ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ನಗರಸಭೆಯ 72 ಮಹಿಳಾ ಪೌರ ಕಾರ್ಮಿಕರಿಗೆ ಜಿಲ್ಲಾ ಪೌರ ಕಾರ್ಮಿಕರ ಸಂಘದಿಂದ ಗೌರಿ-ಗಣೇಶ್ ಹಬ್ಬದ ಕೊಡುಗೆಯಾಗಿ ಎಲೆ ಅಡಿಕೆ, ಹೂವು, ಹಣ್ಣು, ಬಳೆ ಸೀರೆಯಿರುವ ಬಾಗಿನ ನೀಡಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ಕುಮಾರ್ ಭಂಡಾರು ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ಅರ್ಪಿಸಿ ಮಾತನಾಡುತ್ತ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ತವರು ಮನೆಯಿಂದ ಬಾಗಿನ ನೀಡುವುದು ಹಿಂದಿನಿಂದಲೂ ನಡೆದು ಬಂದಿರುವ ಪದ್ದತಿ. ಜಿಲ್ಲಾ ಪೌರ ಕಾರ್ಮಿಕರ ಸಂಘದವರು ಬಾಗಿನ ಅರ್ಪಿಸಿ ಗೌರವಿಸುತ್ತಿರುವುದು ಅತ್ಯುತ್ತಮವಾದುದು ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ಮಹಿಳಾ ಪೌರ ಕಾರ್ಮಿಕರ್ಯಾರು ಮೇಲು-ಕೀಳಲ್ಲ. ಅವರವರ ಕೆಲಸದ ಮೇಲೆ ಗೌರವ ಸಿಕ್ಕೆ ಸಿಗುತ್ತದೆ. ದಿನ ಬೆಳಗಾದರೆ ನಗರವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರ ಕೆಲಸ ಅತ್ಯಂತ ಪವಿತ್ರವಾದುದು. ಒಳ ಮೀಸಲಾತಿಯಡಿ ಮಾದಿಗರಿಗೆ ರಾಜ್ಯ ಸರ್ಕಾರ ಶೇ.6 ರಷ್ಟು ಮೀಸಲಾತಿ ನೀಡಿರುವುದನ್ನು ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. 61 ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಡಿವೈಎಸ್ಪಿ. ದಿನಕರ್ ಮಾತನಾಡುತ್ತ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ನೀಡುತ್ತಿರುವುದು ಅತ್ಯಂತ ಶ್ರೇಷ್ಟವಾದುದು. ಮುಂದಿನ ವರ್ಷ ಈ ಕಾರ್ಯಕ್ರಮವನ್ನು ನಗರಸಭೆಯಲ್ಲಿ ಅದ್ದೂರಿಯಾಗಿ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷರುಗಳಾದ ಕುಂಚಿಗನಹಾಳ್ ಮಹಲಿಂಗಪ್ಪ, ರಂಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ, ಖಜಾಂಚಿ ಗೋವಿಂದ, ಸಹ ಕಾರ್ಯದರ್ಶಿ ನಿಜಲಿಂಗ, ಆಂಜನೇಯ(ಬಾಲು) ಏಕಾಂತಪ್ಪ, ಮಹಾಂತೇಶ್, ನಗರಸಭೆ ಅಧ್ಯಕ್ಷೆ ಸುಮಿತಾ, ಪೌರಾಯುಕ್ತರಾದ ರೇಣುಕ ಇವರುಗಳು ವೇದಿಕೆಯಲ್ಲಿದ್ದರು.


