ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 : ಹಾಲು ಉತ್ಪಾದಕ ರೈತರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವ ಮೂಲಕ ಸಂಘದ ಹಿತ ಕಾಪಾಡಬೇಕು ಎಂದು ಶಿಮುಲ್ ನಿರ್ದೇಶಕ ಬಿಸಿ. ಸಂಜೀವಮೂರ್ತಿ ತಿಳಿಸಿದರು.
ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ನಡೆದ ರಂಗೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಕೃಷಿ ಸಲಕರಣೆಗಾಗಿ ಅನುದಾನವನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರಗಳನ್ನು ರೈತರಿಗೆ ವಿತರಣೆಯನ್ನು ಮಾಡಲಾಗುತ್ತಿದ್ದು, ಉತ್ಪಾದಕರು ಸದುಪಯೋಗ ಪಡಿಸಿಕೊಳ್ಳಬೇಕು. ರೈತರು ವಿಮೆ ಮಾಡಿಸಿದ ಹಸುಗಳು ಮೃತಪಟ್ಟು ಈ ಹಿಂದೆ ವಿಮೆ ಹಣ ಬರಲು ತಡವಾಗುತ್ತಿತ್ತು, ಇದೀಗ ಒಕ್ಕೂಟವು ಹೊಸ ಇನ್ಸೂರೆನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ರಾಸುಗಳು ಆಕಸ್ಮಿಕವಾಗಿ ಮೃತಪಟ್ಟರೇ ಪಶುವೈದ್ಯರು ಬಂದು ತಪಾಸಣೆ ನಡೆಸಿ ನಂತರ 48 ಗಂಟೆಯೊಳಗೆ ಮೆಸೇಜ್ ಬರುತ್ತೆದೆ. ನಂತರ ಪರಿಹಾರ ಹಣ ಸಿಗುತ್ತದೆ. ಉತ್ಪಾದಕರಿಂದ ಪ್ರತಿವರ್ಷ ರೈತರಿಂದ 150 ರೂಪಾಯಿ ಜೊತೆಗೆ 450 ರೂಪಾಯಿ ಒಕ್ಕೂಟದಿಂದ ಹಾಕಿ ಇನ್ಸೂರೆನ್ಸ್ ಹಣ ಕಟ್ಟಲಾಗುತ್ತದೆ. ಒಂದು ವೇಳೆ ಹಾಲು ಹಾಕುವವರು 18 ವರ್ಷದಿಂದ 40 ವರ್ಷದೊಳಗಿನವರು ಅಪಘಾತದಲ್ಲಿ ಮೃತಪಟ್ಟರೆ ಒಂದು ಲಕ್ಷ ರೂಪಾಯಿ ಹಣವನ್ನು ಒಕ್ಕೂಟದಿಂದ ಪರಿಹಾರ ನೀಡಲಾಗುವುದು. 40 ವರ್ಷದಿಂದ 60 ವರ್ಷದೊಳಗಿನವರು ಮರಣ ಹೊಂದಿದರೆ 40 ಸಾವಿರ ಹಾಗೂ 60 ವರ್ಷ ಮೇಲ್ಪಟ್ಟವರು ಮೃತರಾದರೇ 20 ಸಾವಿರ ರೂಪಾಯಿ ಪರಿಹಾರ ಹಣ ನೀಡಲಾಗುವುದು. ಈಗೆ ಒಕ್ಕೂಟದಿಂದ ಅನೇಕ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ರಂಗೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶ್ರೀ ಮತಿ ಭುವನೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶು ವೈದ್ಯಾಧಿಕಾರಿ ಡಾ. ಸತ್ಯನಾರಾಯಣ ಚೌದರಿ, ಆಡಳಿತ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಶೈಲಜಾ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.










