2026-27ನೇ ಸಾಲಿನ ಆಯವ್ಯಯವನ್ನು ಸಚಿವೆ ನಿರ್ಮಲಾ ಸೀತರಾಮನ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ತೆಂಗು, ಗೋಡಂಬಿ, ಶ್ರೀಗಂಧ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಬಾರಿ ಕೃಷಿಗಾಗಿ ಬರೋಬ್ಬರಿ 1,62,671 ಕೋಟಿ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ತೆಂಗು ಪ್ರೋತ್ಸಾಹಕ ಯೋಜನೆಯನ್ನು ಸಚಿವರು ಘೋಷಿಸಿದ್ದಾರೆ. ತೆಂಗಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು. ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಇಳುವರಿ ನೀಡದ ಮರಗಳನ್ನು ತೆಗೆದು, ಅವುಗಳ ಬದಲಿಗೆ ಹೆಚ್ಚಿನ ಇಳುವರಿ ನೀಡುವ ಆಧುನಿಕ ತಳಿಗಳ ಸಸಿಗಳನ್ನು ನೆಡಲು ಸರ್ಕಾರ ನೆರವು ನೀಡಲಿದೆ. ಕೇಂದ್ರದ ಈ ಯೋಜನೆ ಕರ್ನಾಟಕದ ರೈತರಿಗೆ ಹೆಚ್ಚು ವರದಾನವಾಗಲಿದೆ.
ಗೋಡಂಬಿ ಮತ್ತು ಕೋಕೋ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ. 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರ್ಯಾಂಡ್ ಆಗಿ ರೂಪಿಸುವ ಗುರಿ ಹೊಂದಲಾಗಿದೆ. ಕಚ್ಚಾ ಗೋಡಂಬಿ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಹೆಚ್ಚಿಸುವ ಮೂಲಕ ರಫ್ತು ಸಾಮರ್ಥ್ಯಕ್ಕೆ ಉತ್ತೇಜನ ನೀಡಲಾಗುವುದು.
ಹಾಗೇ ಶ್ರೀಗಂಧವು ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದ ಸಚಿವರು, ಶ್ರೀಗಂಧದ ಅರಣ್ಯ ಸಂಪತ್ತನ್ನು ಮರುಸ್ಥಾಪಿಸಲು ಒತ್ತು ನೀಡಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸೇರಿ ಶ್ರೀಗಂಧದ ವ್ಯವಸ್ಥಿತ ಕೃಷಿ ಮತ್ತು ಕೊಯ್ಲು ನಂತರದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಶ್ರೀಗಂಧದ ಪರಿಸರ ವ್ಯವಸ್ಥೆ ಮತ್ತೆ ಪುನಶ್ಚೇತನಗೊಳ್ಳಲಿದೆ. ಈ ಮೂಲಕ ರೈತರಿಗೆ ನೆರವಾಗುವಂತ ಯೋಜನೆಗಳನ್ನು ಕೇಂದ್ರ ಸರ್ಕಾರ ತರಲು ಹೊರಟಿದೆ.










