ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಶಂಕರಿಯಲ್ಲಿರುವ ಧ್ರುವ ಸರ್ಜಾ ಅವರ ಮನೆ ಬಳಿಯ ನಿವಾಸಿಯೇ ಆಗಿರುವ ಮನೋಜ್ ಎಂಬುವವರು ಈ ದೂರನ್ನ ದಾಖಲು ಮಾಡಿದ್ದಾರೆ.
ಧ್ರುವ ಸರ್ಜಾ ಅವರ ಅಭಿಮಾನಿ ಬಳಗ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಹೀಗಾಗಿ ಹುಟ್ಟುಹಬ್ಬಕ್ಕೆ, ಮತ್ತ್ಯಾವುದೋ ವಿಶೇಷತೆಗೆ ಧ್ರುವ ಸರ್ಜಾ ಅವರನ್ನ ಭೇಟಿಯಾಗಲು ಅವರ ಮನೆ ಬಳಿ ಹೋಗ್ತಾರೆ. ಕೆಲವೊಮ್ಮೆ ರೋಡ್ ಅನ್ನೇ ಬ್ಲಾಕ್ ಮಾಡ್ತಾರೆ. ಇದು ಅಕ್ಕ ಪಕ್ಕದ ಮನೆಯವರಿಗೆಲ್ಲಾ ಸ್ವಲ್ಪ ಕಷ್ಟವೇ. ಇದೇ ಕಾರಣದಿಂದಾನೇ ಪೊಲೀಸರಿಗೆ ದೂರು ನೀಡಲಾಗಿದೆ.
ಮನೋಜ್ ನೀಡಿದ ದೂರಿನಲ್ಲಿ, ಇವರುಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಅಂತ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಮನೆ ಬಳಿ ಹೋದ ಅಭಿಮಾನಿಗಳು ಮನೋಜ್ ಎಂಬುವರ ಮನೆ ಮುಂದೆ ಪ್ರತಿನಿತ್ಯ ಬೈಕ್ ಪಾರ್ಕಿಂಗ್ ಮಾಡ್ತಾರಂತೆ. ಅದರಲ್ಲೂ ಫ್ಯಾನ್ಸ್ಗಳು ಪ್ರತಿನಿತ್ಯ ಬೈಕ್ ಗಳನ್ನ ಅಡ್ಡಲಾಗಿ ಪಾರ್ಕ್ ಮಾಡ್ತಾರಂತೆ. ಜೊತೆಗೆ ಮನೆ ಮುಂದೆ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆಯೇ ಉಗಿಯುತ್ತಾರೆ.
ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗ್ತಿದೆ ಎಂದು ನಟ ಧ್ರುವ ಸರ್ಜಾ ವಿರುದ್ದ FIR ದಾಖಲಿಸುವಂತೆ ದೂರು ನೀಡಿದ್ದಾರೆ. ಸದ್ಯ ದೂರಿನನ್ವಯ ಬನಶಂಕರಿ ಪೊಲೀಸರಿಂದ NCR ದಾಖಲಾಗಿದೆ. ನಟ ಧ್ರುವ ಸರ್ಜಾ, ಮ್ಯಾನೇಜರ್, ಚಾಲಕ ಹಾಗೂ ಫಾನ್ಸ್ ಗಳ ವಿರುದ್ದ ದೂರು ದಾಖಲಾಗಿದೆ. ಈ ಬಾರಿ ನಡೆದ ಹುಟ್ಟುಹಬ್ಬದ ಸಂಭ್ರಮದಲ್ಲಿಯೂ ಇಡೀ ಏರಿಯಾವನ್ನ ಬ್ಯಾರಿಕೇಡ್ ಮೂಲಕ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ಗಾಡಿ ಪಾರ್ಕಿಂಗ್ ಗೂ ಸಮಸ್ಯೆಯಾಗಿತ್ತು ಎಂದು ದೂರಲಾಗಿದೆ.
