ಸುದ್ದಿಒನ್, ಚೆನ್ನೈ, ಮೇ.06: ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಟಿವಿಕೆ (ತಮಿಳಿಗ ವೆಟ್ರಿ ಕಳಗಂ) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್, ಇಂದು ಚೆನ್ನೈನ ಲೋಕ ಭವನದಲ್ಲಿ (ರಾಜಭವನ) ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿದರು.
ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ವಿಜಯ್ ಅವರು ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ರಾಜ್ಯಪಾಲರಿಗೆ ಅಧಿಕೃತವಾಗಿ ಹಕ್ಕು ಮಂಡಿಸಿದರು. ಕಾಂಗ್ರೆಸ್ ಸೇರಿದಂತೆ ಇತರ ಮಿತ್ರಪಕ್ಷಗಳ ಬೆಂಬಲ ಪತ್ರಗಳನ್ನು ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಒಮ್ಮತದಿಂದ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಚೆನ್ನೈನಲ್ಲಿರುವ ಟಿವಿಕೆ ಪ್ರಧಾನ ಕಚೇರಿಗೆ ಭೇಟಿ ನೀಡಿ ವಿಜಯ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಗತ್ಯ ಸಂಖ್ಯಾಬಲದ ಕೊರತೆಯನ್ನೂ ನೀಗಿಸಲು ಕಾಂಗ್ರೆಸ್ ಸಿದ್ಧವಿರುವುದರಿಂದ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.
ಕಾಂಗ್ರೆಸ್ ಬೆಂಬಲದ ಬೆನ್ನಲ್ಲೇ ನಟ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿ, ಪ್ರಮಾಣವಚನ ಸ್ವೀಕಾರಕ್ಕೆ ಸಮಯ ಕೋರಲಿದ್ದಾರೆ. ಮೂಲಗಳ ಪ್ರಕಾರ, ನಾಳೆಯೇ ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಚೆನ್ನೈನ ಪ್ರತಿಷ್ಠಿತ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ನಾಳೆಯಿಂದ ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ಅವರ ಆಡಳಿತ ಅಧಿಕೃತವಾಗಿ ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಸಡಗರ ಮನೆಮಾಡಿದೆ.
#WATCH | Chennai: TVK chief Vijay meets Tamil Nadu Governor Rajendra Arlekar at the Lok Bhavan and stakes claim to form the Government in the State.
(Video: Lok Bhavan, Tamil Nadu) pic.twitter.com/wCwfKQDhzM
— ANI (@ANI) May 6, 2026




















