ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 15 : ಪರಿಸರವೆಂದರೆ ಕೇವಲ ಗಿಡ, ಮರ ಹಸಿರಷ್ಟೆ ಅಲ್ಲ. ನಮ್ಮ ಸುತ್ತಮುತ್ತಲಿನಲ್ಲಿರುವುದೆಲ್ಲಾ ಪರಿಸರವೇ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುದೀನ್ ಕುಮಾರ್ ಡಿ.ಜೆ. ತಿಳಿಸಿದರು.
ಲಯನ್ಸ್ ಕ್ಲಬ್, ರಾಕ್ಫೋರ್ಟ್, ಚಿತ್ರದುರ್ಗ, ಕೃಷ್ಣ ಯಾದವ ಸಂಸ್ಥಾನ, ಜಾನ್ ಮೈನ್ಸ್, ವೀರಶೈವ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ವಿಜ್ಞಾನ ಕೇಂದ್ರ, ಜಿಲ್ಲಾ ವಕೀಲರ ಸಂಘ, ಎಲ್.ಎಲ್.ಬಿ. ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್, ಬಿ.ಸಿ.ಶಿವಣ್ಣ ಫೌಂಡೇಷನ್ ಮತ್ತು ದವಳಗಿರಿ ಬಡಾವಣೆ ನಿವಾಸಿಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀಕೃಷ್ಣ ಯಾದವಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಆರೋಗ್ಯವಾಗಿದ್ದರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಭೂಮಿ, ನೀರು, ಗಾಳಿ, ಬೆಳಕು ಇವುಗಳೆಲ್ಲಾ ಪರಿಸರ. ಪ್ರಕೃತಿ ಎಲ್ಲವನ್ನು ಕೊಟ್ಟಿದೆ. ಪೋಷಿಸಿ ಸಂರಕ್ಷಣೆ ಮಾಡಿದರೆ ಉಪಯೋಗಕ್ಕೆ ಬರುತ್ತದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಬೇಕು. ನೀವುಗಳು ಪಡೆಯುವ ಶಿಕ್ಷಣವನ್ನು ವೃತ್ತಿ ಕೌಶಲ್ಯಕ್ಕೆ ಬಳಸಿಕೊಳ್ಳಿ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸ್ವಲ್ಪ ಎಡವಿದರೂ ದೇಶ ಸುಭದ್ರವಾಗಿರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೇವಲ ಸರ್ಕಾರಿ ನೌಕರಿಗಾಗಿಯೇ ಓದಬಾರದು. ಶಿಕ್ಷಣದಿಂದ ಜ್ಞಾನಾರ್ಜನೆಯಾಗುತ್ತದೆ. ಯಾವುದೇ ಕರ್ಮವನ್ನು ಏಕಾಗ್ರತೆ, ಭಕ್ತಿಯಿಂದ ಮಾಡಿದಾಗ ಭಗವಂತ ಪ್ರತಿಫಲ ಕೊಡುತ್ತಾನೆಂದರು.
ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಮಾತನಾಡಿ ಪೂರ್ವಜರು ಬಳುವಳಿಯಾಗಿ ಕೊಟ್ಟಿರುವ ಸುಂದರವಾದ ಪರಿಸರವನ್ನು ಇಂದಿನ ಪೀಳಿಗೆಗೆ ಉಳಿಸಬೇಕಿದೆ. ಭೂಮಿ ಅನೇಕ ಬಗೆಯ ತ್ಯಾಜ್ಯಗಳಿಂದ ಕೂಡಿರುವುದರಿಂದ ಪರಿಸರ ಕಲುಷಿತಗೊಂಡಿದೆ. ಜಾಗತಿಕ ತಾಪಮಾನ ಜಾಸ್ತಿಯಾಗಿದೆ. ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅಭಿವೃದ್ದಿ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿಯಬಾರದು. ಪಶ್ಚಿಮ ಘಟ್ಟದಲ್ಲಿ ಸಾವಿರಾರು ಮರಗಳನ್ನು ಕಡಿದು ನಾಶಪಡಿಸಲಾಗಿದೆ. ಸಕಲ ಜೀವರಾಶಿಗಳು ಆರೋಗ್ಯವಾಗಿರಬೇಕಾದರೆ ಹಸಿರು ಪರಿಸರ ಮುಖ್ಯ ಎಂದರು.
ಲಯನ್ಸ್ ಕ್ಲಬ್ ಚಿತ್ರದುರ್ಗ ರಾಕ್ಫೋರ್ಟ್ ಅಧ್ಯಕ್ಷ ಕೆ.ಎಸ್.ವಿಜಯ ಮಾತನಾಡುತ್ತ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನ ಹಾದಿಯಲ್ಲಿ ಎರಡು ಹೆಜ್ಜೆ ಇಡೋಣ. ಈ ವರ್ಷದಲ್ಲಿ ಒಂದು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಕೃಷ್ಣ ಯಾದವಾನಂದ ಮಠದಲ್ಲಿ ಇನ್ನೂರು ಗಿಡಗಳನ್ನು ನೆಡಲಾಗುವುದು. ಸಮಯ, ಹಣ, ಕಾಯಕಕ್ಕೆ ಯಾರು ಮಹತ್ವ ಕೊಡುತ್ತಾರೆ. ಅಂತಹವರು ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವ ಯಾದವಾನಂದ ಸ್ವಾಮಿ ಮಾತನಾಡಿ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಪರಿಸರ ಸುಂದರವಾಗಿತ್ತು. ಈಗ ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುತ್ತಿದ್ದೇವೆ. ಹಿಂದೆ ಮಳೆ ನೀರು, ಬೋರ್ವೆಲ್ ನೀರು ಕುಡಿದು ಎಲ್ಲರೂ ಗಟ್ಟಿಮುಟ್ಟಾಗಿದ್ದರು. ಉತ್ತಮ ವಾತಾವರಣ ನಿರ್ಮಿಸುವ ಸಂಕಲ್ಪ ಮಾಡಬೇಕಿದೆ. ಪ್ರಕೃತಿಯನ್ನು ಉಳಿಸಿದರೆ ಎಲ್ಲವೂ ಉಳಿಯುತ್ತದೆ. ತಾಪಮಾನ ಜಾಸ್ತಿಯಾಗದಂತೆ ತಡೆಯುವ ಶಕ್ತಿ ಗಿಡ-ಮರಗಳಿಗಿದೆ ಎಂದು ನುಡಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞೆ ಬೋಧಿಸಿದರು.
ಜಾನ್ ಮೈನ್ಸ್ನ ವ್ಯವಸ್ಥಾಪಕ ರಣದಿವೆ ಎನ್, ವೀರಶೈವ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಿ.ಬಿ.ಶೇಖರ್, ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿ.ಜಿ.ಶ್ರೀನಿವಾಸ್, ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ, ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎಂ.ಅನಿಲ್ಕುಮಾರ್, ಚೈತನ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಹೆಚ್.ಎಂ.ನೇತ್ರಾವತಿ ಇವರುಗಳು ವೇದಿಕೆಯಲ್ಲಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















