ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜನವರಿ. 02 : ಬೆಳೆದು ಫಸಲಿಗೆ ಬಂದಿದ್ದ ಸುಮಾರು 15 ಕ್ಕೂ ಅಧಿಕ ಅಡಿಕೆ ಮರಗಳನ್ನು ಯಾರೋ ಕಿಡುಗೇಡಿಗಳು ರಾತ್ರೋರಾತ್ರಿ ಕಡಿದು ಹಾಕಿದ ಘಟನೆ ತಾಲೂಕಿನ ಜಾಜೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಿಪ್ಪೇಸ್ವಾಮಿ ಎನ್ನುವ ರೈತ ತಮ್ಮ ನೀರಾವರಿ ಜಮೀನಿನಲ್ಲಿ 5-6 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಮರಗಳು ಈಗ ಫಸಲಿಗೆ ಬಂದಿವೆ. ಇಂತಹ ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಜಮೀನಿಗೆ ಬಂದ ಕಿಡಿಗೇಡಿಗಳು ಅಡಿಕೆ ಮರಗಳನ್ನ ಕಡಿದು ದುಷ್ಕೃತ್ಯ ಎಸಗಿದ್ದಾರೆ. ಈ ದುಷ್ಕೃತ್ಯದಿಂದ ರೈತ ತಿಪ್ಪೇಸ್ವಾಮಿ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಡಿಕೆ ಬೆಳೆ ಮೇಲೆ ಬದುಕು ಕಟ್ಟಿಕೊಂಡಿದ್ದ ರೈತ ಇದೀಗ ಕಂಗಾಲಾಗಿದ್ದಾನೆ.
ಗ್ರಾಮದಲ್ಲಿ ಇಂತಹ ಕೃತ್ಯಗಳು ಹೆಚ್ಚುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪರಶುರಾಮಪುರ ಪೋಲೀಸ್ ಠಾಣೆ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ.


















