ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 30 : ಕಣ್ಣನ್ನು ಸುರಕ್ಷಿತವಾಗಿ ಕಾಪಾಡಿಕೊಂಡರೆ ಜಗತ್ತನ್ನು ನೋಡಬಹುದು. ದೃಷ್ಟಿ ಕಳೆದುಕೊಂಡರೆ ಬದುಕೆ ಕತ್ತಲಾಗುತ್ತದೆಂದು ಚಿತ್ರರಂಗದ ಹಾಸ್ಯ ನಟ ದೊಡ್ಡಣ್ಣ ತಿಳಿಸಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನೇತೃತ್ವದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಅಹಮದ್ ಪ್ಯಾಲೇಸ್ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರು ತಾಲ್ಲೂಕಿನ 22 ಪಂಚಾಯಿತಿಗಳಲ್ಲಿ ಉಚಿತ ಕಣ್ಣಿನ ತಪಾಸಣೆಗೆ ಅವಕಾಶ ಕಲ್ಪಿಸಿದ್ದು, ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಿ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು. ಉದಾಸೀನ ಮಾಡಬೇಡಿ. ಕಣ್ಣಿನ ದೃಷ್ಟಿ ಕಳೆದುಕೊಂಡರೆ ಬದುಕೆ ಕತ್ತಲಾಗುತ್ತದೆ. ವಯಸ್ಸಾದವರಿಗಷ್ಠೆ ಕಣ್ಣಿನ ಪೊರೆ ಬರುವುದಿಲ್ಲ. ಈಗ ಚಿಕ್ಕ ಚಿಕ್ಕ ಮಕ್ಕಳಿಗೂ ಕಣ್ಣಿನಲ್ಲಿ ಪೊರೆ ಬೆಳೆಯುತ್ತದೆ ಎಂದು ಹೇಳಿದರು.
ಕಣ್ಣಿಗೆ ಡ್ರಾಪ್ಸ್ ಹಾಕುವುದನ್ನು ಮರೆಯಬೇಡಿ. ನಿಮ್ಮಿಂದ ಒಂದು ರೂ. ಕೂಡ ಪಡೆಯುವುದಿಲ್ಲ. ಎಲ್ಲಾ ಉಚಿತವಾಗಿರುತ್ತದೆ. ಒಂದು ತಿಂಗಳಲ್ಲಿ ಎರಡೆರಡು ಪಂಚಾಯಿತಿಗಳಲ್ಲಿ ಈ ರೀತಿ ತಪಾಸಣೆಯನ್ನು ಏರ್ಪಡಿಸಲಾಗುವುದು. ಈಗ ಹನ್ನೆರಡು ವಾರ್ಡ್ಗಳಲ್ಲಿ ಮುಗಿದಿದೆ. ಇನ್ನು 23 ವಾರ್ಡ್ಗಳು ಬಾಕಿ ಉಳಿದಿದೆ. ಒಂದು ವರ್ಷದಲ್ಲಿ ನಗರದ 23 ವಾರ್ಡ್ಗಳಲ್ಲಿಯೂ ಕಣ್ಣಿನ ತಪಾಸಣೆ ನಡೆಸಲಾಗುವುದೆಂದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ ಮಾನವನ ದೇಹದಲ್ಲಿ ಕಣ್ಣು ಅತ್ಯಂತ ಸೂಕ್ಷ್ಮವಾದುದು. ಹಾಗಾಗಿ ಕಣ್ಣಿನ ಬಗ್ಗೆ ಯಾರಲ್ಲಿಯೂ ಉದಾಸೀನವಿರಬಾರದು. ಇಂತಹ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡು ಕನ್ನಡಕಗಳನ್ನು ಹಾಕಿಕೊಳ್ಳುವುದು ಉತ್ತಮ. ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರು ಅತ್ಯಂತ ಪುಣ್ಯದ ಕೆಲಸ ಮಾಡುತ್ತಿರುವುದನ್ನು ನೀವುಗಳೆಲ್ಲಾ ಬಳಸಿಕೊಳ್ಳಿ ಎಂದು ಹನ್ನೆರಡನೆ ವಾರ್ಡ್ ನಿವಾಸಿಗಳಿಗೆ ಕರೆ ನೀಡಿದರು.
ಹನ್ನೆರಡನೆ ವಾರ್ಡ್ನ ನಗರಸಭೆ ಸ್ಪರ್ಧಾಕಾಂಕ್ಷಿ ಮುನಿರಾ ಎ.ಮಕಾಂದಾರ್ ಮಾತನಾಡಿ ಮೊದಲಿನಿಂದಲೂ ನನ್ನ ವಾರ್ಡ್ನಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಮಾರ್ಗದರ್ಶನದಂತೆ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು. ಕಣ್ಣು ಅತಿ ಸೂಕ್ಷ್ಮವಾದ ಅಂಗ ಜೋಪಾನವಾಗಿ ನೋಡಿಕೊಳ್ಳಬೇಕು. ಅಗತ್ಯವಿದ್ದವರಿಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕನ್ನಡಕಗಳನ್ನು ವಿತರಿಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಸೈಟ್ಬಾಬು, ಪಿ.ಬಾಬು, ನಿವೃತ್ತ ಡಿ.ವೈ.ಎಸ್ಪಿ. ಎ.ಎಚ್.ಮಕಾಂದಾರ್, ಚಾಂದ್ಪೀರ್, ಅಬ್ದುಲ್ಲಾ, ಬಾಬ್ಜಾನ್ ಪಟೇಲ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.











