ಚಿತ್ರದುರ್ಗ. ಜೂನ್. 30: ಮಾದಕ ವ್ಯಸನಿಗಳಾಗದೆ ಪ್ರತಿಯೊಬ್ಬರೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪಣ ತೊಡಬೇಕು ಎಂದು ತುರುವನೂರು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕರಾದ ರಮೇಶ್ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ತುರುವನೂರು ಪೊಲೀಸ್ ಠಾಣೆಯ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನ-2026′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವಸ್ತುಗಳನ್ನು ಪದೇ ಪದೇ ಬಳಸುವುದರಿಂದ ಮಾದಕತೆ ಉಂಟಾಗುತ್ತಾ ಹೋಗುತ್ತದೆ. ಅದನ್ನು ನಿರಂತರವಾಗಿ ಬಳಸುವುದರಿಂದ ಮೆದುಳು ನಿಷ್ಕ್ರಿಯವಾಗುತ್ತಾ ಸಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ, ನಗರಗಳಲ್ಲಿ ಶ್ರೀಮಂತ ಮಕ್ಕಳು ಮಾದಕ ವಸ್ತುಗಳನ್ನು ಬಳಸಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ದೇಶದ ಆಸ್ತಿಯಾಗಬೇಕೇ ಹೊರತು ದುಶ್ಚಟಗಳ ದಾಸರಾಗಬಾರದು. ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವುದು ಕಾನೂನುಬಾಹಿರ ಹಾಗೂ ಅಪರಾಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಕೃಷ್ಣ, ಮಾರುತಿಪ್ರಸಾದ್, ಷರೀಫ್, ಪ್ರಶಾಂತ್ಕುಮಾರಿ, ರಾಧಾಮಣಿ, ವೀಣಾ ಹಾಗೂ ದ್ವಿತೀಯ ದರ್ಜೆ ಸಹಾಯಕ ನೋಬೆಲ್ ಕುಮಾರ್, ತುರುವನೂರು ಪೊಲೀಸ್ ಠಾಣೆಯ ಸಿಬ್ಬಂದಿಯಾದ ಮೋಹನ್ ಕುಮಾರ್ ಮತ್ತು ನೂರ್ ಅಹಮದ್ ಇದ್ದರು.





















