ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಹಿರಿಯರ ಮಾರ್ಗದರ್ಶನ, ತ್ಯಾಗ, ಅನುಭವ, ಸೇವೆ ಇಂದಿನ ಪೀಳಿಗೆಗೆ ದಾರಿ ದೀಪವಾಗಬೇಕೆಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಸುದರ್ಶನ್ ಕುಮಾರ್ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಸಮೀಪವಿರುವ ಕೆಂಗುಂಟೆಯಲ್ಲಿ ಮಾರುತಿ ನಿವೃತ್ತ ನೌಕರರ ಸಂಘ ಮತ್ತು ಗ್ರಾಮಸ್ಥರು ಹಾಗೂ ರೋಟರಿ ಕ್ಲಬ್ ಹೊಳಲ್ಕೆರೆ ಇವರುಗಳ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ 80 ವರ್ಷ ಮತ್ತು ಮೇಲ್ಪಟ್ಟವರಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಶತಾಯುಷಿಗಳು ಸಿಗುವುದೇ ಅಪರೂಪ. 60 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರೀಕರೆಂದು ವಿಶ್ವಸಂಸ್ಥೆ ಪರಿಗಣಿಸಿದೆ. ವಯಸ್ಸು ಮತ್ತು ಅನಾರೋಗ್ಯದ ಕಾರಣ ಹಿರಿಯರು ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದರೆ ಕೆಲವೊಂದು ಆರೋಗ್ಯ ಸೂತ್ರಗಳನ್ನು ಪಾಲಿಸಬೇಕು. ದ್ವೇಷ, ಅಸೂಯೆಯನ್ನು ಬಿಟ್ಟರೆ ನೆಮ್ಮದಿಯಿಂದ ಇರಬಹುದು. ದೈಹಿಕ ದುರ್ಬಲತೆ ಸಹಜ. ಇದರಿಂದ ಮನಸ್ಸಿನ ಸ್ಪೂರ್ತಿಯನ್ನು ಕಳೆದುಕೊಳ್ಳಬಾರದು. ನಿವೃತ್ತಿಯ ನಂತರ ಜೀವನ ಮುಗಿಯಿತು ಎಂದು ಕೊರಗುವುದು ಬೇಡ ಎಂದು ಹಿರಿಯರಲ್ಲಿ ಮನವಿ ಮಾಡಿದರು.
ರೊ.ನಟರಾಜ್ ಮಾತನಾಡಿ ಐಷಾರಾಮಿ ಜೀವನಕ್ಕಾಗಿ ಹಣದ ಹಿಂದೆ ಬಿದ್ದವರು ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಂಡು ಹತಾಶರಾಗುತ್ತಾರೆ. ಯಾವುದೇ ಕಾರಣಕ್ಕೂ ಒತ್ತಡ ಮಾಡಿಕೊಳ್ಳಬೇಡಿ. ಇದ್ದುದರಲ್ಲಿಯೇ ಸಮಾಧಾನವಾಗಿ ಜೀವಿಸಿ ಎಂದು ಹಿರಿಯ ನಾಗರೀಕರಿಗೆ ಕರೆ ನೀಡಿದರು.
ಶತಾಯುಷಿ ಡಿ.ಹೆಚ್.ಪರಮೇಶ್ವರಪ್ಪ, ಮಾರುತಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್.ಬಿ.ರಾಜಪ್ಪ, ಗೌರವಾಧ್ಯಕ್ಷ ಎನ್.ಸಿ.ಎನ್.ರಾಜಪ್ಪ, ಕಾರ್ಯದರ್ಶಿ ಡಾ.ಎಸ್.ಪಿ.ರವಿ
ಇವರುಗಳು ವೇದಿಕೆಯಲ್ಲಿದ್ದರು.
ಹಾಲಪ್ಪ, ಎಲ್.ರಂಗಪ್ಪ, ಶಿವಲಿಂಗಣ್ಣ, ರಾಜು, ತಿಪ್ಪೇಸ್ವಾಮಿ, ಬಸವಂತಪ್ಪ, ಶಿವಕುಮಾರ್, ಷಡಾಕ್ಷರಪ್ಪ, ರೇವಣ್ಣ, ಸೋಮಶೇಖರಪ್ಪ, ಕುಬೇರಣ್ಣ, ರುದ್ರಪ್ಪ, ಲೋಕಣ್ಣ
ಮಹದೇವಪ್ಪ, ಓಂಕಾರಪ್ಪ, ನಂದೀಶಪ್ಪ, ರೇವಣ್ಣ, ಈಶ್ವರಪ್ಪ, ಹನುಮಂತಪ್ಪ, ಶಾಂತಪ್ಪ, ನಾಗಪ್ಪ, ಗೌರಮ್ಮ, ಸುಶೀಲಮ್ಮ, ಶಾಂತಮ್ಮ, ಓಂಕಾರಮ್ಮ, ಗಿರಿಜಮ್ಮ, ಸಾಕಮ್ಮ, ರುದ್ರಮ್ಮ ಇವರುಗಳನ್ನು ಸನ್ಮಾನಿಸಲಾಯಿತು.









