ಬೆಂಗಳೂರು; ಮಾಜಿ ಸಿಎಂ ಯಡಿಯೂರಪ್ಪ ಅವರ ಫ್ಯಾಮಿಲಿ ಬಗ್ಗೆ ಕೆಂಡಕಾರುತ್ತಿದ್ದಂತ ಶಾಸಕ ಯತ್ನಾಳ್ ಅವರನ್ನ ಈಗಾಗಲೇ ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಇದೀಗ ಆ ಸರದಿಗೆ ಶಾಸಕ ಎಸ್.ಟಿ.ಸೋಮಶೇಖರ್ ಅಂಡ್ ಶಿವರಾಮ್ ಹೆಬ್ಬಾರ್ ನಿಂತಿದ್ದಾರೆ. ಬಿಜೆಪಿಯಿಂದ ಈ ಇಬ್ಬರಿಗೂ ಗೇಟ್ ಪಾಸ್ ಸಿಕ್ಕಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಈ ಮೊದಲೇ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಗೆ ಶೋಕಾಸ್ ನೋಟೀಸ್ ಅನ್ನ ನೀಡಿತ್ತು. ಆದರೆ ಈ ನೋಟೀಸ್ ನೀಡಲು ಒಪ್ಪದ ಕಾರಣ ಶಿಸ್ತು ಸಮಿತಿ ಪದೇ ಪದೇ ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆ, ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ ಸೋಮಶೇಖರ್ ಅವರ ವಿರುದ್ಧ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿತ್ತು. ಇಬ್ಬರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಶಿಸ್ತು ಸಮಿತಿ ಉಚ್ಛಾಟನೆ ತೀರ್ಮಾನ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಏನು ಕ್ರಮ ತೆಗೆದುಕೊಳ್ಳುತ್ತೋ ಅದಕ್ಕೆ ನಮ್ಮ ಸಹಮತವಿದೆ. ಪಕ್ಷಕ್ಕೆ ಯಾರು ದ್ರೋಹ ಬಗೆಯುತ್ತಾರೋ ಅವರ ವಿರುದ್ಧ ಕೇಂದ್ರ ನಾಯಕರು ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಪೂರ್ತಿಯಾಗಿ ನಾನು ಬೆಂಬಲವನ್ನ ಕೊಡುತ್ತೇನೆ. ಅವರ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿತ್ತು. ಆದ್ದರಿಂದಲೇ ಕೇಂದ್ರ ನಾಯಕರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಆರ್.ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.















