Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿ.ಜಿ.ಗೋವಿಂದಪ್ಪನವರೇ ನನಗೆ ರಾಜಕೀಯ ಗುರು ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ : ಸಚಿವ ಟಿ.ರಘುಮೂರ್ತಿ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, : ನನಗಿಂತ ಜಾಸ್ತಿ ಕೆಲಸ ಮಾಡಿರುವ ಇಬ್ಬರು ಶಾಸಕರುಗಳು ಜಿಲ್ಲೆಯಲ್ಲಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ. ನನ್ನ ಅದೃಷ್ಟವೋ, ದೈವ ಬಲವೋ ಗೊತ್ತಿಲ್ಲ. ಹೈಕಮಾಂಡ್ ನನ್ನ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ಮಂತ್ರಿಯನ್ನಾಗಿ ಮಾಡಿದೆ. ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆಂದು ನೂತನ ಸಚಿವ ಟಿ.ರಘುಮೂರ್ತಿ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಭೇಟಿ ನೀಡಿದ ಸಚಿವ ಟಿ.ರಘುಮೂರ್ತಿರವರು ಕಾರ್ಯಕರ್ತರುಗಳನ್ನುದ್ದೇಶಿಸಿ ಮಾತನಾಡಿದರು.
2008 ರಲ್ಲಿ ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿಲ್ಲ. ಆಗ ನಾನು ತಾಳ್ಮೆ ಕಳೆದುಕೊಳ್ಳದೆ ಐದು ವರ್ಷಗಳ ಕಾಲ ಪಕ್ಷದ ಕೆಲಸ ಮಾಡಿದೆ. ಜೆಡಿಎಸ್.ನವರು ನನ್ನನ್ನು ಸಂಪರ್ಕಿಸಿದಾಗ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಲಿಲ್ಲ. ಕಾಂಗ್ರೆಸ್‍ನಿಂದಲೇ ಶಾಸಕನಾಗಬೇಕೆಂದು ಹಠ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ ಪರಿಣಾಮ ಈಗ ಮಂತ್ರಿಗಿರಿ ಸಿಕ್ಕಿದೆ. ಹೊಸದುರ್ಗದ ಬಿ.ಜಿ.ಗೋವಿಂದಪ್ಪ, ಏಳು ಬಾರಿ ಶಾಸಕರಾಗಿರುವ ಮೊಳಕಾಲ್ಮುರುವಿನ ಎನ್.ವೈ.ಗೋಪಾಲಕೃಷ್ಣ ಇವರುಗಳು ಸಚಿವರಾಗಬೇಕಿತ್ತು. ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಎಐಸಿಸಿ. ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಭವಿಷ್ಯದ ಪ್ರಧಾನಿ ರಾಹುಲ್‍ಗಾಂಧಿ, ಸೋನಿಯಾಗಾಂಧಿ, ವೇಣುಗೋಪಾಲ್, ಸುರ್ಜೆವಾಲಾ
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ನಾನು ಸಚಿವನಾಗಲು ಕಾರಣ. ಎಲ್ಲಾ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಜಿಲ್ಲೆಯ ಅಭಿವೃದ್ದಿಗೆ ಪಣ ತೊಡುತ್ತೇನೆಂದು ಹೇಳಿದರು.

 

ಕೆಲವೊಮ್ಮೆ ಹಿರಿಯ ಶಾಸಕರುಗಳಿಗೆ ಅಧಿಕಾರ ಸಿಗಲ್ಲ. ಅನ್ಯ ಮಾರ್ಗದಲ್ಲಿ ನಾನು ಸಚಿವನಾಗಿಲ್ಲ. ಕಾಂಗ್ರೆಸ್ ಕಚೇರಿ ಎಂದರೆ ದೇವಸ್ಥಾನವಿದ್ದಂತೆ. ಪಕ್ಷದಲ್ಲಿ ಶಿಸ್ತು ಮುಖ್ಯ. ಕೆಲವೊಮ್ಮೆ ಅನ್ಯಾಯವಾಗುವುದುಂಟು. ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಮೂರು ಬಾರಿ ಶಾಸಕನಾಗಲು ಕಾಂಗ್ರೆಸ್ ಕಾರಣ. ಬಿ.ಜಿ.ಗೋವಿಂದಪ್ಪ ನನಗೆ ರಾಜಕೀಯ ಗುರು. ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ. ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ. ಬೇರೆಯವರು ಮುನಿಸಿಕೊಂಡಿರಬಹುದು. ಜಿಲ್ಲೆಯಲ್ಲಿ ಬರಗಾಲವಿದೆ. ಭದ್ರಾಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಕೆಲಸಕ್ಕೆ ಆದ್ಯತೆ ನೀಡುತ್ತೇನೆ. ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತೆ. ಪಕ್ಷವನ್ನು ಗೆಲ್ಲಿಸಿಕೊಂಡು ಕಟ್ಟಿ ಬೆಳೆಸೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

