾಜದಲ್ಲಿ ಜಾತಿ ಆಧಾರಿತ ಭೇದಭಾವ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಅಂತರಜಾತಿ ವಿವಾಹಿತರ ಮೇಲಿನ ದೌರ್ಜನ್ಯಗಳು ಇನ್ನೂ ಮುಂದುವರಿಯುತ್ತಿರುವುದು ಕಳವಳಕಾರಿಯಾಗಿದೆ. ಕುಟುಂಬದ ವಿರೋಧ, ಸಾಮಾಜಿಕ ಬಹಿಷ್ಕಾರ, ಕಿರುಕುಳ ಹಾಗೂ ಕೆಲವು ಪ್ರಕರಣಗಳಲ್ಲಿ ‘ಮರ್ಯಾದಾ ಹತ್ಯೆ’ಗಳಂತಹ ಕ್ರೂರ ಘಟನೆಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ, ಅಂತರಜಾತಿ ವಿವಾಹಿತರ ರಕ್ಷಣೆಗೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ಎಂಬ ವಿಧೇಯಕವನ್ನು ಮಂಡಿಸಲಾಗಿದೆ. ಈ ವಿಧೇಯಕವು ಜೋಡಿಗಳಿಗೆ ಕಾನೂನುಬದ್ಧ ರಕ್ಷಣೆ ಒದಗಿಸುವುದರ ಜೊತೆಗೆ, ಅಂತರಜಾತಿ ವಿವಾಹಗಳಿಗೆ ಸಾಮಾಜಿಕ ಮಾನ್ಯತೆ ನೀಡುವ ಉದ್ದೇಶ ಹೊಂದಿದೆ.
ವಿಧೇಯಕದ ಮುಖ್ಯ ಉದ್ದೇಶ ಜಾತಿ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಹಿಂಸೆ ಮತ್ತು ಕಿರುಕುಳಕ್ಕೆ ತಡೆ ನೀಡುವುದಾಗಿದೆ. ಇಬ್ಬರು ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವ ಹಕ್ಕನ್ನು ಒತ್ತಿಹೇಳುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವ ಪ್ರಯತ್ನ ಇದಾಗಿದೆ.ವಿಧೇಯಕದ ಪ್ರಕಾರ, ಅಂತರಜಾತಿ ವಿವಾಹಿತ ಜೋಡಿಗಳಿಗೆ ಅಥವಾ ಅವರ ಕುಟುಂಬಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ವಿಧಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೋಷಕರ ಒಪ್ಪಿಗೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಜೋಡಿಯನ್ನು ವಾಸಸ್ಥಳದಿಂದ ಹೊರಹಾಕುವುದು ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಅಪರಾಧವಾಗುತ್ತದೆ.
ಜೋಡಿಗಳ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ, ಅಪಹರಣ, ಬಲವಂತವಾಗಿ ಬೇರ್ಪಡಿಸುವುದು, ಲೈಂಗಿಕ ಹಿಂಸೆ ಹಾಗೂ ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಕಠಿಣ ಶಿಕ್ಷೆಗೆ ಒಳಪಟ್ಟ ಅಪರಾಧಗಳಾಗಿವೆ. ಜೊತೆಗೆ ಉದ್ಯೋಗಕ್ಕೆ ಅಡ್ಡಿಪಡಿಸುವುದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು ಅಥವಾ ಆಸ್ತಿ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕೂ ತಡೆ ವಿಧಿಸಲಾಗಿದೆ.
ಅಂತರಜಾತಿ ವಿವಾಹಿತರಿಗೆ ಸಹಾಯ ಮಾಡಿದವರನ್ನೂ ರಕ್ಷಿಸುವುದಾಗಿ ವಿಧೇಯಕ ಹೇಳಿದ್ದು, ಅವರಿಗೆ ಕಿರುಕುಳ ನೀಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜೋಡಿಯನ್ನು ಬಲವಂತವಾಗಿ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವುದನ್ನೂ ನಿಷೇಧಿಸಲಾಗಿದೆ. ಸಾಕ್ಷಿಗಳ ಗುರುತು ಮತ್ತು ವಿಳಾಸ ರಹಸ್ಯವಾಗಿರಿಸಲು ವಿಶೇಷ ರಕ್ಷಣೆ ಒದಗಿಸಲಾಗಿದೆ.ವಿಧೇಯಕ ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವ ವ್ಯವಸ್ಥೆಯೂ ಇದೆ. ಮರ್ಯಾದಾ ಹತ್ಯೆ ಪ್ರಕರಣಗಳಲ್ಲಿ ಕನಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ದಂಪತಿಗೆ ಗಾಯಗೊಳಿಸಿದರೆ 3 ವರ್ಷ ಜೈಲು ಹಾಗೂ ₹3 ಲಕ್ಷದವರೆಗೆ ದಂಡ, ಬೆದರಿಕೆ ಹಾಕಿದರೆ 5 ವರ್ಷ ಶಿಕ್ಷೆ ಹಾಗೂ ₹2 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ. ನಿರಂತರ ಬೆದರಿಕೆ ಹಾಕಿದರೆ ಶಿಕ್ಷೆಯನ್ನು 7 ವರ್ಷಗಳವರೆಗೆ ಹೆಚ್ಚಿಸಬಹುದು.ಒಟ್ಟಾರೆ, ಈ ವಿಧೇಯಕ ಅಂತರಜಾತಿ ವಿವಾಹಿತರ ಸುರಕ್ಷತೆ ಮತ್ತು ಹಕ್ಕುಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















