ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 10 : ಸರ್ವ ಜನಾಂಗದವರನ್ನು ಸಮಾನವಾಗಿ ಕಾಣುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಪರೂಪದ ರಾಜಕಾರಣಿಯಾಗಿದ್ದರೆಂದು ಮಾಜಿ ಸಚಿವ
ಹೆಚ್.ಆಂಜನೇಯ ಸ್ಮರಿಸಿದರು.

ಶನಿವಾರ ಬೆಳಗಿನ ಜಾವ ನಿಧನರಾದ ಸಚಿವ ಡಿ.ಸುಧಾಕರ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾಗಿದ್ದ ಡಿ.ಸುಧಾಕರ್ ಎಲ್ಲರ ಮನ ಗೆದ್ದಿದ್ದಾರೆ. ಅವರ ಚಿಕ್ಕಪ್ಪ ಜಯಣ್ಣ ಪ್ರಭಾವಿ ರಾಜಕಾರಣಿಯಾಗಿದ್ದರು. ರಾಜಕೀಯ ಹಿನ್ನೆಲೆಯಿಂದ ಬಂದ ಡಿ.ಸುಧಾಕರ್ರವರ ಅಕಾಲಿಕ ನಿಧನದಿಂದ ಪಕ್ಷ ಹಾಗೂ ಅಭಿಮಾನಿಗಳಿಗೆ ಅತೀವ ನೋವುಂಟಾಗಿದೆ. ಬಡವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಕಳಕಳಿಯಿತ್ತು. ಚಿತ್ರದುರ್ಗ ಜಿಲ್ಲೆಗೆ ಅಪ್ಪರ್ಭದ್ರಾ ಯೋಜನೆ ಮಂಜುರಾಗಬೇಕೆಂದು ಅವಿರತವಾಗಿ ಶ್ರಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಡಿ.ಸುಧಾಕರ್ರವರನ್ನು ಉಳಿಸಿಕೊಳ್ಳಲು ಎಷ್ಟೆ ಪ್ರಯತ್ನಿಸಿದರು ಆಗಲಿಲ್ಲ. ಮೃತರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಿ ದುಃಖತಪ್ತ ಕುಟುಂಬಕ್ಕೆ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡುತ್ತ ಪಕ್ಷಾತೀತ ರಾಜಕಾರಣಿಯಾಗಿದ್ದ ಸಚಿವ ಡಿ.ಸುಧಾಕರ್ ಎಲ್ಲಾ ಜಾತಿ ಧರ್ಮದವರ ಮನದಲ್ಲಿ ನೆಲೆಯೂರಿದ್ದಾರೆ. ಜನಾಂಗ, ಜಾತಿಯಿಲ್ಲದಿದ್ದರೂ ಚುನಾಯಿತ ಪ್ರತಿನಿಧಿಗಳಾಬಹುದು ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿದ್ದರು. ಕಷ್ಚವೆಂದು ತಮ್ಮ ಬಳಿ ಯಾರಾದರೂ ಬರಲಿ ನೆರವು ನೀಡುತ್ತಿದ್ದರೆಂದು ಗುಣಗಾನ ಮಾಡಿದರು.
ಆಶ್ರಯ ಕಮಿಟಿ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಡಿ.ಸುಧಾಕರ್ ಜಾತಿ ಮೀರಿ ರಾಜಕೀಯದಲ್ಲಿ ಬೆಳೆದ ಪರಿಣಾಮ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ಪಕ್ಷ ಬಡವಾಗಿ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ಕಂಬನಿ ಮಿಡಿದರು.
ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಎಲ್ಲರ ಕೈಗೂ ಸುಲಭವಾಗಿ ಸಿಗುತ್ತಿದ್ದ ಸಚಿವ ಡಿ.ಸುಧಾಕರ್ ತಮ್ಮ ಬಳಿ ಯಾರೆ ಬಂದು ಸಮಸ್ಯೆಗಳನ್ನು ಹೇಳಿಕೊಂಡರೆ ಕೈಲಾದ ನೆರವು ನೀಡಿ ಕಳಿಸುತ್ತಿದ್ದರು. ಸಣ್ಣ ಸಣ್ಣ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಅವರು ಜೈನ್ ಜನಾಂಗಕ್ಕೆ ಸೇರಿದವರಾಗಿದ್ದರು ಚುನಾವಣೆಯಲ್ಲಿ ಎಲ್ಲಾ ಜಾತಿ ಧರ್ಮದವರ ಮತಗಳಿಂದ ಗೆಲ್ಲುತ್ತಿದ್ದರು. ಅಂತಹ ಜಾತ್ಯಾತೀತ ರಾಜಕಾರಣಿ ಸಾವು ಎಲ್ಲರಿಗೂ ನೋವು ತಂದಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಎಸ್.ಎನ್.ರವಿಕುಮಾರ್, ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಸಮ್ಮ ತಿಪ್ಪೇಸ್ವಾಮಿ, ಮುದಸಿರ್ ನವಾಜ್, ದಲಿತ ಮುಖಂಡ ಬಿ.ರಾಜಣ್ಣ, ಎ.ಜಾಕಿರ್ಹುಸೇನ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಆರ್.ಶಿವಣ್ಣ, ಇನ್ನು ಅನೇಕರು ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.





















