ಕೃಷಿ ಜೀವನ ಎಂದರೆ ಅನಿಶ್ಚಿತತೆ ಮತ್ತು ಅಪಾಯಗಳ ನಡುವಿನ ಹೋರಾಟ. ಹೊಲದಲ್ಲಿ ಕೆಲಸ ಮಾಡುವ ವೇಳೆ ಹಾವು ಕಡಿತ, ವಿದ್ಯುತ್ ಶಾಕ್, ಬಾವಿಗೆ ಬೀಳುವುದು ಅಥವಾ ಕೃಷಿ ಯಂತ್ರೋಪಕರಣಗಳಿಂದ ಅಪಘಾತ ಸಂಭವಿಸುವ ಘಟನೆಗಳು ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯ. ಇಂತಹ ದುರ್ಘಟನೆಗಳಿಂದ ಸಂಕಷ್ಟಕ್ಕೆ ಸಿಲುಕುವ ರೈತ ಕುಟುಂಬಗಳಿಗೆ ನೆರವಾಗಲು ಸರ್ಕಾರ ಹಲವು ಪರಿಹಾರ ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳಲ್ಲಿ “ರೈತ ಸಂಜೀವಿನಿ” ಯೋಜನೆ ಪ್ರಮುಖವಾಗಿದ್ದು, ಕೃಷಿ ಚಟುವಟಿಕೆಗಳ ವೇಳೆ ಸಂಭವಿಸುವ ಅನಾಹುತಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಮಾಹಿತಿ ಕೊರತೆಯಿಂದ ಅನೇಕ ರೈತರು ಈ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ.
ಈ ಯೋಜನೆಯಡಿ ಕೃಷಿ ಕೆಲಸದ ವೇಳೆ ಬಾವಿಗೆ ಬೀಳುವುದು, ಮರದಿಂದ ಕೆಳಗೆ ಬೀಳುವುದು, ವಿದ್ಯುತ್ ಆಘಾತ, ಹಾವು ಕಡಿತ, ವನ್ಯಜೀವಿಗಳ ದಾಳಿ, ಟ್ರ್ಯಾಕ್ಟರ್ ಅಥವಾ ಇತರೆ ಕೃಷಿ ಯಂತ್ರೋಪಕರಣಗಳಿಂದಾಗುವ ಅಪಘಾತಗಳಿಗೆ ಪರಿಹಾರ ಸಿಗುತ್ತದೆ.ಅಪಘಾತದಲ್ಲಿ ರೈತ ಮೃತಪಟ್ಟರೆ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ. ಸಂಪೂರ್ಣ ಅಂಗವೈಕಲ್ಯ ಉಂಟಾದರೆ ₹1 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ₹50 ಸಾವಿರದವರೆಗೆ ಆರ್ಥಿಕ ನೆರವು ದೊರೆಯಲಿದೆ.

ಅಪಘಾತ ನಡೆದ 30 ದಿನಗಳ ಒಳಗಾಗಿ ಸಮೀಪದ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. FIR, ವೈದ್ಯಕೀಯ ದಾಖಲೆಗಳು, RTC, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ ಪ್ರತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಈ ಯೋಜನೆ ಕೇವಲ ರೈತನಿಗಷ್ಟೇ ಸೀಮಿತವಾಗಿಲ್ಲ. ರೈತನ ಪತ್ನಿ, ಪತಿ ಹಾಗೂ ಅವಲಂಬಿತ ಮಕ್ಕಳಿಗೂ ಇದರ ಸೌಲಭ್ಯ ದೊರೆಯುತ್ತದೆ. 15 ರಿಂದ 70 ವರ್ಷದೊಳಗಿನವರು ಯೋಜನೆಯ ಲಾಭ ಪಡೆಯಬಹುದು.ಇದೇ ವೇಳೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಕೇವಲ ₹12 ಪ್ರೀಮಿಯಂ ಪಾವತಿಸಿ ಅಪಘಾತ ವಿಮೆ ಪಡೆಯಬಹುದಾಗಿದೆ.
ಅಪಘಾತದಲ್ಲಿ ಸಾವು ಸಂಭವಿಸಿದರೆ ₹2 ಲಕ್ಷದವರೆಗೆ ಪರಿಹಾರ ಸಿಗುತ್ತದೆ.ಅತಿವೃಷ್ಟಿ, ಬರ ಅಥವಾ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಸೌಲಭ್ಯವೂ ದೊರೆಯುತ್ತದೆ. ಕಡಿಮೆ ವೆಚ್ಚದಲ್ಲಿ ಬೆಳೆ ರಕ್ಷಣೆ ನೀಡುವ ಪ್ರಮುಖ ಯೋಜನೆ ಇದಾಗಿದೆ.
ಹಾವು ಕಡಿತ ಅಥವಾ ವನ್ಯಜೀವಿ ದಾಳಿಯಿಂದ ಸಾವು ಸಂಭವಿಸಿದರೆ ಕಂದಾಯ ಇಲಾಖೆಯು ದುರಂತ ನಿರ್ವಹಣಾ ಕಾಯ್ದೆಯಡಿ ₹2 ಲಕ್ಷದವರೆಗೆ ಪರಿಹಾರ ನೀಡುತ್ತಿದೆ.
ಸರ್ಕಾರದ ಈ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ ಸಮರ್ಪಕ ಮಾಹಿತಿ ದೊರೆತರೆ ಸಂಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ದೊಡ್ಡ ನೆರವಾಗಲಿದೆ. ಆದ್ದರಿಂದ ಪ್ರತಿಯೊಬ್ಬ ರೈತರೂ ಈ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

