 

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ ಚಳ್ಳಕೆರೆ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿ ರಾಜ್ಯದ ಗಮನ ಸೆಳೆದಿರುವ ಟಿ.ರಘುಮೂರ್ತಿರವರ ಕಾರ್ಯವೈಖರಿಯನ್ನು ಗುರುತಿಸಿ ಪಕ್ಷದ ನಾಯಕರುಗಳು ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಅಧಿಕಾರಕ್ಕಾಗಿ ಆಸೆ ಪಡದೆ ನಿಷ್ಟಾವಂತರಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಆರ್ಥಿಕ ಶಕ್ತಿ ತುಂಬುವಂತೆ ಸಚಿವರಲ್ಲಿ ಮನವಿ ಮಾಡಿದರು.
ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ನೇರ್ಲಗುಂಟೆ ರಾಮಪ್ಪ ಮಾತನಾಡುತ್ತ ಕಾಂಗ್ರೆಸ್‍ಗೆ ಸೀಮಿತವಾಗಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿರುವ ಟಿ.ರಘುಮೂರ್ತಿರವರ ಪಕ್ಷ ನಿಷ್ಟೆಯನ್ನು ಪರಿಗಣಿಸಿ ನಾಯಕರುಗಳು ಮಂತ್ರಿ ಸ್ಥಾನ ನೀಡಿದ್ದಾರೆ. ಚಿತ್ರದುರ್ಗವನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ದಿಯತ್ತ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.

 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಹೆಚ್.ಶಬ್ಬೀರ್‍ಭಾಷ, ಕೆ.ಪಿ.ಬಾಬು, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತೂರಾಂ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಆರ್.ನರಸಿಂಹರಾಜ, ಆರ್.ಕೃಷ್ಣಮೂರ್ತಿ, ಸೇವಾದಳದ ಭೂತೇಶ್, ಹೆಚ್.ಅಂಜಿನಪ್ಪ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಕಿಸಾನ್‍ಸೆಲ್ ವಿಭಾಗದ ಅಧ್ಯಕ್ಷ ನಾಗರಾಜ್, ಜಿ.ವಿ.ಮಧುಗೌಡ, ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಮಂಜುನಾಥ್, ನ್ಯಾಯವಾದಿಗಳಾದ ಸುದರ್ಶನ್, ಬೀಸ್ನಳ್ಳಿ ಜಯಣ್ಣ, ಎನ್.ಶಶಾಂಕ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮುನಿರಾ ಎ.ಮಕಾಂದಾರ್, ರುದ್ರಾಣಿ ಗಂಗಾಧರ್, ಅಶೋಕ್‍ನಾಯ್ಡು, ಜಾನ್ಹವಿ ನಾಗರಾಜ್, ಸೈಯದ್ ವಲಿಖಾದ್ರಿ ಮರುಳಾರಾಧ್ಯ, ರಮೇಶ್, ಚಾಂದ್‍ಪೀರ್, ಪರ್ವಿನ್, ಭಾಗ್ಯಮ್ಮ, ನೇತ್ರಾವತಿ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು. ಜೆಸಿಬಿ ಮೂಲಕ ದೊಡ್ಡ ಗಾತ್ರದ ಹೂವಿನ ಹಾರ ಹಾಕಿ ಸಚಿವ ಟಿ.ರಘುಮೂರ್ತಿರವರಿಗೆ ಹೂವಿನ ಮಳೆ ಸುರಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now