ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮೇ. 18 : ತಾಲೂಕಿನ ಪರಶುರಾಂಪುರ ಹೋಬಳಿಯ ಪುಟ್ಲಾರಹಳ್ಳಿ ಗ್ರಾಮದ ಭಕ್ತರು ತಳಕು ಬಳಿಯ ಎತ್ತಪ್ಪನ ಬೆಟ್ಟದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಸಮಯದಲ್ಲಿ ಭಕ್ತರ ಮೇಲೆ ಹೆಜ್ಜೇನು ಹುಳುಗಳು ದಾಳಿ ನಡೆಸಿದ ಘಟನೆ ಇಂದು ನಡೆದಿದೆ.
ಬೆಟ್ಟದಲ್ಲಿ ನೆಲಸಿರುವ ಎತ್ತಪ್ಪನ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ವೇಳೆ, ದೇವಸ್ಥಾನದ ಬಳಿ ಪೂಜೆ ಸಮಯದಲ್ಲಿ ಊದಿನಗಕಡ್ಡಿ ಹೊಗೆಯಿಂದ ಏಕಾಏಕಿ ಕೆರಳಿದ ಹೆಜ್ಜೆನು ಹುಳುಗಳು ಸುಮಾರು 30ಕ್ಕೂ ಹೆಚ್ಚು ಭಕ್ತರ ಮೇಲೆ ದಾಳಿ ನಡೆಸಿವೆ.
ಜೇನು ಹುಳುಗಳ ದಾಳಿಯಿಂದ ಗಾಯಗೊಂಡ ಭಕ್ತರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ತಳಕು ಹಾಗೂ ದೊಡ್ಡ ಉಳ್ಳಾರ್ತಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ಎತ್ತಪ್ಪನ ಬೆಟ್ಟ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.









