ಒಗ್ಗಟ್ಟಿನ ಮಂತ್ರ ಪಠಿಸಿದ್ದ ಡಿಕೆ ಶಿವಕುಮಾರ್ ಸಂಜೆ ವೇಳೆಗೆ ಭೂವರಾಹಸ್ವಾಮಿ ಮೊರೆ

1 Min Read

 

ಮಂಡ್ಯ: ಇಂದು ಬ್ರೇಕ್ ಫಾಸ್ಟ್ ಸಮಯಕ್ಕೇನೆ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿತ್ತು. ಸಿಎಂ ಕುರ್ಚಿಗಾಗಿ ನಡೆದಿದ್ದ ಕಿತ್ತಾಟಕ್ಕೆ ಒಂದು ಲೆವೆಲ್ ಗೆ ತಾರ್ಕಿಕ ಅಂತ್ಯ ಕಂಡಂತೆ ಆಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾತನಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಮಾಧ್ಯಮದವರ ಮುಂದೆಯೂ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದಾರೆ. ಹಾಗೇ ಹೈಕಮಾಂಡ್ ನಾಯಕರಿಗೇನೆ ಎಲ್ಲವನ್ನು ಬಿಟ್ಟಿದ್ದಾರೆ. ಅವರ ತೀರ್ಮಾನವೇ ಅಂತಿಮ ತೀರ್ಮಾನ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಇದರ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ನೇರವಾಗಿ ಭೂವರಾಹ ಸ್ವಾಮಿ ಮೊರೆ ಹೋಗಿದ್ದಾರೆ.

ಸಿಎಂ ಸ್ಥಾನಕ್ಕಾಗಿ ಕಾಯುತ್ತಿರುವ ಡಿಕೆ ಶಿವಕುಮಾರ್, ಎಲ್ಲಾ ವಿಘ್ನಗಳ ನಿವಾರಣೆಗಾಗಿ ಪೂರ್ಣಾಹುತಿ ಹೋಮದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಈ ಭೂ ವರಾಹ ಸ್ವಾಮಿ ದೇವಸ್ಥಾನವಿದೆ. ಇಲ್ಲಿಗೆ ತಮ್ಮ ಪತ್ನಿ ಉಷಾ ಅವರ ಜೊತೆಗೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ.

ಡಿಕೆ ಶಿವಕುಮಾರ್ ಎಂಟ್ರಿಯಾಗುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಹೂ ಮಳೆಯನ್ನ ಸುರಿದರು. ಮಾಜಿ ಶಾಸಕ ಕೆ.ಬಿ‌. ಚಂದ್ರಶೇಖರ್ ನೇತೃತ್ವದಲ್ಲಿ ಈ ಹೂ ಮಳೆಯನ್ನು ಸುರಿಸಲಾಯ್ತು. ಜೊತೆಗೆ ನೆರೆದಿದ್ದ ಕಾರ್ಯಕರ್ತರೆಲ್ಲ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂಬ ಘೋಷಣೆಯನ್ನು ಕೂಗಿದರು. ಅಧಿಕಾರ ಸಿದ್ಧಿಗಾಗಿ ನಡೆದ ಈ ಹೋಮದಲ್ಲಿ ಡಿಕೆ ಶಿವಕುಮಾರ್ ದಂಪತಿ ಪಾಲ್ಗೊಂಡಿದ್ದು, ಪೂರ್ಣಾಹುತಿಯನ್ನು ಅರ್ಪಣೆ ಮಾಡಲಾಯ್ತು. ಹೋಮ ಹವನದಲ್ಲಿ ಭಾಗವಹಿಸಿ, ಭೂವರಾಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು‌. ಒಟ್ನಲ್ಲಿ ಸಿಎಂ ಸ್ಥಾನಕ್ಕಾಗಿ ನಾನಾ ಪ್ರಯತ್ನದಲ್ಲಿ ದೇವರ ಮೊರೆ ಹೋದ ಪ್ರಯತ್ನವೂ ಒಂದಾಗಿದೆ.

Share This Article