ಚಳ್ಳಕೆರೆ. ಆ.06: ತಾಲ್ಲೂಕಿನಲ್ಲಿ ಜನವರಿ ರಿಂದ ಆಗಸ್ಟ್ ತಿಂಗಳ ವರೆಗೆ 191.8 ಮಿ.ಮೀ. ವಾಡಿಕೆ ಮಳೆ ನಿರೀಕ್ಷೆ ಇದ್ದು, ಇದುವರೆಗೆ 190 ಮಿ.ಮೀ. ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದೀರಿ. ಇದಕ್ಕೆ ವ್ಯತಿರಿಕ್ತವಾಗಿ ಜಿಲ್ಲೆಯಲ್ಲಿ ಶೇ.16.5 ರಷ್ಟು ಮಾತ್ರ ಬಿತ್ತನೆಯಾಗಿದೆ. ಸಮರ್ಪಕ ಮಳೆಯಾಗಿದ್ದರೆ, ಬಿತ್ತನೆ ಏಕೆ ಕುಂಠಿತವಾಗುತ್ತಿತ್ತು. ಮಳೆ ವರದಿ ಅಂಕಿ ಅಂಶಗಳು ನಿಖರವಾಗಿಲ್ಲ. ಕೂಡಲೇ ಟೆಲಿ ಮೆಟ್ರಿಕ್ ಮಳೆ ಮಾಪಕಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಳ್ಳಕೆರೆ ನಗರದ ತಾ.ಪಂ. ಸಭಾಂಗಣದಲ್ಲಿ ಗುರುವಾರ ತಾಲ್ಲೂಕಿನ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಸಭೆ ನಡೆಸೆ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಲಿದೆ. ಆಗ ಇದೇ ರೀತಿ ಮಳೆ ವರದಿಯನ್ನು ನೀಡಿದರೆ, ಕೇಂದ್ರ ತಂಡ ಬರಗಾಲ ಪರಿಸ್ಥಿತಿ ಇರುವುದನ್ನು ಒಪ್ಪುವುದೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ಟಿ.ರಘುಮೂರ್ತಿ, ಮಳೆ ಹಾಗೂ ಬಿತ್ತನೆ ಕುರಿತಂತೆ ನಿಖರವಾದ ಅಂಕಿ ಅಂಶಗಳನ್ನು ಕ್ರೂಢಿಕರಿಸಬೇಕು. ಮಳೆ ಬಂದರೂ, ಹೇಗೆ ಬಿತ್ತನೆಗೆ ಸಹಕಾರಿಯಾಗಿಲ್ಲ ಎಂಬುದನ್ನು ಕೇಂದ್ರ ತಂಡ ಮುಂದೆ ವಿಷದ ಪಡಿಸಬೇಕು ಎಂದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದಿಂದ ಸ್ಥಾಪಿತವಾಗಿರುವ 44 ಟೆಲೆ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳು ಇವೆ. ಇದರಲ್ಲಿ 26 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಕೇಂದ್ರಗಳ ದುರಸ್ಥಿ ಪ್ರಾಧಿಕಾರ ಮುಂದಾಗಿದೆ. ತಾಲ್ಲೂಕಿನಲ್ಲಿ ವಾಡಿಕೆ ಮಳೆಯಾಗಿದ್ದರು, ಅದು ಬಿತ್ತನೆ ಸಮಯದಲ್ಲಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ವರ್ಗೀಕೃತ ರೈತರ ಮಾಹಿತಿ ಸಂಗ್ರಹಣಕ್ಕೆ ಸೂಚನೆ:
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಸ್ಪರ ತಾಳೆಯಾದ ಮಾಹಿತಿಯನ್ನು ನೀಡುತ್ತೀರಿ. ಬಿತ್ತನೆ ಕ್ಷೇತ್ರ, ರೈತರ ಸಂಖ್ಯೆ ಇವುಗಳಲ್ಲಿ ಹೊಂದಾಣಿಕೆಯಾಗುವುದಿಲ್ಲ. ಅಧಿಕಾರಿಗಳು ವರ್ಗೀಕೃತ ಮಾದರಿಯಲ್ಲಿ ತಾಲ್ಲೂಕುವಾರು ಕೃಷಿ, ತೋಟಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿರುವ ರೈತರ ಮಾಹಿತಿ ಸಂಗ್ರಹಿಸಬೇಕು. ಇದರೊಂದಿಗೆ ಮಳೆಯಾಶ್ರಿತ ಕೃಷಿ, ನೀರಾವರಿ ಕೃಷಿ, ಬೆಳೆವಾರು ರೈತರ ವಿವರಗಳನ್ನು ನೀಡುವಂತೆ ಸಚಿವ ಟಿ. ರಘುಮೂರ್ತಿ ಸೂಚಿಸಿದರು.
