ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ. ಎಂ.
ಭೀಮಸಮುದ್ರ, ಚಿತ್ರದುರ್ಗ (ತಾ)
ಮೊ : 8088076203
ಸುದ್ದಿಒನ್, ಚಿತ್ರದುರ್ಗ, ಮೇ. 06 : “ರೈತರ ಪಾಲಿಗೆ ಗೋವು ಕೇವಲ ಪ್ರಾಣಿಯಲ್ಲ, ಅದು ಜೀವನದ ಬೆನ್ನೆಲುಬು. ಕೃಷಿಗೆ ಅಗತ್ಯವಿರುವ ಅಮೂಲ್ಯವಾದ ಸಾವಯವ ಗೊಬ್ಬರ ಗೋಮಾತೆಯಿಂದಲೇ ಲಭ್ಯವಾಗುತ್ತದೆ,” ಎಂದು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಭೀಮಸಮುದ್ರದ ರೈತ ಸಂಘದ ವತಿಯಿಂದ ಆದಿಚುಂಚನಗಿರಿ ಮಠದ ಗೋಶಾಲೆಗೆ 80 ಪೆಂಡಿ ರಾಗಿ ಹುಲ್ಲನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಶಿವಲಿಂಗಾನಂದ ಸ್ವಾಮೀಜಿ, ಮನುಷ್ಯನಿಗೆ ಎಷ್ಟು ನೀಡಿದರೂ ತೃಪ್ತಿ ಸಾಲದು. ಆದರೆ ಗೋಮಾತೆಗೆ ಆಹಾರ ನೀಡಿದರೆ ಅದು ರೈತನ ಹೊಲಕ್ಕೆ ಬೇಕಾದ ಗೊಬ್ಬರ ಹಾಗೂ ಬದುಕಿಗೆ ಆಸರೆಯಾಗಿ ನಿಂತು ರೈತನ ಬಾಳನ್ನು ಸಮೃದ್ಧಗೊಳಿಸುತ್ತದೆ ಎಂದರು.
ಮಠದ ಗೋಶಾಲೆಯಲ್ಲಿ ಮಲೆನಾಡು ಗಿಡ್ಡ, ಹಳ್ಳಿಕಾರ್ ತಳಿ ಸೇರಿದಂತೆ ಸುಮಾರು 175 ಹಸುಗಳನ್ನು ಸಂರಕ್ಷಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಗೋವುಗಳಿಗೆ ಸಿಗುವ ಮಾನ್ಯತೆ ನಮ್ಮ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಿಗಬೇಕಿದೆ. ಪ್ರತಿ ಗೋಶಾಲೆಗಳಿಗೆ ಸರ್ಕಾರ ಒಂದ ಹಸುವಿಗೆ ಕನಿಷ್ಠ 20 ರೂಪಾಯಿ ನೀಡಿದರೂ ಅವುಗಳನ್ನು ಸುಲಭವಾಗಿ ಸಾಕಬಹುದು ಎಂದು ಶ್ರೀಗಳು ತಿಳಿಸಿದರು.
ಪರಮಪೂಜ್ಯ ಬಿ ಜಿ ಎಸ್ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂಕಲ್ಪದಂತೆ ಬರದ ನಾಡಿನಲ್ಲಿ ಗೋವುಗಳು ಕಸಾಯಿಖಾನೆಗೆ ಸೇರುವುದನ್ನು ತಪ್ಪಿಸಲು ಈ ಗೋಶಾಲೆಯನ್ನು ತೆರೆಯಲಾಗಿದೆ. ಆದಿಚುಂಚನಗಿರಿ ಮಠದ ಸಹಕಾರದಿಂದ ಆರು ತಿಂಗಳಿಗೆ ಆಗುವಷ್ಟು ಮೇವನ್ನು ಮುನ್ನೆಚ್ಚರಿಕೆಯಾಗಿ ಸಂಗ್ರಹಿಸಲಾಗುತ್ತಿದೆ.ಆಹಾರವಿಲ್ಲದೆ ಯಾವ ಮನುಷ್ಯನೂ, ರಾಜಕಾರಣಿಯೂ ಬದುಕಲು ಸಾಧ್ಯವಿಲ್ಲ. ದಾವಣಗೆರೆ ಮತ್ತು ಚಿತ್ರದುರ್ಗದ ಜಿಲ್ಲೆಗಳ ರೈತರು ನಿರಂತರವಾಗಿ ರಾಗಿ ಹುಲ್ಲು ಮತ್ತು ಭತ್ತದ ಹುಲ್ಲನ್ನು ನೀಡುವ ಮೂಲಕ ಗೋಸೇವೆಯಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿ.ಎಂ. ಲಿಂಗರಾಜು, ಪ್ರಸನ್ನ ಕುಮಾರ್, ಭೀಮಸಮುದ್ರ ಗ್ರಾಮದ ರೈತ ಸಂಘದ ಅಧ್ಯಕ್ಷ ಆರ್. ಶಂಕರ್ ಮೂರ್ತಿ, ಕಾರ್ಯದರ್ಶಿ ರಘು, ಸದಸ್ಯರಾದ ನಿರಂಜನ್, ಬಸಪ್ಪ, ತಿಪ್ಪೇಶ್ ನಾಯ್ಕ, ಗಿರೀಶ್ ನಾಯ್ಕ, ಮಾರುತಿ, ಕೆಂಚವೀರಪ್ಪ ಹಾಗೂ ಪಾಳ್ಯ ಮತ್ತು ಭೀಮಸಮುದ್ರದ ರೈತರು ಉಪಸ್ಥಿತರಿದ್ದರು.







