ಸುದ್ದಿಒನ್, ಬೆಂಗಳೂರು, ಜುಲೈ.04 : ‘ಒರಟ’ ಮತ್ತು ‘ಕೋರ’ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಒರಟ ಶ್ರೀ ನಿರ್ದೇಶನದ, ಬಹುನಿರೀಕ್ಷಿತ ‘ಶಬರಿ’ ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ತಲೆದಂಡ’ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಮತ್ತು ‘ಕಾಮನ್ ಮ್ಯಾನ್’ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು, ನಿರ್ದೇಶಕ ಒರಟ ಶ್ರೀ ಅವರಿಗೆ ಸಿನಿಮಾ ಮೇಲಿರುವ ಅತೀವ ಪ್ರೀತಿ ಮೆಚ್ಚುವಂತದ್ದು. ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿರುವ ಹಿನ್ನೆಲೆಯಲ್ಲಿ ಲಹರಿ ಸಂಸ್ಥೆಯು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದರು.
ಆರಂಭದಲ್ಲಿಯೇ ನಿರ್ದಿಷ್ಟ ಬಜೆಟ್ ಒಪ್ಪಂದದಡಿ ಸಿನಿಮಾ ಮುಗಿಸುವುದಾಗಿ ಭರವಸೆ ನೀಡಿದ್ದ ನಿರ್ದೇಶಕರು, ಅದಕ್ಕೆ ತಕ್ಕಂತೆಯೇ ‘ಶಬರಿ’ ಚಿತ್ರವನ್ನು ಅಚ್ಚುಕಟ್ಟಾಗಿ ರೂಪುಗೊಳಿಸಿರುವುದು ವಿಶೇಷವಾಗಿದೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ಗಳಾಗಿರುವ ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಎ ಜಂಟಿಯಾಗಿ ‘ಭಾರವಿ ಫಿಲಂಸ್’ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು.
ಒಂದು ಜೀಪು ಮತ್ತು ಪುಟ್ಟ ಹುಡುಗಿಯ ಸುತ್ತ ಸಾಗುವ ಒಂದಷ್ಟು ಆಸಕ್ತಿಕರ ಅಂಶಗಳನ್ನು ಮಾತ್ರ ಟೀಸರ್ ನಲ್ಲಿ ಅನಾವರಣಗೊಳಿಸಿರುವ ಚಿತ್ರತಂಡ, ನಿಜವಾದ ‘ಶಬರಿ’ ಯಾರೆಂಬ ಸಸ್ಪೆನ್ಸ್ ಅನ್ನು ಕಾಯ್ದಿರಿಸಿದೆ. ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮಿಸ್ಟ್ರಿ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ, ಇಡೀ ಕುಟುಂಬ ಕುಳಿತು ನೋಡಬಹುದಾದ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿದೆ.
ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ-ನಾಯಕಿಯರಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ‘ರಾಣಿ’ ಸೀರಿಯಲ್ ಖ್ಯಾತಿಯ ಬಾಲನಟಿ ಧನ್ವಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎಂ.ಕೆ ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಚಿತ್ರಕ್ಕೆ ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನವಿದ್ದು, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಹಾಗೂ ಕೆ. ಗಿರೀಶ್ ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.





















