ಸುದ್ದಿಒನ್, ಚಿತ್ರದುರ್ಗ, ಜುಲೈ. 14 : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಒಂದು ದಿನದ ಕ್ಷೇತ್ರ ಅಧ್ಯಯನದ ಅಂಗವಾಗಿ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಓ) ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು.
ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಡಿ.ಆರ್.ಡಿ.ಓ ಕೇಂದ್ರದ ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ರಕ್ಷಣಾ ವಲಯ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತು ಹಲವು ಅಪರೂಪದ ವಿಜ್ಞಾನದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟರು. ವಿಜ್ಞಾನಿಗಳು ನೀಡಿದ ಮಾಹಿತಿಯನ್ನು ಅತ್ಯಂತ ಆಸಕ್ತಿ ಮತ್ತು ಕುತೂಹಲದಿಂದ ಆಲಿಸಿದ ವಿದ್ಯಾರ್ಥಿಗಳು, ಅಲ್ಲಿನ ತಂತ್ರಜ್ಞಾನ ಹಾಗೂ ಸಂಶೋಧನೆಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಈ ಭೇಟಿಯು ವಿದ್ಯಾರ್ಥಿಗಳಲ್ಲಿ ಜ್ಞಾನದ ದಿಗಂತವನ್ನು ವಿಸ್ತರಿಸಿದ್ದಲ್ಲದೆ, ಭವಿಷ್ಯದಲ್ಲಿ ತಾವೂ ಕೂಡ ವಿಜ್ಞಾನಿಗಳಾಗಿ ದೇಶ ಸೇವೆ ಮಾಡಬೇಕು ಮತ್ತು ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ದೇಶಪ್ರೇಮದ ಕಿಡಿಯನ್ನು ಅವರಲ್ಲಿ ಮೂಡಿಸಿದ್ದು ವಿಶೇಷವಾಗಿತ್ತು.

ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಈ ಮಹತ್ವದ ಕ್ಷೇತ್ರ ಅಧ್ಯಯನದ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ ಚಂದ್ರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುಚಂದನ್, ಶಾಲೆಯ ಡೀನ್ ಅನಂತ ರಾಮ್, ಶೈಕ್ಷಣಿಕ ನಿರ್ದೇಶಕ ಸಂಪತ್ ಕುಮಾರ್ ಸಿ.ಡಿ., ಪ್ರಾಂಶುಪಾಲ ಪಿ. ಬಸವರಾಜಯ್ಯ, ಹೆಚ್.ಆರ್. ಕೋಟ್ರೇಶ್, ಮುಖ್ಯ ಶಿಕ್ಷಕಿ ಜಾರೀನಾ, ಪಿ.ಆರ್.ಓ. ರವಿಕುಮಾರ್ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಹಾಜರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.










