ಚಿತ್ರದುರ್ಗ. ಏ.22: ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಳ್ಳುವ ಮೂಲಕ ಶೇ.100ರಷ್ಟು ಕರ ವಸೂಲಾತಿಯಲ್ಲಿ ಸಾಧನೆ ಮಾಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕರ ವಸೂಲಾತಿ ಮಾಡಬೇಕಿದೆ. ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕರ ವಸೂಲಿಗಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಕರ ವಸೂಲಾತಿ ಅಂದೋಲನ, ಜಾಗೃತಿ, ಸಮನ್ವಯತೆ, ಯೋಜಿತ ಯೋಜನೆ, ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಕರ ವಸೂಲಾತಿ ಮಾಡಿರುವುದು ಉತ್ತಮ ಬೆಳೆವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ತೆರಿಗೆಯಿಂದ ಸಂಗ್ರಹಿಸುವ ಆದಾಯವನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ, ಗ್ರಾಮದ ಅಭಿವೃದ್ಧಿಗೆ ಮತ್ತು ಅಲ್ಲಿನ ನಿವಾಸಿಗಳ ಮೂಲಭೂತ ಸೌಕರ್ಯ ಒದಗಿಸಲು ಬಳಸಲಾಗುತ್ತಿದೆ ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಮಾತನಾಡಿ, ಪ್ರತಿನಿತ್ಯವೂ ಜಿ.ಪಂ ಸಿಇಒ, ಮುಖ್ಯ ಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿಗಳು ಸಭೆ, ವಿಡಿಯೋ ಕಾನ್ಪ್ರೆನ್ಸ್ನಲ್ಲಿ ಚರ್ಚಿಸಿ, ಅವರು ನೀಡಿರುವ ಮಾರ್ಗದರ್ಶನದಂತೆ ಕರ ವಸೂಲಾತಿ ಅಭಿಯಾನ ನಡೆಸಿ, ಕರ ವಸೂಲಾತಿಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಪ್ರಸಕ್ತ ವರ್ಷ ಶೇ.100ರಷ್ಟು ಕರವಸೂಲಾತಿ ಸಾಧನೆಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕಾರ್ಯಗತಗೊಳಿಸಲಾಗುತ್ತಿದೆ. ಶೇ.100ರಷ್ಟು ಕರ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ ಮಾತನಾಡಿ, ಬರ ಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು ಸಂಪನ್ಮೂಲ ಕ್ರೂಢೀಕರಣ, ಬೇರೆ ಜಿಲ್ಲೆಗಳಿಗೆ ಸರಿ ಸಮನಾಗಿ ಕರ ವಸೂಲಾತಿ ಆಗಿರುವುದಕ್ಕೆ ಜಿ.ಪಂ ಸಿಇಒ ಸೋಮಶೇಖರ್ ಅವರ ನಿರಂತರ ಮಾರ್ಗದರ್ಶನ ಕಾರಣವಾಗಿದೆ. 05 ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಕ, ಪಿಡಿಒ, ಬಿಲ್ ಕಲೆಕ್ಟರ್ ಮನೆ ಮನೆ ಭೇಟಿ ನೀಡುವ ಮೂಲಕ ಕರ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಕರ ವಸೂಲಾತಿ ಹಣ ಸದ್ಭಳಕೆ ಆಗಲಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಶೇ.100ರಷ್ಟು ಕರ ವಸೂಲಾತಿ ಸಾಧನೆ ತೋರಿದ ಇಂಗಳದಾಳ ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾಶ್ರೀ, ಕರವಸೂಲಿಗಾರ ಹೆಚ್.ನಾಗರಾಜ್, ಮಾಡನಾಯಕನಹಳ್ಳಿ ಪಿಡಿಒ ಟಿ.ಲಲಿತಾ, ಕರವಸೂಲಿಗಾರ ಎಸ್.ಎನ್.ಮಲ್ಲಿಕಾ, ಮಲ್ಲಾಡಿಹಳ್ಳಿ ಪಿಡಿಒ ಈ.ಚೂಡಾಮಣಿ ಕರವಸೂಲಿಗಾರ ಎಂ.ನವೀನ್ ಕುಮಾರ್, ಗುಂಡೇರಿ ಪಿಡಿಒ ಎಸ್.ಉಷಾ, ಕರವಸೂಲಿಗಾರ ಜಿ.ಕೆ.ಶಿವಕುಮಾರ್, ಮತ್ತೊಡು ಪಿಡಿಒ ಜಿ.ಶೇಖರಪ್ಪ, ಕರವಸೂಲಿಗಾರ ಎಸ್.ಈಶ್ವರಪ್ಪ, ಲಕ್ಕಿಹಳ್ಳಿ ಪಿಡಿಒ ಎನ್.ಹನುಮಂತಪ್ಪ, ಕರವಸೂಲಿಗಾರ ಕುಮಾರ್, ಕಂಗುವಳ್ಳಿ ಪಿಡಿಒ ಎಸ್.ಗೋವಿಂದ ರಾಜು, ಕರವಸೂಲಿಗಾರ ಟಿ.ಧನಂಜಯ, ಬೋಕಿಕೆರೆ ಪಿಡಿಒ ಬಿ.ಆರ್.ಜಯಣ್ಣ, ಕರವಸೂಲಿಗಾರ ಟಿ.ಮಂಜುನಾಥ್, ದೊಡ್ಡ ಉಳ್ಳಾರ್ತಿ ಪಿಡಿಒ ಸುರೇಶ್, ಕರವಸೂಲಿಗಾರ ಬಿ.ಜಯರಾಮ್, ಅಬ್ಬೇನಹಳ್ಳಿ ಪಿಡಿಒ ಎಂ.ಮೋಹನ್ ದಾಸ್, ಕರವಸೂಲಿಗಾರ ಶೇಖರಪ್ಪ ಹಾಗೂ 2024-25ನೇ ಸಾಲಿನಲ್ಲಿ ಕರವಸೂಲಿಯಲ್ಲಿ ಜಿಲ್ಲೆಯಲ್ಲಿ ಶೇ.77.58 ರಷ್ಟು ಸಾಧನೆ ಮಾಡಿರುವ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಮಧು, ಜಿಲ್ಲಾ ಯೋಜನಾ ವ್ಯವಸ್ಥಾಪಕ (ಇ-ಆಡಳಿತ) ಹೆಚ್.ಶಶಿಧರ್, ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೈಯದ್ ಪಿಜಾ ಏ ಇರಮ್, ನರೇಗಾ ಶಾಖೆಯ ವ್ಯವಸ್ಥಾಪಕ ಸುನೀಲ್, ಜಿಲ್ಲಾ ನರೇಗಾ ಎಡಿಪಿಸಿ ಮೋಹನ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ. ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















