ಬೆಂಗಳೂರು: ಅದ್ಯಾಕೋ ಏನೋ ಕಾಂಗ್ರೆಸ್ ಸರ್ಕಾರಕ್ಕೆ ಜಾತಿಗಣತಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಮೊದಲ ಬಾರಿಗೆ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಮೇಲೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಳಿಕ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಹೊಸದಾಗಿಯೇ ಜಾತಿಗಣತಿ ಮಾಡಬೇಕೆಂದು ನಿರ್ಧಾರ ಮಾಡಲಾಯ್ತು. ಸೆಪ್ಟೆಂಬರ್ 22ರಿಂದ ಜಾತಿಗಣತಿ ಸಮೀಕ್ಷೆಗೆ ಸರ್ಕಾರ ಅಸ್ತು ಎಂದಿದೆ. ಈಗಲೂ ಬಿಜೆಪಿ ನಾಯಕರು ಈ ಸಮೀಕ್ಷೆಯನ್ನ ವಿರೋಧಿಸುತ್ತಲೆ ಇದ್ದಾರೆ. ಇಂದು ಒಕ್ಕಲಿಗ ನಾಯಕರೆಲ್ಲಾ ಒಟ್ಟುಗೂಡಿದ್ದಾರೆ.
ಬೆಂಗಳೂರು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಈ ಸಭೆಯಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ನಾಯಕರು ಭಾಗಿಯಾಗಿದ್ದಾರೆ. ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಆದಿ ಚುಂಚನಗಿರಿ ಸ್ವಾಮೀಜಿ ಸೇರಿದಂತೆ ಒಕ್ಕಲಿಗ ನಾಯಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೇಂದ್ರ ಸರ್ಕಾರ ಸಮೀಕ್ಷೆ ಮಾಡೋದಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಸಮೀಕ್ಷೆಯನ್ನ ಮಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗಳ ಮೇಲೆ ಚರ್ಚೆ ನಡೆದಿದೆ. ಡಿಕೆ ಶಿವಕುಮಾರ್ ಅವರ ಹೆಸರನ್ನ ಕೇಂದ್ರ ಸಚಿವ ಹೆಚ್ಡಿಕೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಕೆಲವೊಂದು ತೀರ್ಮಾನವನ್ನು ಕೈಗೊಂಡಿದ್ದಾರೆ. ಜಾತಿ ಕಾಲಂನಲ್ಲಿ ಎಲ್ಲರೂ ಕೂಡ ಒಕ್ಕಲಿಗ ಎಂದೇ ಬರೆಸಬೇಕು. ಉಪಪಂಗಡಗಳ ಗೊಂದಲ ಆಗದಂತೆ ಬರೆಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಸಮುದಾಯದವರು ಎಲ್ಲರಿಗೂ ಸೂಕ್ತವಾದಂತ ಮಾರ್ಗದರ್ಶನ ನೀಡಬೇಕು. ಕ್ರಿಶ್ಚಿಯನ್ ಒಕ್ಕಲಿಗ ಎಂದು ಹೆಸರು ನಮೂದಾಗಿರುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ. ಹೀಗಾಗಿ ಆ ಪದವನ್ನು ತೆಗೆಸಬೇಕು ಎಂಬುದು ಒಕ್ಕಲಿಗರ ಅಭಿಪ್ರಾಯವಾಗಿದೆ. ಸದ್ಯಕ್ಕೆ ಒಕ್ಕಲಿಗರೆಲ್ಲರು ಒಗ್ಗಟ್ಟಾಗಿದ್ದಾರೆ. ಒಂದೇ ರೀತಿಯಾಗಿ ಸಮೀಕ್ಷೆ ವೇಳೆ ಜಾತಿ ನಮೂದಿಸಲು ನಿರ್ಧಾರ ಮಾಡಿದ್ದಾರೆ.