ಪ್ರಸಕ್ತ ವರ್ಷ ಹಾಗೂ ಮುಂಗಾರು ಹಂಗಾಮಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆಯಾಗಿದೆ. ತಾಲ್ಲೂಕಿನ 1,50,082 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದ್ದು, 65,810 ರೈತರು ಇದ್ದಾರೆ. ಒಟ್ಟು ಶೇ.16.5 ರಷ್ಟು ಬಿತ್ತನೆಯಾಗಿದ್ದು, 59,756 ರೈತರು ಫಸಲ್ ಭಿಮಾ ಯೋಜನೆಯಲ್ಲಿ ನೊಂದಣಿಯಾಗಿದ್ದಾರೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ ನೀಡಿದರು.
ಚಳ್ಳಕೆರೆ ತಾಲ್ಲೂಕಿನಲ್ಲಿ 5,400 ತೋಟಗಾರಿಕೆ ಮಾಡುವ ರೈತರಿದ್ದು, ಈ ಪೈಕಿ 5068 ರೈತರು ಹವಮಾನ ಆಧಾರಿತ ಬೆಳೆ ವಿಮೆಯಡಿ ನೊಂದಣಿ ಮಾಡಿದ್ದಾರೆ. ತೋಟಗಾರಿಕೆ ಬೆಳೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದ ಎಲ್ಲಾ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕಾಗಿದೆ. ಇದಕ್ಕೆ ಆಗಸ್ಟ್ 15ರ ವರೆಗೆ ಕಾಲಾವಕಾಶವಿದ್ದು ಲೀಡ್ ಬ್ಯಾಂಕ್ ಮೂಲಕ ನೊಂದಣಿ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸವಿತಾ ಮಾಹಿತಿ ನೀಡಿದರು.
ಓವರ್ ಹೆಡ್ ಟ್ಯಾಂಕುಗಳ ಭರ್ತಿ ಗಡುವು:
ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಿಗೆ ರೂಪಿಸಲಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಓವರ್ ಹಡ್ ಟ್ಯಾಂಕ್ಗಳನ್ನು ಭರ್ತಿ ಮಾಡಿ, ಮನೆ ಮನೆ ನೀರು ಸರಬರಾಜು ಮಾಡಬೇಕು. ಯೋಜನೆ ಪೂರ್ಣಗೊಂಡರು, ಪೈಪ್ ಲೈನ್ ಕಾಮಗಾರಿ ಬಾಕಿ ಇರುವ ಕಾರಣ ಯೋಜನೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಿಲ್ಲ. ಆಗಸ್ಟ್ 30ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಟಿ.ರಘುಮೂರ್ತಿ ಗಡುವು ವಿಧಿಸಿದರು.
ಬರಗಾಲ ನಿರ್ವಹಣೆಗೆ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಬೇಕು. ಕಚೇರಿಗೆ ಸೀಮಿತವಾಗಬಾರದು. ಯಾವ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುವುದಿಲ್ಲವೋ ಅವರನ್ನು ಬದಲಾಯಿಸಲು ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಟಿ.ರಘುಮೂರ್ತಿ ಹೇಳಿದರು.
ತುಂಗಭದ್ರಾ ಅಣೆಕಟ್ಟಿನ ನೀರಿನ ಸಂಗ್ರಹಣೆ ಕಡಿಮೆಯಾಗಿದ್ದರಿಂದ ಎರಡು ತಿಂಗಳ ಕಾಲ ನೀರು ಸರಬರಾಜು ಆಗಿರಲಿಲ್ಲ. ಜುಲೈ 9 ರಿಂದ ನೀರು ಸರಬಾಜು ಆಗಿದ್ದು, 458 ಓವರ್ ಹೆಡ್ ಟ್ಯಾಂಕ್ಗಳ ಪೈಕಿ 360 ಅನ್ನು ಭರ್ತಿ ಮಾಡಲಾಗಿದೆ. ಹಂತ ಹಂತವಾಗಿ ಉಳಿದ 98 ಟ್ಯಾಂಕ್ಗಳನ್ನು ಭರ್ತಿ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಕೆ.ಎಂ.ಇ.ಆರ್.ಸಿ ಅಡಿ ಆರ್.ಓ. ಘಟಕ ಸ್ಥಾಪನೆ:
ಆರ್.ಓ. ಘಕಗಳ ನಿರ್ವಹಣೆ ಹಾಗೂ ದುರಸ್ತಿ ಅಧಿಕಾರಿಗಳು ಗಮನ ಹರಿಸಬೇಕು. ಯಾವ ಜನವಸತಿ ಪ್ರದೇಶಗಳಲ್ಲಿ ಆರ್.ಓ. ಘಟಕಗಳು ಇಲ್ಲ, ಅಂತಹ ಕಡೆ ಕೆ.ಎಂ.ಇ.ಆರ್.ಸಿ ಅಡಿ ಹೊಸದಾಗಿ ಆರ್.ಓ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ಟಿ.ರಘುಮೂರ್ತಿ ಸೂಚಿಸಿದರು.
ಚಳ್ಳಕೆರೆ ತಾಲ್ಲೂಕಿನ ಒಟ್ಟು 286 ಆರ್.ಓ. ಘಟಕಗಳಲ್ಲಿ 207 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 31 ದುರಸ್ತಿಯಲ್ಲಿದ್ದರೆ, 48 ಸ್ಕ್ರಾಫ್ ಆಗಿವೆ. ತಾಲ್ಲೂಕಿನಲ್ಲಿ 350 ಜನ ವಸತಿ ಪ್ರದೇಶಗಳಿವೆ. ಸದ್ಯ 286 ಪ್ರದೇಶಗಳಲ್ಲಿ ಆರ್.ಓ. ಘಟಕಗಳಿದ್ದು, 64 ಹೆಚ್ಚುವರಿ ಘಟಕಗಳ ಅವಶ್ಯಕತೆಯಿದೆ. ಚಳ್ಳಕೆರೆ ತಾಲ್ಲೂಕು ಸೇರಿ ಜಿಲ್ಲೆಯಾದ್ಯಂತ 1661 ಜನವಸತಿ ಪ್ರದೇಶಗಳಿದ್ದು, 1151 ಆರ್. ಓ ಘಟಕಗಳು ಇವೆ. ಇನ್ನೂ 510 ಆರ್.ಓ ಘಟಕಗಳ ಅವಶ್ಯಕತೆಯಿದೆ. ಈಗಾಗಲೇ 86 ಆರ್.ಓ.ಘಟಕಗಳ ದುರಸ್ಥಿಗೆ ಕೆ.ಎಂ.ಇ.ಆರ್.ಸಿ ಯಿಂದ ಅನುದಾನ ಕೇಳಲಾಗಿದೆ. 2ನೇ ಹಂತದಲ್ಲಿ ಹೊಸ ಆರ್.ಓ. ಘಟಕಗಳ ಸ್ಥಾಪನೆ ಯೋಜನೆ ರೂಪಿಸಿ ಅನುದಾನ ಬೇಡಿಕೆ ಇಡಲಾಗುವುದು ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಮಾಹಿತಿ ನೀಡಿದರು.
ಮಾಧ್ಯಮಗಳ ವರದಿಗಳಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿ:
ಸಾರ್ವಜನಿಕ ಕುಂದು ಕೊರತೆಗಳ ಕುರಿತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ವರದಿಗಳಿಗೆ ಸ್ಪಂದಿಸಿ, ಅಧಿಕಾರಿಗಳು ತ್ವರಿತವಾಗಿ ಸ್ಪಷ್ಟನೆ ನೀಡಬೇಕು. ಲೋಕೋಪಯೋಗಿ ಇಲಾಖೆಯಿಂದ ತಿಂಗಳ ಒಳಗಾಗಿ ಜಿಲ್ಲೆಯ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಟೆಂಡರ್ ಕರೆಯಬೇಕು. ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವ ಕಾರ್ಯದ ಬಗ್ಗೆ ಗುತ್ತಿಗೆದಾರರಿಗೆ ಕಾರ್ಯಾಗಾರವನ್ನು ಏರ್ಪಡಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಖುದ್ದು ಪರಿಶೀಲಿಸುತ್ತೇನೆ. ಲೋಪದೋಷ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಚಿವ ಟಿ.ರಘುಮೂರ್ತಿ ಎಚ್ಚರಿಕೆ ನೀಡಿದರು.
ಬೀದಿನಾಯಿ ಹಾಗೂ ಬಿಡಾಡಿ ದನಗಳಿಗೆ ಕಡಿವಾಣಕ್ಕೆ ನಿರ್ದೇಶನ:
ಚಳ್ಳಕೆರೆ ನಗರದಲ್ಲಿ ಬೀದಿನಾಯಿ ಹಾಗೂ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದೆ. ನಗರಸಭೆಯಿಂದ ತುರ್ತು ಕಾರ್ಯಚಾರಣೆ ನಡೆಸಿ, ಬೀದಿನಾಯಿ ಹಾವಳಿ ಹಾಗೂ ಬಿಡಾಡಿ ದನಗಳಿಗೆ ಕಡಿವಾಣ ಹಾಕಬೇಕು. ರಸ್ತೆ ದನಗಳನ್ನು ಬಿಡುವ ಮಾಲಿಕರಿಗೆ ದಂಡ ವಿಧಿಸಬೇಕು. ಮಾಲಿಕರು ಎಚ್ಚೆತ್ತುಕೊಳ್ಳದೇ ದನಗಳನ್ನು ಬೀದಿಗೆ ಬಿಡುವುದನ್ನು ಪುನರಾವರ್ತಿಸಿದರೆ, ಅಂತಹ ದನಗಳನ್ನು ಶಾಶ್ವತವಾಗಿ ಗೋಶಾಲೆ ದಾಳಿಸುವಂತೆ ಸಚಿವ ಟಿ.ರಘುಮೂರ್ತಿ ನಿರ್ದೇಶನ ನೀಡಿದರು. ಇದೇ ವೇಳೆ ದೇವರ ಎತ್ತುಗಳ ನಿರ್ವಹಣೆ ಟ್ರಸ್ಟ್ ರಚಿಸುವ ಕಾರ್ಯವನ್ನು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ರಾಮಪ್ಪ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ತಾಲ್ಲೂಕು ಗ್ಯಾರಂಟಿ ಪಾಧಿಕಾರದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
















